ಕುಂದಗೋಳದಲ್ಲಿ ಸವಾಯಿ ಗಂಧರ್ವರ ಸ್ಮರಿಸಿ ಸಂಗೀತೋತ್ಸವ
ಹುಬ್ಬಳ್ಳಿ: ಕಿರಾನಾ ಘರಾನಾ ಪರಂಪರೆಯ ಖ್ಯಾತ ಗಾಯಕ ಸವಾಯಿ ಗಂಧರ್ವರ 50ನೇ ಪುಣ್ಯ ತಿಥಿಯ ಅಂಗವಾಗಿ ಕುಂದಗೋಳದಲ್ಲಿ ಮೂರು ದಿನಗಳ ಕಾಲ ವಿಶೇಷ ಸಂಗೀತೋತ್ಸವ ನಡೆಯಲಿದೆ.
ಗುರುವರ್ಯ ಸವಾಯಿ ಗಂಧರ್ವ ವಿಶ್ವಸ್ಥ ಸಂಸ್ಥೆಯ ಪೋಷಕಿ ಗಂಗೂಬಾಯಿ ಹಾನಗಲ್ ಹಾಗೂ ಅಧ್ಯಕ್ಷ ಎಂ. ಎಸ್. ಕಟಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಸೆಪ್ಟೆಂಬರ್ 30ರಂದು ಆರಂಭವಾಗುವ ಈ ಸಂಗೀತ ಉತ್ಸವದಲ್ಲಿ ದೇಶದ ವಿವಿಧ ಭಾಗಗಳ ಹೆಸರಾಂತ ಹಿಂದೂಸ್ತಾನಿ ಸಂಗೀತಗಾರರು ಭಾಗವಹಿಸುವರು.
ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ ಹಾಗೂ ಗಾಯಕಿ ಮಾಲಿನಿ ರಾಜೂರಕರ ಅವರನ್ನು ಈ ಸಂಗೀತೋತ್ಸವದಲ್ಲಿ ಸನ್ಮಾನಿಸಲಾಗುವುದು. ಈ ವರ್ಷ ಸವಾಯಿ ಗಂಧರ್ವರ ಸ್ಮರಣಾರ್ಥ ಸಂಗೀತೋತ್ಸವವನ್ನು ಆರಂಭಿಸಿದ ನಾನಾ ಸಾಹೇಬ ನಾಡಗೇರ ಅವರ 25ನೇ ಪುಣ್ಯತಿಥಿಯೂ ಹೌದು.
ಕುಂದಗೋಳದಲ್ಲಿ ನಡೆಯುವ ಸಂಗೀತೋತ್ಸವದಲ್ಲಿ ಡಾ. ಗಂಗೂಬಾಯಿ ಹಾನಗಲ್, ಪಂಡಿತ್ ಭೀಮ್ಸೇನ್ ಜೋಶಿ, ಪಂಡಿತ್ ಫಿರೋಜ್ ದಸ್ತೂರ ಸೇರಿದಂತೆ ಹಲವು ಹಿರಿಯ ಕಲಾವಿದರ ಕಚೇರಿಯನ್ನು ಆಯೋಜಿಸಲಾಗಿದೆ.
(ಇನ್ಫೋ ವಾರ್ತೆ)