ವೇದಮೂರ್ತಿ- ವಿಠ್ಠಲಮೂರ್ತಿ ಹುಡುಕಾಟ, ಜಗನ್ನಾಥ್ ಜಗ್ಗಾಟ
ಪ್ರಭಾತ್ನ ಜಗನ್ನಾಥ್ ಅನ್ನೋವ್ರನ್ನ ಎಂಎಸ್ಐಎಲ್ ಕೆಸೆಟ್ಟುಗಳ ಬಗ್ಗೆ ಕೇಳಿದೆ. ಆಕಾಶವಾಣಿನಲ್ಲಿರಬೇಕು ಅಂತ ಹೇಳಿ ಕೈತೊಳೆದುಕೊಂಡರು. ಆ ವೇಳೆಯಲ್ಲಿ ವೇದಮೂರ್ತಿ ಸಾಹೇಬ್ರು ಎಂಎಸ್ಐಎಲ್ಗೆ ವ್ಯವಸ್ಥಾಪಕ ನಿರ್ದೇಶಕರಾಗಿ ಬಂದರು. ಟೇಪ್ಗಳ ಬಗ್ಗೆ ಕೇಳಿದೆ. ನಮ್ಮ ಪುಣ್ಯಕ್ಕೆ ಅವರೂ ಹಾಡುಗಳನ್ನ ಕೇಳಿದ್ದರು. ಸಂಪರ್ಕಾಧಿಕಾರಿ ಅಶೋಕ್ ಕುಮಾರ್ ಎಂಬುವರನ್ನ ಕರೆದು, ಟೇಪ್ಗಳ ವಿಷಯ ವಿಚಾರಿಸಿದರು. ಅಶೋಕ್ ಕುಮಾರ್ ಹೇಳಿದರು- ಎಂಎಸ್ಐಎಲ್ ಬಳಿ ಇಲ್ಲ. ಆದರೆ ನಾನು ರೇಡಿಯೋದಿಂದ ಕೆಲವು ಹಾಡು ರೆಕಾರ್ಡ್ ಮಾಡಿಕೊಂಡಿದ್ದೇನೆ. ರೆಕಾರ್ಡ್ ಮಾಡಿಕೊಂಡಿದ್ದ ಒಂದಷ್ಟು ಕೆಸೆಟ್ಗಳನ್ನು ಅಶೋಕ್ ತಂದು ಕೊಟ್ಟರು. ನಾನು ಮೂರು ಕಾಪಿ ಹಾಕಿಸಿ, ವೇದಮೂರ್ತಿ ಅವರಿಗೊಂದು, ಅಶೋಕ್ ಅವರಿಗೊಂದು ಕೊಟ್ಟೆ. ಇನ್ನೊಂದನ್ನ ಸದಾ ನನ್ನ ಕಾರ್ ಸ್ಟೀರಿಯೋ ಕೇಳಿಸುತ್ತಿತ್ತು.
ಈ ಕೆಸೆಟ್ಟನ್ನ ಕೇಳಿದವರೆಲ್ಲಾ ನಂಗೊಂದು ಕಾಪಿ, ನಂಗೊಂದು ಕಾಪಿ ಅನ್ನಲು ಶುರುವಿಟ್ಟರು. ಸಾಲಿಗ್ರಾಮದ ಒಬ್ಬ ಗೆಳೆಯ ಅಂಗಲಾಚಿಕೊಂಡ. ಕೆಸೆಟ್ಗಳನ್ನ ಕೊಟ್ಟೆ. ಅವನ್ನು ತನಗೇ ಬೇಕೆಂದು ಹೇಳಿ ಒಯ್ದ. ನನ್ನ ಕಾರ್ ಸ್ಟೀರಿಯೋ ಬೇರೇ ಕೆಸೆಟ್ ಕೇಳಲೇ ಇಲ್ಲ !
ವೇದಮೂರ್ತಿ ತಿಂಗಳ ನಂತರ ಬಾ ಅಂದಿದ್ದರು. ಹೋದೆ. ಅಶೋಕ್ ಕುಮಾರ್ಗೆ ಒಂದು ತಿಂಗಳ ಗಡುವು ಕೊಟ್ಟು, ಪ್ರಭಾತ್ನ ಜಗನ್ನಾಥ್ ಅವರಿಂದ ಟೇಪ್ ಪಡೆಯುವಂತೆ ಸೂಚಿಸಿದರು. ಆದರೆ ಜಗನ್ನಾಥ್ ಕೈಗೆ ಸಿಗುತ್ತಿರಲಿಲ್ಲ. ಈ ನಡುವೆ ನಾನೂ ಬಿಸಿಯಾಗಿದ್ದೆ. ಅಷ್ಟರಲ್ಲಿ ವೇದಮೂರ್ತಿ ಅವರಿಗೆ ಟ್ರಾನ್ಸ್ಫರ್ ಆಯಿತು. ಆ ಜಾಗೆಗೆ ಐ.ಎಂ.ವಿಠ್ಠಲ ಮೂರ್ತಿ ಬಂದರು. ವೇದಮೂರ್ತಿ ನಮ್ಮ ಯೋಜನೆಯನ್ನು ವಿಠ್ಠಲ ಮೂರ್ತಿಗೆ ಹೇಳಿದರು. ವಿಠ್ಠಲ ಮೂರ್ತಿ ಥ್ರಿಲ್ ಆದರು.
