ಬಿಸಿಬಿಸಿ ದೋಸೆಯಂತೆ ಮಾರಾಟವಾಗುತ್ತಿರುವ ಭೈರಪ್ಪ 'ಉತ್ತರಕಾಂಡ'
ಕನ್ನಡ ಕಾದಂಬರಿ ಲೋಕದ ಬೆಸ್ಟ್ ಸೆಲ್ಲರ್ ಎಸ್.ಎಲ್.ಭೈರಪ್ಪ ಎಂಬುದು ಮತ್ತೊಮ್ಮೆ ಮಗದೊಮ್ಮೆ ಸಾಬೀತು ಆಗುತ್ತಲೇ ಇದೆ. ಸೋಮವಾರ (ಜನವರಿ 16) ಬಿಡುಗಡೆಯಾದ ಅವರ ಹೊಸ ಕಾದಂಬರಿ 'ಉತ್ತರಕಾಂಡ' ಕೂಡ ಭರ್ಜರಿ ಮಾರಾಟ ಆರಂಭಿಸಿದೆ. ಸಾಹಿತ್ಯ ಭಂಡಾರ ಪ್ರಕಾಶನ ಹೊರತಂದಿರುವ 329 ಪುಟಗಳ ಈ ಪುಸ್ತಕದ ಬೆಲೆ 375 ರುಪಾಯಿ.
ಕಾದಂಬರಿಯ ಮುನ್ನುಡಿಯಲ್ಲಿ ಎಸ್.ಎಲ್.ಭೈರಪ್ಪ ಬರೆದ ಹಾಗೆ, ಅವರದೇ ಮಾಸ್ಟರ್ ಪೀಸ್ ಕಾದಂಬರಿ 'ಪರ್ವ' (ಮಹಾಭಾರತ) ಬರೆದ ನಲವತ್ತು ವರ್ಷಗಳ ನಂತರ 'ಉತ್ತರಕಾಂಡ' (ರಾಮಾಯಣ) ಬಂದಿದೆ. ಉತ್ತರಕಾಂಡ ಕಾದಂಬರಿಯ ಮೊದಲ ಪರಿಜನ್ನು ನವೆಂಬರ್ 9, 2015ರಿಂದ ಜನವರಿ 13, 2016ರವರೆಗೆ ಬರೆಯಲಾಗಿದೆ. 2014ರಲ್ಲಿ ಎಸ್.ಎಲ್.ಭೈರಪ್ಪನವರ ಕಾದಂಬರಿ ಯಾನ ಪ್ರಕಟವಾಗಿತ್ತು.
ಆ ನಂತರ ಪರಿಷ್ಕರಣೆ ಮತ್ತಿತರ ಕಾರ್ಯಕ್ಕೆ ಸಮಯ ಹಿಡಿದಿದೆ. ಸಲಹೆ-ಸೂಚನೆ ನೀಡಿದ ಶತಾವಧಾನಿ ಆರ್.ಗಣೇಶ್, ಎಲ್.ವಿ,ಶಾಂತಕುಮಾರಿ ಹಾಗೂ ಡಾ.ಪ್ರಧಾನ ಗುರುದತ್ತ ಅವರಿಗೆ ಭೈರಪ್ಪನವರು ಕೃತಜ್ಞತೆ ಅರ್ಪಿಸಿದ್ದಾರೆ. ಇನ್ನು ಪುಸ್ತಕ ಮಾರಾಟದ ಬಗ್ಗೆ ಒನ್ಇಂಡಿಯಾ ಕನ್ನಡ ಸಾಹಿತ್ಯ ಭಂಡಾರವನ್ನು ಫೋನ್ ಮೂಲಕ ಸಂಪರ್ಕಿಸಿದಾಗ ರಾಜ ಎಂಬುವವರು ಒಂದಷ್ಟು ಮಾಹಿತಿ ನೀಡಿದರು.[ಜನವರಿ 16ರಿಂದ ಭೈರಪ್ಪನವರ 'ಉತ್ತರ ಕಾಂಡ' ಎಲ್ಲೆಡೆ ಲಭ್ಯ]
ಭೈರಪ್ಪನವರ ಕಾದಂಬರಿಯಿಂದ ಕಾದಂಬರಿಗೆ ಮಾರಾಟ ಹೆಚ್ಚುತ್ತಲೇ ಇದೆ. ನಾವು ಮಾರಾಟ ಸಂಖ್ಯೆಯನ್ನು ಸಂಬಂಧಪಟ್ಟವರಿಗೆ ಮಾತ್ರ ಅಂದರೆ ಲೇಖಕರು, ಆದಾಯ ತೆರಿಗೆ ಇಲಾಖೆಯವರಿಗೆ ನೀಡುತ್ತೇವೆ ಎಂದರು.
