‘ಸಂಗೀತ ಸಹೃದಯರ ಒಂದೆಡೆ ಸೇರಿಸಿ, ಹಾಡುವಾಸೆ’
ಬೆಂಗಳೂರು : ‘ನಗರದ ಗಾಯನ ಸಮಾಜದಲ್ಲಿ ಒಂದಿಷ್ಟು ಸಂಗೀತ ಪ್ರೇಮಿಗಳು ಕೂತು ಹಾಡಿಗೆ ಸ್ಪಂದಿಸುತ್ತಾ ಮೈಮರೆಯುತ್ತಾರಲ್ಲ , ಅಂಥಾ ಜನ ನನಗೆ ಬೇಕು. ಆ ಮನೋಭಾವನೆಯ ಒಂದಷ್ಟು ಜನರನ್ನು ಕಲೆಹಾಕಿ ಅವರ ಮುಂದೆ ಸಂಗೀತ ಪ್ರಸ್ತುತ ಪಡಿಸುವ ಸಂಪ್ರದಾಯವನ್ನು ಮತ್ತೆ ಬಲವಾಗಿ ಆಚರಣೆಗೆ ತರುವುದು ನನ್ನ ಆಸೆ’ ಎಂದು ಸಿತಾರ್ ಮಾಂತ್ರಿಕ ರವಿಶಂಕರ್ ನಗುನಗುತ್ತಾ ಹೇಳಿದರು.
ದಶಕದ ನಂತರ ಬೆಂಗಳೂರು ನಗರಕ್ಕೆ ಬಂದಿರುವ ರವಿಶಂಕರ್, ತಮ್ಮ ಶಿಷ್ಯೆ ಹಾಗೂ ಪುತ್ರಿ ಅನೂಷ್ಕಾ ಜತೆಯಲ್ಲಿ ಗುರುವಾರ ಸಂಜೆ ಚೌಡಯ್ಯ ಸ್ಮಾರಕ ಭವನದಲ್ಲಿ (ಮಾ.27) ಕಛೇರಿ ನೀಡಲಿದ್ದಾರೆ. ಸೊಸೈಟಿ ಫಾರ್ ಪ್ರಮೋಷನ್ ಆಫ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಅಂಡ್ ಕಲ್ಚರಲ್ ಅಮಾಂಸ್ಟ್ ಯೂತ್ (ಸ್ಪಿಕ್ಮೆಕೆ) ಈ ಕಛೇರಿಯನ್ನು ಆಯೋಜಿಸಿದೆ.
ಬೆಂಗಳೂರಲ್ಲಿರುವ ನನ್ನ ಹಳೆಯ ಅಭಿಮಾನಿಗಳೂ ಕಛೇರಿಗೆ ಬರುತ್ತಾರೆಂಬ ಭರವಸೆ ನನ್ನದು. ಆದರೆ, ಆ ಪೈಕಿ ಎಷ್ಟು ಜನ ಈಗ ಇದ್ದಾರೋ ಗೊತ್ತಿಲ್ಲ. ನನ್ನ ಮಗಳು ಮೆಚ್ಚಿನ ಶಿಷ್ಯೆಯೂ ಆಗಿರುವುದರಿಂದ, ಅವಳ ಜತೆ ಕಛೇರಿ ಕೊಡುವುದೇ ಒಂದು ಸೊಗಸಾದ ಅನುಭವ ಎಂದು ರವಿಶಂಕರ್ ಹೇಳಿದರು.
‘ನನ್ನ ಅಮ್ಮ ದಕ್ಷಿಣ ಭಾರತದವರು. ಅವರಿಂದ ಶಾಸ್ತ್ರೀಯ ಸಂಗೀತ ಕಲಿತ ನಂತರವೇ ಅಪ್ಪನಿಂದ ಸಿತಾರ್ ಕಲಿತದ್ದು. ಆಗ ನನಗೆ ಹದಿಮೂರು ವರ್ಷವಾಗಿತ್ತು. ದೆಹಲಿಯಲ್ಲಿ ಮೊದಲ ಕಛೇರಿ ಕೊಟ್ಟಿದ್ದೆ. ಮೈಯೆಲ್ಲಾ ಝುಂ ಎಂದಿದ್ದ ಅನುಭವವದು. ಮುಂದಿನ ಆಲ್ಬಂ ಅನ್ನು ಭಿನ್ನ ರೀತಿಯಲ್ಲಿ ತರುವುದು ನನ್ನ ಕನಸು. ಅದಕ್ಕಾಗಿ ಶ್ರಮಿಸುತ್ತಿದ್ದೇನೆ. ಅಪ್ಪ- ಅಮ್ಮನ ಸಹಕಾರವೂ ಸಾಕಷ್ಟಿದೆ’ ಎಂದು ಅನೂಷ್ಕ ಅನುಭವ ಹಾಗೂ ಕನಸನ್ನು ಹಂಚಿಕೊಂಡರು.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಸಾಹಿತ್ಯ
ಸೊಗಡು