ಸೀತೆಗೆ ಧರ್ಮಸೂಕ್ಷ್ಮಗಳ ಅರಿವು ಕಡಿಮೆ
ಸೀತೆ ಜನಕನ ಆಸ್ಥಾನದಲ್ಲಿನ ಧರ್ಮ ಜಿಜ್ಞಾಸೆಗಳಲ್ಲಿ ಪಾಲುಗೊಳ್ಳುತ್ತಿದ್ದವಳು. ಆದರೆ ಅದು ಮೂಲೆಯೊಂದರಲ್ಲಿ ಕೂತು ಕೇಳುವ ಪಾಲ್ಗೊಳ್ಳುವಿಕೆ. ಹಾಗಾಗಿ ಅವಳಿಗೆ ಧರ್ಮಸೂಕ್ಷ್ಮಗಳ ಅರಿವು ಕಡಿಮೆ ಎಂದು ಕೃತಿಕಾರ ಸೂಚಿಸಿಬಿಡುತ್ತಾರೆ. ಇಂತಹ ಜಿಜ್ಞಾಸೆಗಳು ಅವಳ ಮನಸ್ಸಿನಲ್ಲಿ ಹಲವು ಸಂದರ್ಭಗಳಲ್ಲಿ ಎದ್ದೇಳುತ್ತಲೇ ಇರುತ್ತವೆ; ಅದರಲ್ಲೂ ಮುಖ್ಯವಾಗಿ ರಾಮನ ಧರ್ಮ ಪರಿಪಾಲನೆಯ ವಿಚಾರಗಳಲ್ಲಿ. ಇದು ಜಾತಿ, ಲಿಂಗ, ಕುಲ, ಧರ್ಮ, ವರ್ಣಗಳಿಗೆ ಹೆಚ್ಚು ಸಂಬಂಧಿಸಿದ ಆರ್ಷೇಯ ನಂಬಿಕೆಯಂತೆ ತೋರುತ್ತದೆ.
ಇವಕ್ಕೆ ಕಾಂಟ್ರಾಸ್ಟ್ ಆಗಿ ಸ್ವಲ್ಪ ಕಡಿಮೆ ಪ್ರಾಮುಖ್ಯತೆಯುಳ್ಳ ಊರ್ಮಿಳೆಯಂತಹ ಪಾತ್ರಗಳು ಹೆಚ್ಚು ಸಾಂದರ್ಭಿಕವಾಗಿ, ಸಂದರ್ಭೋಚಿತವಾಗಿ ಇರಬಲ್ಲವು, ಚಿಂತಿಸಬಲ್ಲವು. ಸೀತೆಯಂತೆಯೇ ಜನಕನ ಮಗಳಾಗಿಯೂ ಇದ್ದ ಅವಳು ಪ್ರೊಗ್ರೆಸಿವ್ ಆಗಿ ವ್ಯಕ್ತಿತ್ವ ರೂಪುಗೊಂಡವಳು. ಅದಕ್ಕೆ ಕಾರಣ ಅವಳು ಜನಕನ ರಾಣಿಯ ಒಡಲಲ್ಲಿ ಹುಟ್ಟದವಳೆಂಬುದೇ? ಸೀತೆ ನೆಲದ ಮಣ್ಣಿನಲ್ಲಿ ಹುಟ್ಟಿದವಳೆಂಬುದೇ? ಇಡೀ ಸೀತೆಯ ಬದುಕಿನ ಆಗುಹೋಗುಗಳು ಅವಳು ಜನಕನಿಗೆ ದೊರೆತ ರೀತಿಯಿಂದ ನಿರ್ದೇಶಿತವಾಗಿದೆಯೇ ಎನ್ನುವುದಕ್ಕೆ ಅವರು ಸಂದರ್ಭಗಳಿಗೆ ಪ್ರತಿಕ್ರಿಯಿಸುವ ಬಗೆಯಿಂದಲೇ ಉತ್ತರಗಳನ್ನು ಕಂಡುಕೊಳ್ಳಬಹುದಾಗಿದೆ. ಆದ್ದರಿಂದಲೇ ಊರ್ಮಿಳೆ ಹೇಳುವ ಮಾತು - ರಾಮನ ನಿರ್ಧಾರದ ಮೇಲೆಯೇ ಪರಿತ್ಯಕ್ತಳಾದ ಸೀತೆಗೆ ರಾಮನದೆಂಥ ದಾಸ್ಯ - ಎನ್ನುವುದು, ಅದು ನಿರ್ವಿಕಲ್ಪ ಮನಸ್ಸಿನ ಒಬ್ಬ ಹೆಣ್ಣಾದ ಅವಳಿಗೆ ಮಾತ್ರ ಸಾಧ್ಯವಾಗುವಂಥದ್ದು.
