ಒಂದಾನೊಂದು ಕಾಲದಲ್ಲಿ... ಪುಟಾಣಿ ಮನಸಿನ ಲಾಕ್ಡೌನ್ ನೆನಪುಗಳು...
ಈಗ ಬಿರುಗಾಳಿ ಎದ್ದಿರಬಹುದು. ಆದರೆ ಇದು ಶಾಶ್ವತವಲ್ಲ. ಅತ್ಯುತ್ತಮವಾದುದನ್ನು ಆನಂದಿಸಲು ನಾವು ಕೆಟ್ಟದ್ದನ್ನು ಎದುರಿಸಲೇಬೇಕು- ಕೊರೊನಾದಿಂದ ನಲುಗುತ್ತಿರುವ ಈ ಸಮಯದಲ್ಲಿ ತನ್ನ ಬರವಣಿಗೆಯಿಂದ ಸಕಾರಾತ್ಮಕ ಚಿಂತನೆ ಬಿತ್ತರಿಸುವ ಪ್ರಯತ್ನದಲ್ಲಿದ್ದಾಳೆ ಈ ಪುಟಾಣಿ.
"ಒಂದಾನೊಂದು ಕಾಲದಲ್ಲಿ 2020"-ಲಾಕ್ಡೌನ್ ನೆನಪುಗಳು ಎಂಬ ಪುಸ್ತಕವನ್ನು ಈಕೆ ಬರೆದಿದ್ದು, ಲಾಕ್ಡೌನ್ ಸಮಯದಲ್ಲಿ ನಡೆದ ಪುಟ್ಟ ಪುಟ್ಟ ಸಂಗತಿಗಳನ್ನೇ ಕಥೆಯನ್ನಾಗಿ ಹೆಣೆದಿದ್ದಾಳೆ. ಅಂದ ಹಾಗೆ ಈ ಪುಟಾಣಿ ಹೆಸರು ಮಾನ್ಯ ಹರ್ಷ. ಬೆಂಗಳೂರಿನ ಚಿತ್ರ ಹಾಗೂ ಹರ್ಷ ದಂಪತಿ ಮಗಳಾದ ಮಾನ್ಯಾಗೀಗ ಹತ್ತು ವರ್ಷ. 5ನೇ ತರಗತಿ ವಿದ್ಯಾರ್ಥಿನಿಯಾಗಿರುವ ಮಾನ್ಯ "ಕನ್ನಡದ ಕಿರಿಯ ಲೇಖಕಿ" ಎಂಬ ಪ್ರಶಂಸೆಯನ್ನೂ ಗಿಟ್ಟಿಸಿಕೊಂಡಿದ್ದಾಳೆ. ಇದೀಗ ಹೊಸದಾಗಿ ಲಾಕ್ಡೌನ್ ಕುರಿತ ಕಥೆಗಳನ್ನು ಬರೆದಿದ್ದಾಳೆ. ಮುಂದೆ ಓದಿ...
ಕನ್ನಡದ ಕಿರಿಯ ಕವಯಿತ್ರಿ ಎಂಬ ಹೆಗ್ಗಳಿಕೆ
ಒಂಬತ್ತನೇ ವಯಸ್ಸಿಗೇ ಕಿರಿಯ ಕವಯಿತ್ರಿ ಎಂದು ಕರೆಸಿಕೊಂಡಿರುವ ಮಾನ್ಯ ಈವರೆಗೂ ಮೂರು ಪುಸ್ತಕಗಳನ್ನು ಬರೆದಿದ್ದಾಳೆ. "ನೇಚರ್ ಅವರ್ ಫ್ಯೂಚರ್", "ನೀರಿನ ಪುಟಾಣಿ ಸಂರಕ್ಷಕರು" ಹಾಗೂ "ಒಂದಾನೊಂದು ಕಾಲದಲ್ಲಿ- ಲಾಕ್ಡೌನ್ ನೆನಪುಗಳು 2020" ಎಂಬ ಮೂರು ಪುಸ್ತಕಗಳನ್ನು ಬರೆದಿದ್ದಾಳೆ. ನೀರಿನ ಪುಟಾಣಿ ಸಂರಕ್ಷಕರು ಹಾಗೂ ಒಂದಾನೊಂದು ಕಾಲದಲ್ಲಿ ಪುಸ್ತಕಗಳನ್ನು ಇಂಗ್ಲಿಷ್ನಲ್ಲಿಯೂ ರಚಿಸಿದ್ದಾಳೆ.
