'ಅವನ ಕಥೆ - ಮೂಡಣದಿಂದ ಪಡುವಣದವರೆಗೆ'
ಪ್ರಸಿದ್ಧ ಸಂಗೀತ ನಿರ್ದೇಶಕರು ಹಾಗೂ ಸುಗಮ ಸಂಗೀತ ಕಲಾವಿದರಾಗಿದ್ದ ದಿ|| ಮಡಿಕೇರಿ ನಾಗೇಂದ್ರರವರ ನಿರ್ದೇಶನದಲ್ಲಿ ಪ್ರಾರಂಭಗೊಂಡ ಗುರುಕೃಪಾ ಸಂಗೀತ ಕೇಂದ್ರ, ಕರ್ನಾಟಕ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಪ್ರಕಾರಗಳಲ್ಲಿ ತರಬೇತಿಯನ್ನು ನೀಡುತ್ತಿದೆ.
2001ನೇ ಸಾಲಿನಲ್ಲಿ ಪ್ರಾರಂಭಗೊಂಡ ಗುರುಕೃಪಾ, ಶಾಸ್ತ್ರೀಯ ಸಂಗೀತ, ದೇವರನಾಮ, ಭಾವಗೀತೆ, ವಚನ ಗಾಯನ, ಭಜನ್, ಜನಪದ ಗೀತೆಗಳು, ಮುಂತಾದ ವಿಭಿನ್ನ ಪ್ರಕಾರಗಳ ತರಬೇತಿ ಕೇಂದ್ರವಾಗಿದ್ದು 2009ನೇ ಸಾಲಿನ ನಂತರದಿಂದ ಮಡಿಕೇರಿ ನಾಗೇಂದ್ರ ಮೆಮೋರಿಯಲ್ ಟ್ರಸ್ಟ್ ನ ಅಂಗವಾಗಿ ಒಂದು ಪರಿಪೂರ್ಣ ಸಂಗೀತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.
ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ತಕ್ಕ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯ ನಿರ್ಮಾಣವೇ ಗುರುಕೃಪಾ ಸಂಗೀತ ಕೇಂದ್ರದ ಉದ್ದೇಶ. ಕಳೆದ 14 ವರ್ಷಗಳಲ್ಲಿ ಗುರುಕೃಪಾ ಅನೇಕ ಪ್ರಯೋಗಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ, ಈ ಕಾರ್ಯಕ್ರಮಗಳ ಮೂಲಕ ಪ್ರತಿಭಾವಂತ ಕಲಾವಿದರಿಗೆ ವೇದಿಕೆಯನ್ನು ಹಾಗೂ ಹಿರಿಯ ವಿದ್ವಾಂಸರು, ಕವಿಗಳು, ಸಾಹಿತಿಗಳ ಸಮಕ್ಷಮದಲ್ಲಿದ್ದು ಅವರಿಂದ ಕಲಿಯುವ ಅವಕಾಶಗಳನ್ನೊದಗಿಸುತ್ತ ಸುಗಮ ಸಂಗೀತ ಕ್ಷೇತ್ರಕ್ಕೆ ತನ್ನ ಕಿರು ಸೇವೆಯನ್ನು ಸಲ್ಲಿಸುತ್ತ ಬಂದಿದೆ. [ನಮ್ಮ ಮನೆಯಲ್ಲಿ ಅಶ್ವಥ್ ಹಾಡಿದ್ದರು]
ಪ್ರಯೋಗಾತ್ಮಕ ಕಥನ ಸಂಗೀತ : ಇದೇ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಂತೆ ತಾ|| 09 ಜನವರಿ, 2016, ಶನಿವಾರ ಸಂಜೆ 06:15 ಗಂಟೆಗೆ ಬೆಂಗಳೂರಿನ ಬನಶಂಕರಿ 3ನೇ ಹಂತದಲ್ಲಿರುವ ಪದ್ಮಿನಿರಾವ್ ಪರಂಪರಾ ಕಲೆ ಮತ್ತು ಸಂಸ್ಕೃತಿ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಸಭಾಂಗಣದಲ್ಲಿ ಗುರುಕೃಪಾ ಸಂಗೀತ ಕೇಂದ್ರವು "ಅವನ ಕಥೆ - ಮೂಡಣದಿಂದ ಪಡುವಣದವರೆಗೆ" ಎಂಬ ಪ್ರಯೋಗಾತ್ಮಕ ಕಥನ ಸಂಗೀತ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ. ಸುಗಮ ಸಂಗೀತಾಧಾರಿತ ಈ ಕಾರ್ಯಕ್ರಮ ಸಂಗೀತ ಪ್ರಧಾನವಾಗಿದ್ದು ಜೊತೆಯಲ್ಲಿ ಕಥನವು ಪೂರಕವಾಗಿ ಮೂಡಿಬರುತ್ತ ಒಬ್ಬ ಮನುಷ್ಯನ ಇಡೀ ಜೀವನದ ಕಥೆಯನ್ನ ಆಯಾ ಹಂತಗಳಿಗೆ ಸರಿಹೊಂದುವ ಭಾವದೊಂದಿಗೆ ಚಿತ್ರಿಸುವ ಪ್ರಯೋಗವಾಗಿರುತ್ತದೆ.
