ಅನಂತ 'ಸಂಗೀತ ಸಾಧಕ' ಪಂಡಿತ್ ಅನಂತ್ ಭಾಗವತ್
ದೈವಿಕ ಕಲೆಗಳನ್ನು ಒದಗಿಸಿಕೊಳ್ಳುವುದು ಸುಲಭದ ಮಾತಲ್ಲ. ಶ್ರದ್ಧೆ, ಭಕ್ತಿ, ಪ್ರಾಮಾಣಿಕತೆ, ಬದ್ಧತೆ, ಏಕಾಗ್ರತೆ ಎಲ್ಲದರ ಜೊತೆಗೆ ತಾಯಿ ಶಾರದೆಯ ಅನುಗ್ರಹವೂ ಇದ್ದಾಗ, ವಿದ್ಯೆ ಪ್ರಾಪ್ತವಾಗುವುದೆಂಬುದು ಅನಾದಿಕಾಲದಿಂದಲೂ ಬೆಳೆದು ಬಂದಿರುವ ನಂಬಿಕೆ. ಈ ನಿಟ್ಟಿನಲ್ಲಿ ಗುರು ಶಿಷ್ಯ ಪರಂಪರೆಯಲ್ಲಿ ಸಾಧನೆ ಮಾಡಿದವರು ಅನೇಕರು. ಅದೇ ಸಾಲಿನಲ್ಲಿ ನಿಂತವರು ಹಿಂದೂಸ್ತಾನಿ ಗಾಯಕ, ಸಂಗೀತ ನಿರ್ದೇಶಕ ಗುರು ಪಂಡಿತ್ ಅನಂತ ಭಾಗವತ್.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕವಾಳೆ ಊರಿನ ಯಕ್ಷಗಾನ ಕುಟುಂಬದಲ್ಲಿ ಜನಿಸಿದ ಅನಂತ ಭಾಗವತರು ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಪರಮೇಶ್ವರ ಹೆಗಡೆಯವರ ಶಿಸ್ತು ಬದ್ಧ ಕ್ರಮ ಅನುಸರಿಸಿ ಸಂಗೀತಾಭ್ಯಾಸವನ್ನು ಮಾಡಿ, ಸಂಗೀತವನ್ನು ಬದುಕಾಗಿಸಿಕೊಂಡವರು. ವಿದ್ವತ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದದ್ದು ಮಾತ್ರವಲ್ಲದೇ ಆಕಾಶವಾಣಿಯ 'ಬಿ' ಗ್ರೇಡ್ ಕಲಾವಿದರು ಸಹಾ ಹೌದು.
ಸಾಧನಕೇರಿ ಸಂಸ್ಥೆಯಿಂದ ಹುತಾತ್ಮ ಯೋಧರಿಗಾಗಿ ಗಾಯನ ನಮನ
ಇವರು ಸ್ವಾಮಿ ಸುಖಬೋಧಾನಂದರ ನೇತೃತ್ವದಲ್ಲಿ ಭಾರತ ದೇಶಾದ್ಯಂತ ನಡೆಯುತ್ತಿರುವ ಭಗವದ್ಗೀತೆಯ ಉಪನ್ಯಾಸದ ಕಾರ್ಯಕ್ರಮದಲ್ಲಿ ಭಜನೆ, ಶ್ಲೋಕಗಳಿಗೆ ಸಂಗೀತ ನಿರ್ದೇಶನ ಹೀಗೆಯೇ ಹಲವಾರು ನಮೂನೆಯಲ್ಲಿ ತಮ್ಮ ಪ್ರತಿಭೆಯನ್ನು ಸಾದರ ಪಡಿಸುತ್ತಿರುವುದು Astha ಮತ್ತು Shankara Channelನಲ್ಲಿ ನಿರಂತರವಾಗಿ ಪ್ರಸಾರವಾಗುತ್ತಿದೆ. ಇವರೇ ಸಂಗೀತ ನಿರ್ದೇಶಿಸಿದ "ವಚನ ಸಾಹಿತ್ಯ" ಧ್ವನಿ ಮುದ್ರಿಕೆಯನ್ನು MSIL ಸಂಸ್ಥೆಯ ವತಿಯಿಂದ ಹೊರತರಲಾಗಿದೆ. ಮಾತ್ರವಲ್ಲದೇ ಹಲವಾರು ಭಜನ್ ಕ್ಯಾಸೆಟ್, ಧ್ವನಿ ಮುದ್ರಿಕೆಗಳನ್ನು ಬಿಡುಗಡೆಗೊಳಿಸಿದೆ.