ಗೂಗಲ್ ಪ್ಲೇ ಸ್ಟೋರ್ನಲ್ಲಿ ಕನ್ನಡ ಮಾಣಿಕ್ಯ ಪತ್ರಿಕೆ ಲಭ್ಯ
"ಅಜ್ಜಿಯೇ ನನಗೆ ಕಥೆ ಬರೆಯಲು ಸ್ಫೂರ್ತಿ"
ಅಜ್ಜಿ ನನಗೆ ಹೇಳುತ್ತಿದ್ದ ಕಥೆಗಳೇ ನನಗೆ ಕಥೆ ಬರೆಯುವಂತೆ ಪ್ರೇರೇಪಿಸಿದ್ದು. ನನಗೆ ಅಜ್ಜಿಯೇ ಸ್ಫೂರ್ತಿ ಎಂದು ಮಾನ್ಯ ಸಂತಸದಿಂದ ಹೇಳಿಕೊಳ್ಳುತ್ತಾಳೆ. ತನ್ನ ಆರನೇ ವಯಸ್ಸಿನಲ್ಲೇ ಮಾನ್ಯ ಕವನಗಳನ್ನು ರಚಿಸಲು ಆರಂಭಿಸಿದ್ದು, ಇದನ್ನು ನೋಡಿದ ಶಿಕ್ಷಕರು ಈಕೆಯ ಹವ್ಯಾಸಕ್ಕೆ ಪ್ರೋತ್ಸಾಹ ತುಂಬಿದರು. ಅಂದಿನಿಂದ ಬರೆಯುವುದು ಮಾನ್ಯಗೆ ನೆಚ್ಚಿನ ಹವ್ಯಾಸವಾಯಿತು. 2018ರ ಕಿಡ್ಸ್ ವರ್ಲ್ಡ್ ಅಂತಾರಾಷ್ಟ್ರೀಯ ಸಣ್ಣ ಕಥೆಗಳ ಪ್ರಶಸ್ತಿಗೂ ಮಾನ್ಯ ಪಾತ್ರಳಾಗಿದ್ದು, ಈಕೆ ರಚಿಸಿದ, "ಥಾಂಕ್ಸ್ ಗಿವಿಂಗ್" ಸಣ್ಣ ಕಥೆ ಪ್ರಶಂಸೆ ತಂದುಕೊಟ್ಟಿತ್ತು.
ದಾಖಲೆ ಬರೆದ ಪುಸ್ತಕಗಳು
ಈಕೆಯ ಮೊದಲ ಕನ್ನಡ ಕಥೆ "ನೀರಿನ ಪುಟಾಣಿ ಸಂರಕ್ಷಕರು" ಮಕ್ಕಳ ಕಾದಂಬರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಸೇರಿದ್ದು, "ಕನ್ನಡದಲ್ಲಿ ಪುಸ್ತಕ ಬರೆದಿರುವ ಕಿರಿಯ ಲೇಖಕಿ" ಎಂಬ ಬಿರುದನ್ನು ತಂದುಕೊಟ್ಟಿದೆ. ಮಾನ್ಯ ಬರೆದ "ನೇಚರ್ ಅವರ್ ಫ್ಯೂಚರ್" ಪುಸ್ತಕ ಏಷಿಯಾ ಬುಕ್ ಆಫ್ ರೆಕಾರ್ಡ್ಸ್ , ಇಂಡಿಯಾ ಬುಕ್ ಆಫ್ ರೆಕಾರ್ಡ್ಸ, ವಜ್ರ ವರ್ಲ್ಡ್ ರೆಕಾರ್ಡ್ ವತಿಯಿಂದ ಮೂರು ಬಿರುದುಗಳನ್ನು ತಂದುಕೊಟ್ಟಿತ್ತು.