ಅವರೂ ಜಗನ್ನಾಥ್ನ ಹಿಡಿಯಲು ಶತಾಯಗತಾಯ ಯತ್ನಿಸಿದರು. ನಾನು ರಾಮಚಂದ್ರ ಎಂಬುವರನ್ನು ಈ ಕೆಲಸಕ್ಕೆ ಹಚ್ಚಿದೆ. ಅವರೋ ವಿಠ್ಠಲ ಮೂರ್ತಿ- ಜಗನ್ನಾಥ್- ಲಹರಿ ಹೀಗೆ ಟ್ರಯಾಂಗಲ್ ಸುತ್ತಾಟ ಎಷ್ಟು ನಡೆಸಿದರೋ ಗೊತ್ತಿಲ್ಲ. ಕೊನೆಗೊಂದು ದಿನ ವಿಠ್ಠಲಮೂರ್ತಿ ಅವರಿಗೆ ಪಿತ್ತ ನೆತ್ತಿಗೇರಿತು. ಟೇಪ್ಗಳು ಸರ್ಕಾರದ ಸ್ವತ್ತು. ಅವು ಬೇಕೇ ಬೇಕು ಎಂದು ಜಗನ್ನಾಥ್ಗೆ ತಾಕೀತು ಮಾಡಿ ಹೇಳಿದರು. ಇಷ್ಟೆಲ್ಲಾ ರಾದ್ಧಾಂತ ಆದ ಮೇಲೆ ಈ ಯೋಜನೆಯನ್ನೇ ಕೈಬಿಡೋಣ ಅನ್ನಿಸಿತ್ತು.
ಸುರುಳಿಗಳು ಗೋಣಿಚೀಲ ಸೇರಿದ್ದವು : ಕೊನೆಗೆ ಜಗನ್ನಾಥ್ ಯಾವುದೋ ಗೋಣಿಚೀಲದಿಂದ ಐದು ಸುರುಳಿಗಳನ್ನು ಹುಡುಕಿ ತೆಗೆದರು. ಸುರುಳಿಗಳ ಮೇಲೆ ಫಂಗಸ್ ಸಂಸಾರ ಶುರುವಾಗಿತ್ತು. ಪ್ಲಾಸ್ಟಿಕ್ ಹೊದಿಕೆ ಆಗಲೇ ಹುಳಗಳ ಹೊಟ್ಟೆ ಸೇರಿತ್ತು. ಇದೊಂದು ಮಹತ್ವದ ಯೋಜನೆ. ಇದರಲ್ಲಿ ನಾವು ಯಶಸ್ವಿಯಾದರೆ ನಮ್ಮ ಕೆರ್ರಿಯರ್ನ ಪೂರ್ಣ ಯಶಸ್ಸು ದಕ್ಕಿದಂತೆ. ನಮ್ಮ ಕಂಪನಿಗೂ ಹೆಸರು ಬರುತ್ತದೆ ಅಂದೆ.
ಏಳು ಸಾವಿರ ಚಿಲ್ರೆ ಕೆಸೆಟ್ ತಂದಿದ್ದೇವೆ. ಈ ಮುದವನ್ನ ಯಾವ ಯೋಜನೆಯೂ ಕೊಡ್ಲಿಲ್ಲ
ಮೂವರು ಎಂಜಿನಿಯರನ್ನ ಸಂಪರ್ಕಿಸಿದೆ. ರಾಸಾಯನಿಕಗಳನ್ನ ಉಪಯೋಗಿಸಿ ಟೇಪು ಹಾಳಾಗದಂತೆ ಫಂಗಸ್ ತೆಗೆಸಿದೆ. ಸುರುಳಿಗಳನ್ನ ಜರಿ ಸೀರೆಯಂತೆ ನಾಜೂಕಾಗಿ ಬಿಡಿಸಿ ಹರಡಿಸಿದೆ. ಹತ್ತಿಯಿಂದ ಅದರ ಶುದ್ಧಿ ಶುರುವಾಯಿತು. ಈ ಕೆಲಸಕ್ಕೆ ಸುಮಾರು 3- 4 ತಿಂಗಳು ಹಿಡಿಯಿತು. ಎಲ್ಲಾ ಆದ ನಂತರ ಕೆಸೆಟ್ ಕೇಳಿದೆ. ಖುಷಿಯಾಯಿತು. ಅಲ್ಲಲ್ಲಿ ಸ್ವಲ್ಪ ಹಿಸ್ ಹಿಸ್ಗಳಿದ್ದವು. ಆದರೆ ಆಗಿನ ಮುದ್ರಣದಲ್ಲಿ ಅದು ಸಾಮಾನ್ಯವಾಗಿತ್ತು. ಕೊಂಚ ಎಡಿಟ್ ಮಾಡಿ, ಧ್ವನಿ ತಗ್ಗಿಸಿದೆ.