ತಮ್ಮ ಗುರುಗಳಾದ ಪಂಡಿತ್ ಪರಮೇಶ್ವರ ಹೆಗಡೆಯವರ ಕಾರ್ಯಕ್ರಮಗಳಿಗೆ ಹಾರ್ಮೋನಿಯಂ ಸಾಥ್ ನೀಡಲು ದೂರದ ಅಮೆರಿಕಾಗೆ ಪ್ರಯಾಣ ಬೆಳೆಸಿದ್ದು ಮರೆಯಲಾಗದ ಕ್ಷಣ ಎನ್ನುತ್ತಾರೆ ಭಾಗವತರು. ಜೊತೆಗೆ ನಾಡಿನ ಖ್ಯಾತ ಕರ್ನಾಟಕ ಶಾಸ್ತ್ರೀಯ ಗಾಯಕರು ಹಾಗೂ ವಾದ್ಯಕಲಾವಿದರೊಂದಿಗೆ ಜುಗಲ್ ಬಂದಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೀಡಿದ್ದಾರೆ. ಮೈಸೂರು ದಸರಾ, ದೇವಗಿರಿ ಸಂಗೀತ ಸಭಾ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ರಾಮ ಸೇವಾ ಮಂಡಳಿ, ಗೋಕಾಕ್ ಇನ್ಸ್ಟಿಟ್ಯೂಟ್, ಭಾರತೀಯ ವಿದ್ಯಾಭವನ, ಧರ್ಮಸ್ಥಳದಲ್ಲಿ ನಡೆದ ಸರ್ವಧರ್ಮ ಸಾಹಿತ್ಯ ಸಮ್ಮೇಳನ, ಆಳ್ವಾಸ್ ನುಡುಸಿರಿ, ಆಳ್ವಾಸ್ ವಿರಾಸತ್ 2013, ಇನ್ನಿತರೆ ರಾಜ್ಯ, ರಾಷ್ಟ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆ ಇವರದು.
ನನ್ನ ಶಾಸ್ತ್ರೀಯ ಗಾಯನದ ಮೊದಲ ಗುರು ಮೊಹಮ್ಮದ್ ರಫಿ
ಉದಯ, ಚಂದನ, ಕಸ್ತೂರಿ, ಸಮಯ ಹಾಗೂ ಇನ್ನೂ ಹಲವಾರು ವಾಹಿನಿಗಳಲ್ಲಿ ನಿರಂತರವಾಗಿ ಶಾಸ್ತ್ರೀಯ ಹಾಗೂ ಭಜನ್ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಗುರುವಾಗಿ ಮಹತ್ವಾಕಾಂಕ್ಷಿ ವಿದ್ಯಾರ್ಥಿಯಾಗಿ ಕಳೆದ 30 ವರ್ಷಗಳಿಂದ ಸಂಗೀತ ಕಲಿಸುತ್ತಿದ್ದಾರೆ. ಕಳೆದ 30 ವರ್ಷಗಳಿಂದ "ಶ್ರೀರಾಮ ಭಕ್ತಾನುಗ್ರಹ ಸಂಗೀತ ವಿದ್ಯಾಲಯ"ದ ಹೆಸರಿನಲ್ಲಿ "ಗುರುಪೌರ್ಣಿಮಿ" ಕಾರ್ಯಕ್ರಮವನ್ನು ಮತ್ತು ಪ್ರತೀ ದಿನ ಸಂಗೀತ ತರಗತಿಗಳನ್ನು ನಡೆಸುತ್ತಾ ನಾಡಿಗೆ ಹಲವಾರು ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದ ಕೀರ್ತಿ ಇವರದು. ಇವರ ಸಾಧನೆಗೆ ಸಂದ ಗೌರವ, ಪುರಸ್ಕಾರಗಳು ಹಲವಾರು, ಅದರಲ್ಲಿ "ಭಾರತೀಯ ಸಂಸ್ಕೃತಿ ಪ್ರತಿಷ್ಠಾನ" ಗೌತಮರವಿಸಿ "ಕನಕ ಪ್ರಭೆ" ಎಂಬ ಬಿರುದನ್ನು ನೀಡಿದ್ದು ಹೆಮ್ಮೆಯ ವಿಚಾರ.
