ತೇಜಸ್ವಿನಿ ಹೆಗಡೆ ಕಥಾಸಂಕಲನ ಬಿಡುಗಡೆಗೆ ಬರ್ತೀರಿ ತಾನೆ?
ಸದಾ ಕನ್ನಡ ಅಕ್ಷರಗಳನ್ನು ಪೋಣಿಸುತ್ತಲೇ ಸಾಹಿತ್ಯ ಲೋಕದಲ್ಲಿ ತಮ್ಮದೇ ಅಸ್ತಿತ್ವವನ್ನು ಕಂಡುಕೊಂಡಿರುವ ಸೃಜನಶೀಲ ಬರಹಗಾರ್ತಿ ತೇಜಸ್ವಿನಿ ಅವರು ಕಥಾಸಂಕಲನ 'ಸಂಹಿತಾ' ಡಿಸೆಂಬರ್ 20ರ ಭಾನುವಾರದಂದು ಬೆಳಿಗ್ಗೆ 10.30ಕ್ಕೆ ಬೆಳಕು ಕಾಣುತ್ತಿದೆ.
ಕಾರ್ಯಕ್ರಮದ ಅಧ್ಯಕ್ಷತೆ ಖ್ಯಾತ ಕಥೆಗಾರ, ವಿಮರ್ಶಕ ಎಸ್ ದಿವಾಕರ್ ಅವರು ವಹಿಸುತ್ತಿದ್ದರೆ, ಪತ್ರಕರ್ತ ಮತ್ತು ಕಥೆಗಾರ ಗಿರೀಶ್ ರಾವ್ (ಜೋಗಿ) ಅವರು ಕಥಾಸಂಕಲನವನ್ನು ಅನಾವರಣ ಮಾಡಲಿದ್ದಾರೆ. ಖ್ಯಾತ ವಿಮರ್ಶಕ ಕೆ. ಸತ್ಯನಾರಾಯಣ ಅವರು ಕೃತಿಯ ಪರಿಚಯ ಮಾಡಿಕೊಡಲಿದ್ದಾರೆ.
ಸ್ಥಳ : ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನ, ಬಿಎಂಶ್ರೀ ಕಲಾಭವನ, 3ನೇ ಮುಖ್ಯರಸ್ತೆ, ಎನ್ಆರ್ ಕಾಲೋನಿ, ಬಸವನಗುಡಿ, ಬೆಂಗಳೂರು. ಪ್ರಕಾಶಕರು : ಎಸ್ ರಾಮನಾಥ್ (ತೇಜು ಪ್ರಕಾಶನ). ಕುಮಾರಿ ನಿತ್ಯಾ ಬಿ.ಜಿ. ಅವರಿಂದ ಹಾಡುಗಳು ಮನರಂಜಿಸಲಿದ್ದರೆ, ಅದಕ್ಕೂ ಮೊದಲು ಲಘು ಉಪಹಾರ ಜಠರವನ್ನು ತುಂಬಲಿದೆ. [ರಸ್ತೆ ಗುಂಡಿಗಳ ಜೊತೆ ಢೋಂಗಿ ಜ್ಯೋತಿಷ್ಯವನ್ನೂ ಮುಚ್ಚಿ!]