ಒಂದೊಂದು ಕೆಸೆಟ್ಗಳನ್ನೂ ಹದಕ್ಕೆ ತರಲು 5 ತಾಸು ಬೇಕಾಯಿತು. ಅಶೋಕ್ ಕುಮಾರ್ ಕೆಸೆಟ್ಟಿನ ಹಾಡುಗಳನ್ನೂ ತುಂಬಿಸಿದೆ. ಕೆಲವು ಹಾಡುಗಳ ದನಿಗೆ ಜೀವ ತುಂಬಲು ಒಂಬತ್ತು ಬಾರಿ ಹೆಣಗಬೇಕಾಯಿತು. ಆಗಿನ ರತ್ನಮಾಲ ಕಂಠವನ್ನೇ ನನಗೆ ಗುರ್ತಿಸಲಾಗಲಿಲ್ಲ. ಟಿ.ಎನ್. ಶ್ರೀನಿವಾಸನ್ ಅನ್ನೋ ಒಬ್ಬ ಹಾಡುಗಾರರ ಕಂಠ ಪಿ.ಕಾಳಿಂಗರಾವ್ ಥರಾನೇ ಇದೆ. ಅವರು ಮೈಸೂರಿನವರು ಅಂತ ಜನ ಹೇಳಿದರು. ಅವರನ್ನು ಪತ್ತೆ ಹಚ್ಚಲು ಇನ್ನೂ ನಮಗೆ ಸಾಧ್ಯವಾಗಿಲ್ಲ.
ನಮ್ಮ ಸಂಸ್ಥೆಯಿಂದ 7 ಸಾವಿರಕ್ಕೂ ಹೆಚ್ಚು ಕೆಸೆಟ್ಗಳನ್ನ ಹೊರ ತಂದಿದ್ದೇವೆ. ಆದರೆ ಇಂಥಾ ಒಂದು ಮುದವನ್ನ ಯಾವ ಯೋಜನೆಯೂ ಕೊಟ್ಟಿಲ್ಲ. ಕೊನೆಗೂ ಕೆಸೆಟ್ ತಂದೆವು...
ಸಮಾಧಾನದ ನಿಟ್ಟುಸಿರಿಡುವ ವೇಲು ಇನ್ನಷ್ಟು ಮಾತಾಡಿದರು. ಸುಗಮ ಸಂಗೀತಕ್ಕೆ ಕೀಬೋರ್ಡ್ ಹಾಗೂ ಸಿನಿಮಾ ಟಚ್ ಬರಲು ಒಂದು ವಿಧದಲ್ಲಿ ಗುಣಸಿಂಗ್ ಕಾರಣ. ಅವರು ಮೈಸೂರು ಅನಂತ ಸ್ವಾಮಿಯವರೊಡನೆ ಸೇರಿ ಕೆಲ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದರು....
ಮಾತು ಹರಿಯುತ್ತದೆ. ಕೆಸೆಟ್ಟುಗಳು ಮುಗಿಯೋದೇ ಇಲ್ಲ. 7 ಕೆಸೆಟ್ಗಳು (5 ಸಿಡಿ). ಒಂದು ವಿಧದಲ್ಲಿ ನಾನ್ಸ್ಟಾಪ್ ಹಿಟ್ಸ್. ರೀಮಿಕ್ಸ್ ಅಲ್ಲ. ಸೊಗಡು, ಮುಗ್ಧತೆಯ ಬಿಂಬಗಳವು. ಮಿಸ್ ಮಾಡಿಕೊಳ್ಳಬೇಡಿ. ಮನೆಗೆ ತನ್ನಿ.
ಕೆಸೆಟ್ಗಳ ಕೊಳ್ಳಲು ಹತ್ತಿರದ ಲಹರಿ ಕೆಸೆಟ್ ಮಾರಾಟ ಮಳಿಗೆಗೆ ಹೋಗಿ. ಇನ್ನಷ್ಟು ವಿವರ ಬೇಕಾದರೆ ಸಂಪರ್ಕಿಸಿ-
ಲಹರಿ
ಕೆಸೆಟ್
ಕಂಪನಿ
61,
ಗೌರಿ
ಚೇಂಬರ್ಸ್,
5ನೇ
ಮೇಯ್ನ್
ಚಾಮರಾಜ
ಪೇಟೆ,
ಬೆಂಗಳೂರು-
560
018
ಫೋನ್-
091
080
661
0333
ಫ್ಯಾಕ್ಸ್-
91-
080-
6612695
(ಕೃಪೆ : ಮುಖಪುಟ / ಸಾಹಿತ್ಯ ಸೊಗಡು