ಕವಿತೆಗಳೆಲ್ಲಕ್ಕೂ ರಾಗ ಹಾಕುವುದು ಸಲ್ಲ, ಎಲ್ಲವೂ ಭಾವಗೀತೆಗಳಲ್ಲ- ಜಿಎಸ್ಎಸ್
ಬೆಂಗಳೂರು : ಭಾವಗೀತೆಗಳ ಕೆಸೆಟ್ ಮಾಡುವಾಗ ಕಾವ್ಯಗಳ ಆಯ್ಕೆ ಬಲು ಮುಖ್ಯ. ಎಲ್ಲಾ ಕವಿತೆಗಳನ್ನು ಹಾಡುತ್ತೇನೆ ಎನ್ನುವುದು ಭಂಡತನವಾಗುತ್ತದೆ ಎಂದು ಕವಿ ಜಿ.ಎಸ್.ಶಿವರುದ್ರಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಇತ್ತೀಚೆಗೆ ಪ್ರಸನ್ನ ಹಾಗೂ ದೀಪ್ತಿ ದಂಪತಿಗಳು ಹಾಡಿರುವ ಬೆಸುಗೆ ಕೆಸೆಟ್ಟನ್ನು ಬಿಡುಗಡೆ ಮಾಡಿ, ಜಿಎಸ್ಎಸ್ ಈ ಮಾತುಗಳನ್ನಾಡಿದರು. ಎಲ್ಲಾ ಕವಿತೆಗಳೂ ಭಾವಗೀತೆಗಳಲ್ಲ. ರಾಗ ಹಾಕಲು ಯೋಗ್ಯವಾದ ಕವಿತೆಗಳನ್ನು ಆರಿಸಿಕೊಂಡು, ಸಾಹಿತ್ಯಕ್ಕೆ ಧಕ್ಕೆ ಬರದಂತೆ ಅದನ್ನು ಗೀತೆಯಾಗಿಸಬೇಕು. ಇದು ಸುಗಮ ಸಂಗೀತಗಾರರ ಮುಖ್ಯ ಲಕ್ಷಣ ಎಂದರು.
ಸಾಹಿತ್ಯ ಸಮ್ಮೇಳನಗಳಲ್ಲಿ ಸುಗಮ ಸಂಗೀತಕ್ಕೆ ಪ್ರಾಶಸ್ತ್ಯ ನೀಡಲಾಗುತ್ತಿತ್ತು. ಆದರೆ ತುಮಕೂರು ಸಾಹಿತ್ಯ ಸಮ್ಮೇಳನದಲ್ಲಿ ಸುಗಮ ಸಂಗೀತವನ್ನು ನಿರ್ಲಕ್ಷಿಸಲಾಯಿತು. ಸುಗಮ ಸಂಗೀತದ ಪ್ರಾಧಾನ್ಯತೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಮನವರಿಕೆಯಾದಂತಿಲ್ಲ ಎಂದು ಇದೇ ಸಮಾರಂಭದಲ್ಲಿ ಹಾಜರಿದ್ದ ವೈ.ಕೆ.ಮುದ್ದುಕೃಷ್ಣ ಟೀಕಿಸಿದರು.
ಸುಗಮ ಸಂಗೀತಗಾರರಿಗೆ ಕೊಡುವ ಪ್ರಶಸ್ತಿ ಬಗ್ಗೆ ಟೀಕೆಯಿದೆ. ಇದನ್ನು ಹೋಗಲಾಡಿಸಲೆಂದೇ ಸಂತ ಶಿಶುನಾಳ ಷರೀಫ ಪ್ರಶಸ್ತಿ ಸ್ಥಾಪಿಸಲಾಗಿದೆ. ಷರೀಫರ ಹೆಸರು ಈ ಪ್ರಶಸ್ತಿಗೆ ಸಾಂಕೇತಿಕ ಅಷ್ಟೆ. ಆದರೆ ಕೆಲವರು ಷರೀಫರ ಗೀತೆಗಳನ್ನು ಹಾಡುವವರಿಗೆ ಮಾತ್ರ ಪ್ರಶಸ್ತಿ ಕೊಡಬೇಕು ಎನ್ನುತ್ತಿದ್ದಾರೆ. ಇದು ಸರಿಯಲ್ಲ ಎಂದು ಮುದ್ದುಕೃಷ್ಣ ಹೇಳಿದರು.
(ಇನ್ಫೋ ವಾರ್ತೆ)