ಒಂದಾನೊಂದು ಕಾಲದಲ್ಲಿ... ( 2020 ಲಾಕ್ಡೌನ್ ಡೈರೀಸ್) ಈ ಪುಟ್ಟ ಲೇಖಕಿಯ ಎರಡನೇ ಕನ್ನಡ ಕೃತಿ. ಹದಿನಾರು ಪುಟ್ಟ ಪುಟ್ಟ ಕಥೆಗಳನ್ನು ಈ ಪುಸ್ತಕ ಒಳಗೊಂಡಿದ್ದು, ಇದರಲ್ಲಿ ಕೊರೊನಾ ವೈರಸ್ ಅನ್ನು ವಿಲನ್ನಂತೆ ಹಾಗೂ ಅದರ ವಿರುದ್ಧ ಹೋರಾಡುವ ಮಾನವನ ಧೈರ್ಯವನ್ನು ಸೂಪರ್ ಹೀರೋಗೆ ಹೋಲಿಸಿ ಕಥೆ ಹೆಣೆಯಲಾಗಿದೆ.
ಕೃತಿ-ಕಾರ್ಯದಲ್ಲಿ ಪರಿಸರ ಪ್ರೀತಿ
ತನ್ನ ಪರಿಸರ ಪ್ರೀತಿಯನ್ನು ಮಾನ್ಯ ಪುಸ್ತಕದಲ್ಲಿ ಮಾತ್ರವಲ್ಲ, ತನ್ನ ಕಾರ್ಯಗಳಲ್ಲಿಯೂ ಪಸ್ತುತಪಡಿಸಿದ್ದಾಳೆ. ಮಾರ್ಚ್ 22, 2018ರಲ್ಲಿ ವಿಶ್ವ ಜಲ ಸಂರಕ್ಷಣಾ ದಿನಾಚರಣೆ ಅಂಗವಾಗಿ ವಾಕಥಾನ್ ಆಯೋಜಿಸಿ ಸ್ನೇಹಿತರೊಂದಿಗೆ "ನೀರು ಉಳಿಸಿ" ಆಂದೋಲನ ನಡೆಸಿದ್ದಳು. ಜೆ.ಪಿ.ನಗರದ ಪುಟ್ಟೇನಹಳ್ಳಿ ಕೆರೆಗೆ ಕಾಲ್ನಡಿಗೆಯಲ್ಲಿ ತೆರಳಿ, ಗಿಡಗಳನ್ನು ನೆಟ್ಟು ಪರಿಸರ ಪ್ರಜ್ಞೆ ಮೂಡಿಸಿದ್ದಳು ಮಾನ್ಯ ಹರ್ಷ. ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತಿ ಮೂಡಿಸಿರುವ ಮಾನ್ಯ, ಪರಿಸರ ರಕ್ಷಣೆ ಕುರಿತು ಹಾಡನ್ನೂ ರಚಿಸಿದ್ದಳು.
ಪುಸ್ತಕ ಬರೆಯುವುದನ್ನು ಹೊರತುಪಡಿಸಿ ಮಾನ್ಯಗೆ ಹಲವು ಹವ್ಯಾಸಗಳಿವೆ. ಕಲೆ, ಕ್ರೀಡೆ ಬಗ್ಗೆ ಒಲವಿರುವ ಮಾನ್ಯ ಹಾಡು, ಕುಣಿತ, ಈಜು ಕಲಿತಿದ್ದಾಳೆ. ಕರಾಟೆ ಹಾಗೂ ಟೆಕ್ವಾಂಡೋ ವಿದ್ಯೆಯನ್ನೂ ಅಭ್ಯಾಸ ಮಾಡಿದ್ದಾಳೆ.