ಮನೆಯಂಗಳದಲ್ಲೊಂದು ಸುಗಮ ಸಂಗೀತ ಸಂಭ್ರಮ
ಬೆಂಗಳೂರು : ಇತ್ತೀಚೆಗೆ ಮನೆಯಂಗಳದ ಮಾತುಕತೆ, ಮನೆಯಂಗಳದಿ ಸಂಗೀತ, ಮನೆಯಂಗಳದಲ್ಲಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳು ಬೆಂಗಳೂರಿನಲ್ಲಿ ಜನಪ್ರಿಯವಾಗುತ್ತಿವೆ. ಕನ್ನಡ ಸಂಸ್ಕೃತಿ ಇಲಾಖೆ ಮನೆಯಂಗಳದಲ್ಲಿ ಮಾತುಕತೆ ಸರಣಿ ಆರಂಭಿಸಿದ್ದರೆ, ಚಿತ್ರಕಲಾ ಅಕಾಡಮಿ ಮನೆಯಂಗಳದಿ ಚಿತ್ರಪ್ರದರ್ಶನ ನಡೆಸುತ್ತಿದೆ.
ಸರಕಾರದ ಇಲಾಖೆಗಳ ಈ ಜನಪ್ರಿಯ ಕಾರ್ಯಕ್ರಮದಿಂದ ಪ್ರಭಾವಿತವಾದ ಉಪಾಸನಾ ತಂಡ ಮನೆಯಂಗಳದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ಏರ್ಪಡಿಸಿ ಯಶಸ್ವಿಯಾಗಿದೆ. ಇತ್ತೀಚೆಗೆ ಉಪಾಸನಾ ತಂಡದ ವತಿಯಿಂದ ಮನೆಯಂಗಳ ಸರಣಿಯ ಮೂರನೇ ಕಾರ್ಯಕ್ರಮ ಬಸವನಗುಡಿಯ ಸಿ.ಎನ್. ಮೂರ್ತಿ ಅವರ ಮನೆಯಲ್ಲಿ ನಡೆಯಿತು.
ಮನೆಯಂಗಳದಿ ಗಾನಸುಧೆ ಹರಿಸಿದ್ದು ಗಾಯಕ ಶಿವಮೊಗ್ಗ ಸುಬ್ಬಣ್ಣ ಹಾಗೂ ತಂಡದವರು. ಸುಬ್ಬಣ್ಣ ಅವರೊಂದಿಗೆ ಯುವ ಗಾಯಕಿಯರಾದ ಎನ್. ಅಪರ್ಣ, ಟಿ.ಎಸ್. ನೇತ್ರ ಭಾವಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಶ್ರೋತೃಗಳನ್ನು ರಂಜಿಸಿದರು.
ಉಪಾಸನಾ ಸಂಸ್ಥೆಯ ಜೆ. ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಮನೆಯಂಗಳದಲ್ಲಿ ನಡೆದ ಈ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಗಾಯಕ ಅಪ್ಪಗೆರೆ ತಿಪ್ಪರಾಜು, ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಸಂಗೀತ ನಿರ್ದೇಶಕರಾದ ಶ್ರೀನಿವಾಸಮೂರ್ತಿ, ರಂಗ ಕಲಾವಿದ ಎ.ಎಸ್. ಮೂರ್ತಿ ಮೊದಲಾದವರು ಪಾಲ್ಗೊಂಡಿದ್ದರು.
(ಇನ್ಪೋವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು