ಗುರುಶಿಷ್ಯ ಪರಂಪರೆಯನ್ನು ಉಳಿಸಿ- ಗಂಗೂಬಾಯಿ ಹಾನಗಲ್
ಯಲ್ಲಾಪುರ : ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ.. ಅಂತ ನಾವು ಗುರು ಶಿಷ್ಯ ಪರಂಪರೆಯನ್ನು ಹೊಗಳುತ್ತಲೇ ಬಂದಿದ್ದೇವೆ. ಬರಬರುತ್ತಾ ಶಿಕ್ಷಕರ ದಿನಾಚರಣೆಗೆ ಈ ಹೊಗಳುವಿಕೆ ಸೀಮಿತವಾಯಿತು. ಈಗ ಶಿಕ್ಷಕರ ದಿನವೂ ಚೆಂದದ ಪುಷ್ಪಗುಚ್ಛದೊಂದಿಗೆ ಮುಗಿದುಹೋಗುತ್ತದೆ. ಯಾವುದೋ ಭಾಷಣದಲ್ಲಿ ಭಾರತೀಯತೆಯನ್ನು ಹೊಗಳುವ ಜೋಶ್ನಲ್ಲಿ ನಮ್ಮ ಗುರು ಶಿಷ್ಯ ಪರಂಪರೆಯ ಉಲ್ಲೇಖವಾಗಬಹುದಷ್ಟೇ. .. ಹೀಗೆ ಗುರು ಶಿಷ್ಯ ಸಂಬಂಧ ನಮ್ಮ ಕೈ ಜಾರಿ ಹೋಗುತ್ತಿರುವ ಬಗ್ಗೆ ತೀರಾ ಬೇಜಾರು ಮಾಡಿಕೊಂಡಿದ್ದು ಖ್ಯಾತ ಸಂಗೀತ ವಿದುಷಿ ಡಾ.ಗಂಗೂಬಾಯಿ ಹಾನಗಲ್.
ಬುಧವಾರ ಹಾಸನಗಿ ಯ ಮಂಚಿಕೇರಿಯಲ್ಲಿ ಸಂಗೀತ ಅಕಾಡೆಮಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಶಾಲೆಗಳಲ್ಲಿ ಸಂಗೀತ ಶಿಕ್ಷಣವನ್ನು ಕಡ್ಡಾಯ ಮಾಡುವ ಮೂಲಕವಾದರೂ, ಗುರುಶಿಷ್ಯ ಪರಂಪರೆಯನ್ನು ಮತ್ತೆ ನೆಡಬೇಕು. ಕಾಲ ಕಳೆದಂತೆ ಬದುಕುವ ಶೈಲಿ ಬದಲಾಗುತ್ತಿದೆ. ಸಂಗೀತವನ್ನು ಇಷ್ಟಪಡುವುದು ಹಳೇ ಫ್ಯಾಷನ್ ಎನಿಸಿದೆ. ಮಂಚಿಕೆರೆಯಲ್ಲಿ ಸಂಗೀತ ವಾತಾವರಣವನ್ನು ಸೃಷ್ಠಿಸುವ ಗಣಪತಿ ಸಂಗೀತ ಅಕಾಡೆಮಿಯದು ಒಳ್ಳೇ ಉದ್ದೇಶ ಎಂದು ಗಂಗೂ ಬಾಯಿ ಅಕಾಡೆಮಿಯನ್ನು ಹೊಗಳಿದರು.
ನಮ್ಮ ಆಂತರಿಕ ವ್ಯಕ್ತಿತ್ವವನ್ನು ಚೆಂದಗೊಳಿಸುವುದು ಸಂಗೀತವಲ್ಲವೇ ಎಂದು ಆಧ್ಯಾತ್ಮದ ಮತನಾಡಿದವರು ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಕೆ. ಎಚ್. ಶ್ರೀನಿವಾಸ್. ಸಮಾರಂಭದಲ್ಲಿ ಗಂಗೂ ಬಾಯಿ ಹಾನಗಲ್ ಮತ್ತು ಕೃಷ್ಣ ಹಾನಗಲ್ ಅವರು ಪಂಡಿತ ಗಣಪತಿ ಭಟ್ ಮತ್ತು ಮಹದೇವಿ ಭಟ್ ಅವರನ್ನು ತಂಬೂರ ನೀಡಿ ಸನ್ಮಾನಿಸಿದರು.
ಹೊಸದಾಗಿ ಆರಂಭವಾದ ಸಂಗೀತ ಅಕಾಡೆಮಿಯ ಮೇಲಿರುವ ಜವಾಬ್ದಾರಿ ಬಹು ದೊಡ್ಡದು ಎಂದು ಸನ್ಮಾನಿತರಾದ ಗಣಪತಿ ಭಟ್ ಹೇಳಿದರು. ಸಮಾರಂಭಕ್ಕೆ ಬಂದ ಸಂಗೀತಾಭಿಮಾನಿಗಳು ಸಾವಿರದ ಲೆಕ್ಕದಲ್ಲಿದ್ದರು. ಸಭೆ ತಲೆದೂಗುವಂತೆ ಗಣಪತಿ ಭಟ್ ಒಂದರೆಡು ರಾಗಗಳನ್ನು ಹಾಡಿದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಸಾಹಿತ್ಯ
ಸೊಗಡು