ಸಂಪನ್ನಗೊಂಡ ಅಗಡಿ ಶತಮಾನೋತ್ಸವ
ಪವಿತ್ರವನದಲ್ಲಿ ನಡೆದ ಧಾರ್ಮಿಕ ಕಲಾಪಗಳಲ್ಲಿ ಚತುರ್ವೇದ ಸಣಹಿತಾ ಪಾರಾಯಣ ಯಾಗ, ಅತಿರುದ್ರ ಹವನ, ಸಹಸ್ರ ಚಂಡಿ ಹವನ , ಭಾಗವತ , ರಾಮಾಯಣ ಸುಂದರ ಕಾಂಡ, ವಿಷ್ಣು ಸಹಸ್ರನಾಮ, ಚದಂಬರ ವರದ ಅಭಂಗ, ಶೇಷಾಚಲ ಚರಿತ್ರೆ , ಗುರು ಚರಿತ್ರೆ, ಮೊದಲಾದ ಪಾರಾಯಣಗಳು ವೇದ ಸಂಸ್ಕ್ರತಿಯ ಪುನರುತ್ಥಾನಕ್ಕೆ ನಡೆದ ಪ್ರಯತ್ನ .ಸಂಹಿತಾ ಪಾರಾಯಣದಲ್ಲಿ ತಮಿಳುನಾಡಿನಿಂದ ಬಂದ 93 ವರ್ಷದ ಪರಷುರಾಮ ಘನಪಾಠಿಗಳೂ ಸೇರಿದಂತೆ,ಶೇಷಾಚಲ ಸಂಸ್ಕ್ರತ ವೇದ ಪಾಠಶಾಲೆಯಲ್ಲಿ ಅಧ್ಯಯನ ಮಾಡಿದ ಸುಮಾರು 50 ವೇದ ಪಂಡಿತರು ಸೇರಿದ್ದಾರೆ.
ಅತಿರುದ್ರ ಸ್ವಾಹಾಕಾರ 40 ಹೋಮ ಕುಂಡಗಳಲ್ಲಿ ನಡೆದ ಮಹಾಯಾಗವಾಗಿದ್ದು ಸುಮಾರು 400 ವೈದಿಕರು ಇದರಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ ಶೇಷಾಚಲ ವೇದ ವಿದ್ಯಾಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಹೆಚ್ಚಿದ್ದರು.ಸಹಸ್ರ ಚಂಡಿಯಾಗದಲ್ಲಿ 10 ಹೋಮ ಕುಂಡಗಳಲ್ಲಿ 60 ಋತ್ವಿಜರು ಭಾಗವಹಿಸಿದ್ದಾರೆ. ಈ ಹೋಮದ ಜೊತೆ ಸಪ್ತಪತಿ ಪಾರಾಯಣವೂ ಜರುಗಿತು. ಸರ್ವ ವಿಘ್ನ ಪರಿಹಾರಕ ಮಹಾಗಣಪತಿಯ ಪ್ರೀತ್ಯರ್ಥವಾಗಿ ಆನಂದವನದಲ್ಲಿ ಲಕ್ಷಮೋದಕ ಹವನ ಜರುಗಿದ್ದು 40 ಋತ್ವಿಜರು ಈ ಹೋಮ ನೇರವೇರವೇರಿಸಿದ್ದಾರೆ.ಭಕ್ತಿ ಸಮರ್ಪಣೆಯ ಸರಳ ಯಾಗ ಇದಾಗಿದ್ದು ಇದರಲ್ಲಿ ಹೆಚ್ಚಿನ ವಿಪ್ರವಟುಗಳು ಪಾಲ್ಗೊಂಡಿದ್ದಾರೆ. ಹಾಗೆಯೇ ಉಡುಪಿಯ ಸುಬ್ರಮಣ್ಯ ಮಧ್ಯಸ್ಥ ಹಾಗೂ ನಾಲ್ಕೂರು ಕೃಷ್ಣಪ್ರಸಾದ ಬಳಗದವರಿಂದ ನಾಗಮಂಡಲ ಸೇವೆ ನಡೆಯಿತು. ಇದು ಉತ್ತರ ಕರ್ನಾಟಕದ ಭಕ್ತರಿಗೆ ವಿಶೇಷವಾಗಿತ್ತು.
ಈ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಾಂಸ್ಕ್ರತಿಕ ಕಂಪು ಹರಡಿತ್ತು.ವಿಶೇಷವಾಗಿ ಶಹನಾಯಿ ,ಸಿತಾರ್, ಹದಿನೆಂಟು ವಿಧದ ಸಂಯೋಜಿತ ವಾದ್ಯ ಗೋಷ್ಠಿ, ಹೆಸರಾಂತ ಸಂಗೀತ ವಿದುಷಿಯರಿಂದ ಗಾನ ಸುಧೆ ಹರಿಯಿತು. ಸಿಡಿ ಮದ್ದಿನ ಪ್ರದರ್ಶನವು ಆಯೋಜನೆ ಗೊಂಡಿತ್ತು.