ಈ ಹಿಂದೆ ಹೇಳಿದ್ದಕ್ಕೆ ಮುಂದುವರಿಕೆ ಎಂಬಂತೆ, ಡಿ-ಮಿಥಿಫೈ ಮಾಡುವ ಸಂದರ್ಭಗಳನ್ನು ಭೈರಪ್ಪನವರು ನಿಭಾಯಿಸುವ ರೀತಿ ನೋಡಿ: ಇತ್ತ ದಶರಥ ಮುಕ್ಕಾಲು ವಾಸಿ ಪುಂಸತ್ವಹೀನ. ಅವನಿಗೆ ಇಬ್ಬರು ಹೆಂಡಿರಿದ್ದರೂ ಮಕ್ಕಳಿಲ್ಲ. ಫಲವತ್ತಾದ, ಯಾವ ಬೀಜ ಬಿತ್ತಿದರೂ ಮೊಳೆಯಬಲ್ಲ ಕೇಕಯದ ಹೆಣ್ಣನ್ನು ಆಸೆಯಿಂದ ಲಗ್ನವಾದರೂ ಮಕ್ಕಳಾಗುವುದಿಲ್ಲ. ಆಗ ಅವನು ಈವರೆಗಿನ ಕಥನಗಳ ರೀತಿ ಪುತ್ರಕಾಮೇಷ್ಠಿಯಾಗ ಮಾಡಿಸುವುದಿಲ್ಲ. ಆದ್ದರಿಂದಲೇ ಯಜ್ಞಕುಂಡದಿದಂದ ದಿವ್ಯ ಪುರುಷನು ಎದ್ದು ಬಂದು ಪಾಯಸದ ಪಾತ್ರೆಯನ್ನು ಅವನಿಗೆ ಕೊಡುವುದಿಲ್ಲ. ಬದಲಿಗೆ ಹಿಮಾಲಯದ ವೈದ್ಯನೊಬ್ಬನಿಂದ ದೀರ್ಘಕಾಲೀನ ಔಷಧ ಚಿಕಿತ್ಸೆಗೆ ತನ್ನನ್ನು ತನ್ನ ಅರಸಿಯರನ್ನೂ ಅವನು ಒಳಪಡಿಸಿಕೊಳ್ಳುತ್ತಾನೆ. ಆಗ ಹುಟ್ಟುವುದು ಪಟ್ಟದರಸಿ ಕೋಸಲ್ಯಾದೇವಿಗೆ ರಾಮ, ಸುಮಿತ್ರೆಗೆ ಲಕ್ಷ್ಮಣ ಶತ್ರುಘ್ನರು, ಕೈಕೆಯಿಗೆ ಭರತ. ಅತ್ತ ಜನಕನಿಗೆ ಮಣ್ಣಲ್ಲಿ ಸೀತೆ ಸಿಕ್ಕ ಬಳಿಕ ಸಾಮಾನ್ಯವಾಗಿ ಉಳುವ ಸಾಮಾನ್ಯ ಜನರಲ್ಲಿ ಆಗುವಂತೆ ಅವನ ಹೆಂಡತಿಯಿಂದ ಮಕ್ಕಳಾಗುತ್ತಾರೆ.