ಇಷ್ಟೆಲ್ಲಾ ಸಾಧನೆ ಮಾಡಿದ ಪಂಡಿತ್ ಅನಂತ ಭಾಗವತರಿಗೆ ಅಂತಾರಾಷ್ಟ್ರೀಯ ತಬಲಾ ವಾದಕರಾದ ಪಂಡಿತ್ ಸತೀಶ್ ಹಂಪಿಹೊಳಿರವರ ಅಧ್ಯಕ್ಷತೆಯಲ್ಲಿ, ಪಂಡಿತ್ ಮುದ್ದು ಮೋಹನ್ ಮತ್ತು ಡಾ//ಗುರುರಾಜ್ ಕರಜಗಿರವರ ನೇತೃತ್ವದಲ್ಲಿ ಪಂಡಿತ್ ಅನಂತ ಭಾಗವತರಿಗೆ ಶ್ರೀ ಗುರು ಸಮರ್ಥ ಸಂಗೀತ ವಿದ್ಯಾಲಯದ ವತಿಯಿಂದ, ವಿದ್ಯಾಲಯದ 16ನೇ ವಾರ್ಷಿಕೋತ್ಸವದ ಪ್ರಯುಕ್ತ, ಇದೇ ತಿಂಗಳ 28 ಭಾನುವಾರದಂದು ನಗರದ ಜೆ.ಎಸ್.ಎಸ್ ಸಭಾಂಗಣ, ಜಯನಗರ 8ನೇ ಬ್ಲಾಕ್ನಲ್ಲಿ "ಸಂಗೀತ ಸಾಧಕ" ಎನ್ನುವ ಬಿರುದನ್ನು ನೀಡಿ ಗೌರವಿಸಲಾಗುತ್ತದೆ. ಇವರ ಸಂಗೀತ ಕಾಯಕ ಮತ್ತು ಗುರುಶಿಷ್ಯ ಪರಂಪರೆ ಹೀಗೆ ಸಾಗುತ್ತಾ ನಾಡನ್ನು ಸಾಂಸ್ಕೃತಿಕವಾಗಿ ಭದ್ರಗೊಳಿಸಲಿ ಎಂಬುದೇ ನಮ್ಮೆಲ್ಲರ ಆಶಯ.
ಇವರಲ್ಲದರ ಜೊತೆಗೆ ಸಂಗೀತೋತ್ಸವದಲ್ಲಿ ಪಂಡಿತ್ ಅನಂತ ಭಾಗವತರಿಂದ ಶಾಸ್ತ್ರೀಯ ಗಾಯನ ಹಾಗೂ ಚಿ. ವೆಂಕಟ್ ನಿತಿನ್ ರವರಿಂದ ಸಹ ಶಾಸ್ತ್ರೀಯ ಗಾಯನ ಕಾರ್ಯಕ್ರಮಗಳು, ಮತ್ತು ವಿದ್ಯಾಲಯದ ವಿದ್ಯಾರ್ಥಿಗಳಿಂದ ಹಿಂದೂಸ್ತಾನಿ ತಬಲಾ ವಾದನ ಆಯೋಜಿಸಲಾಗಿದೆ. ಇವೆಲ್ಲ ಕಾರ್ಯಕ್ರಮಗಳಿದೆ ಸಂಗೀತ ಪ್ರೇಮಿಗಳು ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಶ್ರೀ ಗುರು ಸಮರ್ಥ ಸಂಗೀತ ವಿದ್ಯಾಲಯದ ಅಧ್ಯಕ್ಷರಾದ ವಿದ್ವಾನ್ ಅಮೃತೇಶ್ ಕುಲಕರ್ಣಿ ಮತ್ತು ವಿದ್ಯಾರ್ಥಿ ವೃಂದದ ಕೋರಿಕೆ.