ಬದುಕಿನ ಪಯಣದಲ್ಲಿ ಗಂಡು ಹಾಗೂ ಹೆಣ್ಣು ಇಬ್ಬರಿಗೂ ಸಮಾನವಾದ ಜವಾಬ್ದಾರಿಗಳು ಮತ್ತು ಕರ್ತವ್ಯಗಳು ಇರುತ್ತವೆ. ಈ ಕರ್ತವ್ಯಗಳನ್ನ ಪರಿಪಾಲಿಸುತ್ತ ಇವರಿಬ್ಬರೂ ತಮ್ಮ ಜೀವನದಲ್ಲಿ, ಮಗ/ಮಗಳು, ಸ್ನೇಹಿತ/ಸ್ನೇಹಿತೆ, ಪ್ರಿಯತಮ/ಪ್ರಿಯತಮೆ, ಗಂಡ/ಹೆಂಡತಿ, ಅಪ್ಪ/ಅಮ್ಮ, ತಾತ/ಅಜ್ಜಿ ಎಂಬಂತಹ ವಿವಿಧ ಪಾತ್ರಗಳನ್ನ ವಹಿಸುತ್ತಾರೆ. ಆದರೂ ಸಮಾಜದಲ್ಲಿ, ಕೆಲವು ಕಾರಣಗಳಿಂದಾಗಿ ಪುರುಷರಲ್ಲಿ ಭಾವನಾತ್ಮಕ ಚಿಂತನೆ ಕಡಿಮೆ ಎಂಬಂತಹ ಕಲ್ಪನೆ ಮನೆಮಾಡಿದೆ. [ಉತ್ಕಟ ಕನ್ನಡಾಭಿಮಾನಿ ವೀಣೆ ರಾಜಾರಾಯರು]
ಇದಕ್ಕೆ ಕಾರಣ ಬಹುಶಃ ತನ್ನ ಬಾಲ್ಯದಿಂದಲೇ "ಹೇಗ್ ಅಳ್ತ್ಯ ನೋಡು ಹುಡ್ಗಿ ಥರ" ಅಂತ ಅಮ್ಮ ಅಂದ ಆ ಮಾತುಗಳ ಶಕ್ತಿ ಇರಬಹುದು ಅಥವಾ ಆ ಅಮ್ಮನನ್ನ ಕಳೆದುಕೊಂಡು ಆತ ಅಳಲು ಹೊರಟಾಗ "ನೀನೆ ಧೈರ್ಯ ಕಳ್ಕೊಂಡ್ರೆ ಬೆರೆ ಎಲ್ರಿಗೂ ಸಮಾದಾನ ಹೇಳೋರು ಯಾರೊ?" ಅಂತ ಕೇಳಿದ ಬಂಧು ಬಳಗದವರ ಆ ಪ್ರಶ್ನೆಗಳ ಪ್ರಭಾವಿರಬಹುದು.
ಒಬ್ಬ ಪುರುಷನೂ ತನ್ನ ಜೀವನದಲ್ಲಿ ಅನೇಕ ತ್ಯಾಗಗಳಿಗೆ ಬಲಿಯಾಗುತ್ತ ಭಾವೋದ್ವೇಗಗಳಿಗೆ ಒಳಗಾಗುತ್ತಾನೆ. ಆದರೆ ಸಂಸಾರದ ಜವಾಬ್ದಾರಿಗಳು, ನಾಳೆಯ ಚಿಂತೆಗಳಿಂದಾಗಿ ಅದನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಇದರ ನಡುವೆಯೂ ಹೇಗೆ ತನ್ನ ಎಲ್ಲಾ ಪಾತ್ರಗಳಿಗೂ ನ್ಯಾಯವನ್ನೊದಗಿಸಿ ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ ಬೆಳೆದು ತನ್ನ ಜವಾಬ್ದಾರಿಗಳನ್ನು ಮುಗಿಸಿ, ತನ್ನ ಎಲ್ಲಾ ಭಾವನೆಗಳನ್ನು ಸಂಸಾರದ ಒಳಿತಿಗಾಗಿ ಅಡಗಿಸಿ ನಗುತ ಬಾಳಿನ ಸಂಜೆಯತ್ತ ಹೆಜ್ಜೆ ಹಾಕುತ್ತಾನೆ ಎಂಬುದನ್ನು ಹೊರತರುವುದೆ ಈ ವಿಭಿನ್ನ ಕಥನ ಸಂಗೀತ ಕಾರ್ಯಕ್ರಮ - "ಅವನ ಕಥೆ... ಮೂಡಣದಿಂದ ಪಡುವಣದವರೆಗೆ."
ಯಾರ್ಯಾರು ಬರಲಿದ್ದಾರೆ : ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ 'ಶುಭಮಂಗಳ' ಚಿತ್ರದಲ್ಲಿ ನಾಲೊಂದ್ಲಾ ನಾಕು ಹಾಡು ಬರೆದು ಖ್ಯಾತರಾದ ಎಂಎನ್ ವ್ಯಾಸರಾವ್, ಹಿರಿಯ ಕವಿಗಳು ಹಾಗೂ ಸಾಹಿತಿಗಳು, ಎಚ್ಎಸ್ ವೇಣುಗೋಪಾಲ್, ಹಿರಿಯ ಕೊಳಲು ವಾದಕರು ಹಾಗೂ ನಿರ್ದೇಶಕರು ಗೋಕುಲಂ ಸಂಗೀತ ಶಾಲೆ, ಡಾ ವಿ ನಾಗೇಂದ್ರ ಪ್ರಸಾದ್, ಖ್ಯಾತ ಸಾಹಿತಿಗಳು ಹಾಗೂ ಸಂಗೀತ ನಿರ್ದೇಶಕರು ಹಾಗೂ ಎಂ ನರಸಿಂಹನ್, ಪದಾಧಿಕಾರಿಗಳು, ಜ್ಯೋತಿ ಚಾರಿಟಬಲ್ ಟ್ರಸ್ಟ್, ಆಗಮಿಸಲಿದ್ದಾರೆ.