ಸದ್ಯಕ್ಕೆ ಎರಡನೇ ಮುದ್ರಣದ ಪುಸ್ತಕಗಳ ಬೈಂಡಿಂಗ್ ಕೆಲಸ ನಡೆಯುತ್ತಿದೆ. ಮೂರನೇ ಮುದ್ರಣ ಆಗುತ್ತಿದೆ ಎಂದು ಹೇಳಿದರು. ಇನ್ನು ಗಾಂಧಿಬಜಾರಿನ ಅಂಕಿತ ಪುಸ್ತಕ ಮಾರಾಟ ಮಳಿಗೆ ಮಾಲೀಕರು ಹಾಗೂ ಪ್ರಕಾಶಕರಾದ ಪ್ರಕಾಶ್ ಕಂಬತ್ತಳ್ಳಿ ಅವರು ಮಾಹಿತಿ ನೀಡಿ, ಸಂಜೆಯವರೆಗೆ ಮುನ್ನೂರು ಪುಸ್ತಕ ಮಾರಾಟವಾಗಿದೆ ಎಂದರು.
ಒನ್ ಇಂಡಿಯಾ ಕನ್ನಡ ಅಂಕಿತ ಪುಸ್ತಕ ಮಾರಾಟ ಮಳಿಗೆಗೆ ಭೇಟಿ ನೀಡಿದಾಗಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. "ರಾಮನ ಬಗ್ಗೆ ಚರ್ಚೆಯಾಗುತ್ತಿರುವ ಕಾಲಘಟ್ಟದಲ್ಲಿ ಅದನ್ನು ಬರೆಯಬೇಕು ಎನಿಸಿದ್ದರಿಂದ ಬರೆದೆ ಅಷ್ಟೆ. ಆದರೆ ನನಗೆ ರಾಮಾಯಣಕ್ಕಿಂತ ಮಹಾಭಾರತವೇ ಇಷ್ಟ. ರಾಮಾಯಣದ ಕಥೆ ತುಂಬ ಶಕ್ತಿಯುತವಾದದ್ದಲ್ಲ. ಆದರೆ ಸೀತೆಯ ದೃಷ್ಟಿಯಿಂದ ಈ ಕಾದಂಬರಿ ಬರೆದಿದ್ದೇನೆ" ಎಂಬುದು ಭೈರಪ್ಪನವರ ಮಾತು.[ಎಸ್ಎಲ್ ಭೈರಪ್ಪನವರ ವೆಬ್ ತಾಣ ಬೀಟಾ ಆವೃತ್ತಿ ನೋಡಿ]
ಹಾಗಿದ್ದರೆ ಉತ್ತರಕಾಂಡದಲ್ಲಿ ರಾಮಾಯಣವನ್ನು ಅಥವಾ ಸೀತೆಯ ದೃಷ್ಟಿಯಲ್ಲಿಟ್ಟುಕೊಂಡು ರಾಮಾಯಣವನ್ನು ಭೈರಪ್ಪನವರು ಹೇಗೆ ಕಟ್ಟಿಕೊಟ್ಟಿರಬಹುದು? ಎಂಬ ಕುತೂಹಲ ಇದೆ.