ವಿಮರ್ಶಕ ವಿಜಯರಾಘವನ್ ಪರಿಚಯ
ಆರ್.ವಿಜಯರಾಘವನ್ (ಜ.15.08.1956) ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯವರು. ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಕೋಲಾರದಲ್ಲಿ ನೆಲೆಸಿದ್ದಾರೆ.
ಆರು ಸಂಕಲನಗಳಲ್ಲಿ ಕವಿತೆ, ಮೂರು ಸಂಕಲನಗಳಲ್ಲಿ ಕಥೆ, ನಾಲ್ಕು ಕಾದಂಬರಿ, ಒಂದು ಮಕ್ಕಳ ಕತೆ-ಕವಿತೆಗಳ ಸಂಕಲನ, ಒಂದು ಸಾಂಸ್ಕೃತಿಕ ಲೇಖನಗಳ ಸಂಕಲನ ಪ್ರಕಟಿಸಿರುವ ವಿಜಯರಾಘವನ್ ಇಂಗ್ಲಿಷ್ ನಿಂದ ಕನ್ನಡಕ್ಕೆ ಗುನ್ನಾರ್ ಏಕಲೋ, ರಿಲ್ಕ್, ಖಲೀಲ್ ಗಿಬ್ರಾನ್, ನಜೀಂ ಹಿಕ್ಮತ್, ವಾಸ್ಕೊ ಪೋಪ, ಲೋರ್ಕ, ಹಫೀಝ್, ಫರಿದುದ್ದಿನ್ ಅತ್ತಾರ್, ಬುಲ್ಹೇ ಷಾ ಮುಂತಾದವರ ಕಾವ್ಯವನ್ನೂ ದಾವ್ ದಿ ಜಿಂಗ್, ಮಹಾಪರಿನಿಬ್ಬಾನ ಸುತ್ತ, ಸಾಂಗ್ ಆಫ್ ಸಾಲೋಮನ್ ಮುಂತಾದ ಕಾವ್ಯಗಳನ್ನೂ ಅನುವಾದ ಮಾಡಿದ್ದಾರೆ. ಅಲ್ಲದೆ ಪ್ರಬಂಧ, ಕೃತಿಪರಿಶೀಲನೆಗಳೂ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತೊಡಗಿಕೊಂಡಿರುವ ಇವರ ಈಚಿನ ಕೃತಿಗಳು ಬೆಂಗಳೂರಿನ ವಿಹಾ ಪುಸ್ತಕ ಹೊರತಂದಿರುವ ಹಫೀಝ್ ನ ಅನುವಾದ ಮತ್ತು ಮುದ್ದಣ ಪ್ರಶಸ್ತಿ ಪಡೆದ ಅನುಸಂಧಾನ ಎಂಬ ಕವನ ಸಂಕಲನ,
ಎಸ್ಎಲ್ಎನ್ ಪ್ರಕಟಿಸಿದ ಈವರೆಗಿನ ಕಥೆಗಳ ಸಂಕಲನ ನೇಯ್ಗೆ, ಕಾದಂಬರಿ - ಗೂಡು ದೀಪವು ಆರಿದೆದೆಯಲ್ಲಿ ಮತ್ತು ಮಕ್ಕಳ ಕಥೆ-ಕವಿತೆಗಳ ಸಂಕಲನ ಮುಸುಡಿ ಸುಟ್ಟ ತೋಳ. ಜೆಲಾಲುದ್ದಿನ್ ರೂಮಿ ಮತ್ತು ಉಮರ್ ಖಯ್ಯಾಂನ ಹೊಸ ಅನುವಾದ - ಪ್ರಕಟಣೆಗೆ ಸಿದ್ಧವಾಗಿರುವ ಕೃತಿಗಳು. ಇವರ ಅನೇಕ ಬರಹಗಳು ಕನ್ನಡದ ಪತ್ರಿಕೆಗಳಲ್ಲಿ ಮ್ಯೂಸ್ ಇಂಡಿಯಾ, ಅವಧಿ, ಕೆಂಡಸಂಪಿಗೆ, ಸಂಪದ, ಸಂವಾದ ಮುಂತಾದ ಇ-ಮ್ಯಾಗಝಿನ್ ಗಳಲ್ಲಿ ಪ್ರಕಟವಾಗಿವೆ.
ಅನೀವನ್ ಎಡ್ಜಸ್ ಎಂಬ ಇಂಗ್ಲಿಷ್ ಕಾದಂಬರಿ (ಯೇತಿ ಬುಕ್ಸ್, ಕಲ್ಲೀಕೋಟೆ) ಪ್ರಕಟಿಸಿರುವ ವಿಜಯರಾಘವನ್ ಡಾ. ಎಲ್ ಬಸವರಾಜು ಅವರ ಅಲ್ಲಮನು ಮೈಮೇಲೆ ಬಂದಾಗ ಕೃತಿಯು ಒಳಗೊಂಡ ಅಲ್ಲಮಪ್ರಭುದೇವರ 100 ಬೆಡಗಿನ ವಚನಗಳನ್ನೂ ಅವುಗಳ ಕವನವ್ಯಾಖ್ಯಾನವನ್ನೂ ಪೊಸೆಸ್ಡ್ ಬೈ ಅಲ್ಲಮ ಹೆಸರಿನಲ್ಲಿ ಇಂಗ್ಲಿಷ್ ಗೆ ಅನುವಾದ ಮಾಡಿದ್ದಾರೆ (ಸಿವಿಜಿ-ಬೆಂಗಳೂರು.)
ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳಿಗೆ ಅನುವಾದ/ಕೃತಿ ವಿಮರ್ಶೆ ಮಾಡಿಕೊಟ್ಟಿರುವ ಇವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅನುವಾದ ಕಾರ್ಯಗಳಲ್ಲಿ ಸಹ ಭಾಗವಹಿಸಿದ್ದಾರೆ.