ಸಂಹಿತಾ ಕಥಾಸಂಕಲನದಲ್ಲಿ ಪ್ರಕಟವಾಗಿರುವ, ಹೆಣ್ಣಿನ ಸಂವೇದನೆಯನ್ನು ಅತ್ಯಂತ ಸೂಕ್ಷ್ಮವಾಗಿ ಬಿಂಬಿಸುವ 'ಜೀವತಂತು' ಎಂಬ ಕಥೆಯನ್ನು ಇಲ್ಲಿ ನೀಡುತ್ತಿದ್ದೇವೆ. ಓದಿರಿ, ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಭಾನುವಾರ ಬಿಡುವು ಮಾಡಿಕೊಂಡು ಖಂಡಿತ ಬನ್ನಿರಿ. [ಜೀವತಂತು ಕಥೆ ತಪ್ಪದೆ ಓದಿ]
ಪುಸ್ತಕದ ಬೆನ್ನುಡಿಯಲ್ಲಿ ಖ್ಯಾತ ಕಥೆಗಾರ ಪ್ರಮಶೇಖರ ಅವರು ಹೀಗೆ ಬರೆದಿದ್ದಾರೆ : "ಬದುಕಿನ ವಿವಿಧ ಮುಖಗಳನ್ನು ಬಿಂಬಿಸುತ್ತಾ, ಆ ಹಾದಿಯಲ್ಲಿ ಪಾತ್ರಗಳನ್ನು ಪೌರಾಣಿಕ ಕಾಲದಿಂದ ಹಿಡಿದು ಸ್ವಾತಂತ್ರ್ಯ ಪೂರ್ವ ದಿನಗಳ ಮೂಲಕ ಈ ಗಳಿಗೆಯವರೆಗಿನ ದೀರ್ಘಕಾಲದ ದಾರಿಯಲ್ಲಿ ಕೈಹಿಡಿದು ನಡೆಸಿಕೊಂಡು ಶಿರಸಿ, ಕುಮಟಾ, ಮಂಗಳೂರು, ಬೆಂಗಳೂರುಗಳಲ್ಲಿ ಸುತ್ತಾಡಿಸುತ್ತಾ ಸಾಗುವ ಕಥೆಗಾರ್ತಿ ಕಂಡ ಬದುಕಿನ ವೈಶಾಲ್ಯ ಬೆರಗು ಹುಟ್ಟಿಸುತ್ತದೆ."
ಗೆಳತಿಯ ಕುರಿತು ಜಯಲಕ್ಷ್ಮೀ ಪಾಟೀಲ್ : ಈ ಹೊತ್ತಿಗೆಯಲ್ಲಿ ನಡೆವ ಚರ್ಚೆಯನ್ನು ತಮಗೆಲ್ಲ ತಪ್ಪದೆ ತಲುಪಿಸುವ ವರದಿಗಾರ್ತಿ, ಜನದನಿಯ ಸಕ್ರಿಯ ಸದಸ್ಯೆ, ಎರಡು ಕವನ ಸಂಕಲನ ಮತ್ತೀಗ ಬಿಡುಗಡೆಗೊಳ್ಳುತ್ತಿರುವ ಎರಡನೇಯ ಕಥಾ ಸಂಕಲನದ ಬರಹಗಾರ್ತಿ, ಬದುಕನ್ನು ತೀವ್ರವಾಗಿ ಪ್ರೀತಿಸುವ, ಇನ್ನೊಬ್ಬರಿಗೆ ಕೇಡನ್ನು ಬಯಸದ, ಅನ್ಯಾಯವನ್ನು ಸಹಿಸದ, ನೇರ ಮಾತಿನ, ಮಗು ಮನಸಿನ ನನ್ನ ಮೆಚ್ಚಿನ ತೇಜಸ್ವಿನಿಯವರ ಈ 'ಸಂಹಿತಾ' ಕಥಾ ಸಂಕಲನದ ಬಿಡುಗಡೆಗೆ ಈ ಭಾನುವಾರದಂದು ನೀವೆಲ್ಲ ಬರಲೇಬೇಕು. ಬರ್ತಿದೀರಲ್ವಾ, ಬನ್ನಿ ಪ್ಲೀಸ್. ಒಟ್ಟಿಗೆ ತಿಂಡಿ ತಿಂದು, ಕಾಫಿ ಕುಡಿದು, ಜೋಗಿ, ಎಸ್. ದಿವಾಕರ್ ಮತ್ತು ಕೆ ಸತ್ಯನಾರಾಯಣ ಅವರುಗಳ ಅರ್ಥವತ್ತಾದ ಮಾತುಗಳನ್ನು ಕೇಳಿ, ಚೆಂದದ ಕತೆಗಳುಳ್ಳ 'ಸಂಹಿತಾ' ಜೊತೆ ನಮ್ನಮ್ಮ ಮನೆಗೆ ಮರಳೋಣ. [ಬ್ಲಾಗ್ ಜಗತ್ತೊಳಗೊಂದು ವಿಕೃತ ಮನಸ್ಸಿದೆ, ಜೋಪಾನ!]