ವೈಚಾರಿಕತೆ ಪ್ರೇರಿಪಿಸಿದ ವೇದಿಕೆ : ಶತಮಾನೋತ್ಸವ ಕಾರ್ಯಕ್ರಮದ ವೇದಿಕೆ ಹಲವು ವಿಚಾರ ಬಿತ್ತನೆಯ ಆವರಣವಾಯಿತು.ಶತಮಾನಕಂಡ ಋಷಿ ಸಂಸ್ಕೃತಿ ಬಿಂಬಿಸುವ ಸಂಸ್ಕೃತ ವೇದಪಾಠ ಶಾಲೆ,ಅದ್ಯಾತ್ಮಿಕ ಜ್ಞಾನ ಬಿತ್ತರಿಸಿದ ಸದ್ಭೋದ ಚಂದ್ರಿಕೆ ಮಾಸಪತ್ರಿಕೆ ಕುರಿತು ,ಹಾಗೂ ಎಪ್ಪತ್ತು ಸಂವತ್ಸರಕಂಡ ಅಧ್ಯಾತ್ಮಿಕ ಜೀವಿ ಚಿದಂಬರ ಚಕ್ರವರ್ತಿಗಳ ಸಮಾಜಮುಖಿ ಚಿಂತನೆಕುರಿತು ಶ್ರೀ ರಾಮಾಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ ಮಹಾಸ್ವಾಮಿಗಳು,ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು,ಪೇಜಾವರ ಶ್ರೀ ವಿಶ್ವೇಶ ತೀರ್ಥರು ಕೊಲ್ಲಾಪುರದ ವಿದ್ಯಾನರಸಿಂಹ ಭಾರತಿ ಸ್ವಾಮಿಗಳು,ತಡಸದ ವಲ್ಲಭ ಚೈತನ್ಯರು,ಹಂಪಿ ವಿದ್ಯಾರಣ್ಯ ಮಹಾಸ್ವಾಮಿಗಳು,ಶುಭ ನುಡಿದರು.
ಮಾಜಿ ಸಚಿವ ಸಿ ಎಂ ಉದಾಸಿ,ಪುಣೆ ವಿಶ್ವ ವಿದ್ಯಾಲಯದ ಪಿ.ಡಿ ಪಾಟೀಲ್,ಮಾಜಿ ಶಾಸಕ ಶಿವರಾಜ ಸಜ್ಜನ,ಶಿವಣ್ಣ ತಿಳುವಳ್ಳಿ,ನೆಹರು ಓಲೇಕಾರ ಮೊದಲಾದವರು ಅಗಡಿ ಆನಂದ ವನದ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ಆನಂದವನದ ಒಟ್ಟು ಸಭಾಕಾರ್ಯಕ್ರಮದಲ್ಲಿ ಗೋ ಸಮ್ಮೇಳನ ಮಹತ್ವದಾಗಿದ್ದು ರಾಮಚಂದ್ರಾಪುರ ಮಠ ಕೈಗೊಂಡಿರುವ ಗೋಸಂರಕ್ಷಣೆಯ ಅಭಿಯಾನದಲ್ಲಿ ಉತ್ತರ ಕರ್ನಾಟಕದ ಸಮ್ಮೀಲನಕ್ಕೆ ಮಾರ್ಗ ರೂಪಿಸಿದೆ.ಅಗಡಿ ಆನಂದವನದಲ್ಲಿ ಗೋಶಾಲೆ ಪ್ರಾರಂಭಕ್ಕೆ ಶ್ರೀಮಠದಿಂದ ಎಪ್ಪತ್ತು ಗೋವುಗಳ ಪ್ರಾರಂಭಿಕ ಕೊಡುಗೆ ನೀಡಿದ್ದಾರೆ.
ಕೊನೆಯ ದಿನ ನಡೆದ ಚಿದಂಬರ ಮೂರ್ತಿ ಚಕ್ರವರ್ತಿಗಳು ಭೀಮರಥ ಶಾಂತಿ ಕಾರ್ಯಕ್ರಮದಲ್ಲಿ ಶ್ರೀರಾಘವೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ನಿರಾಕಾರ ನಿರ್ಲೀಪ್ತತೆ ಇದ್ದಲ್ಲಿ ಜೀವನ ಸಾರ್ಥಕವಾಗಿ ಸಮಾಜಕ್ಕೆ ಮಹೋನ್ನತ ಕೋಡುಗೆ ಲಭಿಸುತ್ತದೆ. ಸಂತ ಶ್ರೇಷ್ಟರ ಅಂತರಂಗದ ಮೌಲ್ಯವನ್ನು ಅರಿಯುವುದು ಕಷ್ಟ,ಅವರ ಜೀವನವನ್ನು ಪ್ರೇಮಭಾವದಿಂದ ತೂಗಬೇಕು ತ್ಯಾಗದ ತೂಕ ,ಭೋಗದ ತೂಕಕ್ಕಿಂತ ಹೆಚ್ಚಿರುತ್ತದೆ ಎಂದರು. ಶಾಂತಿ ಕಾರ್ಯಕ್ರಮದ ನಿಮಿತ್ತ ಶ್ರೀ ಚಿದಂಬರರಿಗೆ ಮಂಗಲ ದ್ರವ್ಯಗಳಿಂದ ತೂಲಾಭಾರ ಮತ್ತು ನಾಗರಾಜ ಅಂಡೋಜಿ ಅವರಿಂದ ಬೆಳ್ಳಿಯ ಕೀರಿಟ ಸಮರ್ಪಣೆ ನಡೆಯಿತು. ಸಹಸಗ್ರಾರು ಭಕ್ತರು ಈ ಸಂದರ್ಭದಲ್ಲಿ ಸೇರಿದ್ದರು.