ಇಲ್ಲಿನ ವಿವರಗಳನ್ನು ಕೊಂಚ ನೋಡಬೇಕು. ಯಾಗ ನಿಲ್ಲಿಸುವ ಮಾತು ಬಂದಾಗ ಜನಕನ ಮಡದಿ ಕೇಳುವುದು ತಾನು ಹೆರಬೇಕಿರುವ ಮಗುವಿನ ಬಗ್ಗೆ ನಡೆಯುತ್ತಿರುವ ಮತ್ತು ನಿಲ್ಲಿಸಲಾಗದ ಯಾಗವೆಂದು; ಸಿಕ್ಕ ಮಗುವಿನ ಕುರಿತ ಯಾಗವನ್ನಲ್ಲ. ಇವೆಲ್ಲದರ ಕೈಕೆಯಿಯ ಜೊತೆಗೆ ಮೊತ್ತವಾಗಿ ಇದು ಹೆಣ್ಣಿನ ಬದುಕಿನ ಕಥನ, ಸ್ವಾರ್ಥಗಳ ಕಥನ. ಹೆಣ್ಣಾಗಿಯೇ ಹುಟ್ಟಿ ಅನಾಥಳ ಹಾಗೆಯೇ ಬದುಕುವ ಸೀತೆಗೆ ಸಿಗುವ ಸುಖಗಳು ಅತ್ಯಲ್ಪ. ಆದ್ದರಿಂದಲೇ ಅವಳು ದಿನದಿನಕ್ಕೂ ಮಣ್ಣಿಗೆ ಹತ್ತಿರವಾಗುತ್ತಾ ಹೋಗುತ್ತಾಳೆ. ಅವಳಲ್ಲಿ ಮಣ್ಣಿನ ವಾಸನೆಯ ಆಕರ್ಷಣೆ, ಒಮ್ಮೆ ಕಪ್ಪು ಒಮ್ಮೆ ಕೆಂಪು, ಅದಮ್ಯವಾಗಿ ಬೆಳೆದುಕೊಂಡು ಹೋಗುತ್ತದೆ. ಅವಳ ಸಾವೂ ಇಚ್ಛಾ ಮರಣ, ಮಣ್ಣಿನಲ್ಲೇ.
ರಾಮನನ್ನು ಹರಿಯವತಾರವೆಂದು ಪರಿಭಾವಿಸದ ಪೀಳಿಗೆಗಳು ಈಗ ಅಸ್ತಿತ್ವದಲ್ಲಿವೆ ಎಂದೋ, ಮೊದಲು ಇದ್ದವು ಎಂದೋ ನಂಬಲು ಸಾಧ್ಯವಿಲ್ಲದಂತೆ ರಾಮಕಥೆ ಭಾರತೀಯ ಮನಸ್ಸುಗಳಲ್ಲಿ ಮಿಳಿತವಾಗಿದೆ. ರಾಮ ಸೀತೆ ಲಕ್ಷ್ಮಣ ಹನುಮಾನ್ ಇಲ್ಲದ ಚಿತ್ರಪಟವೇ ಇಲ್ಲವೇನೋ. ಆದರಿಲ್ಲಿ ಹನುಮಂತ ಕಪಿಯಲ್ಲ, ಅವತಾರವಲ್ಲ. ಮನುಷ್ಯ. ಸೀತೆಗಿಂತ ಹಿರಿಯ. ಅವನ ಪಾದಕ್ಕೆ ಅವಳು ಎರಗುತ್ತಾಳೆ. ಇದನ್ನು ಸೀತೆಯೊಂದಿಗೆ ಹಿಂದಿನ ರಾಮಾಯಣಗಳು ಚಿತ್ರಿಸಿದ ಹನುಮಂತನ ಸಂಬಂಧವನ್ನು ಹೋಲಿಸಿ ನೋಡಬೇಕು. ರಾಮನಿಗೆ ಹನುಮ ಹೇಳುವುದು ಅವಳ ಪಾದವನ್ನಲ್ಲದೆ ಬೇರೆ ಅವನೇನೂ ನೋಡಲಿಲ್ಲ ಎನ್ನುವುದು. ಮುಂದುವರಿಯುವುದು.....