ಮಂಚಿ: ಹ್ಹೋ... ಏನು..? ಲಘು ಬರಹಗಳ ಸಂಕಲನ ಬಿಡುಗಡೆ
ತೇಜು ಪಬ್ಲಿಕೇಷನ್ಸ್, ಬೆಂಗಳೂರು ಇವರು ಪ್ರಕಟಿಸಿದ, ಲೇಖಕಿ ಅನಿತಾ ನರೇಶ್ ಮಂಚಿ ಬರೆದ ' ಹ್ಹೋ... ಏನು..? ಎಂಬ ಲಘು ಬರಹಗಳ ಸಂಕಲನ ಬಿಡುಗಡೆ ಕಾರ್ಯಕ್ರಮ ಇದೇ ನವೆಂಬರ್ 14ರಂದು ಮಂಚಿಯಲ್ಲಿ ನಡೆಯಿತು.
ಖ್ಯಾತ ಲೇಖಕಿ ಭುವನೇಶ್ವರಿ ಹೆಗಡೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಶ್ರೀ ರಾಮಚಂದ್ರ ಭಟ್ ಕಜೆ ಅವರು ಸ್ವಾಗತಿಸಿದರು.
ಪತ್ರಕರ್ತ ಮನೋಹರ್ ಪ್ರಸಾದ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡುತ್ತಾ, ಉತ್ತಮ ಸಾಹಿತ್ಯ ಓದುವಾಗ ಮಾತ್ರ ಆನಂದವನ್ನು ನೀಡುವುದಲ್ಲದೆ ಬಹುಕಾಲ ಮನಸ್ಸಿನಲ್ಲಿ ಉಳಿಯುತ್ತದೆ ಎಂದರು.
ಇನ್ನೊಬ್ಬರನ್ನು ನೋಯಿಸದಂತಹ ಸಾಹಿತ್ಯ ರಚನೆ ಇಂದಿಗೆ ಬಹಳ ಅಗತ್ಯವಿದೆ. ಮಕ್ಕಳಲ್ಲಿ ಓದಿನ ಆಸಕ್ತಿಯನ್ನು ಮೂಡಿಸುವುದು ಮತ್ತು ನಮ್ಮ ಸಂಸ್ಕೃತಿಯ ಅರಿವು ಮೂಡಿಸುವುದು ನಮ್ಮ ಕರ್ತವ್ಯ ಎಂದು ಮನೋಹರ್ ಪ್ರಸಾದ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನುಡಿದರು.
ಹಿರಿಯ ಹಾಸ್ಯ ಲೇಖಕಿ ಪ್ರೊ. ಭುವನೇಶ್ವರಿ ಹೆಗಡೆ ಮಾತನಾಡುತ್ತಾ, ಮನೆಯಲ್ಲಿ ನಡೆಯುವಂತಹ ಇಂತಹ ಸಾಹಿತ್ಯ ಕಾರ್ಯಕ್ರಮಗಳು ಧನಾತ್ಮಕ ಚಿಂತನೆಗಳನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.
ಅಂಕಣಕಾರ ಅಣಕು ರಾಮನಾಥ್ ಅವರು ಪುಸ್ತಕ ಪರಿಚಯ ಮಾಡಿದರು. ಡಾ. ಸುರೇಖಾ ರವಿಶಂಕರ್ ಅವರು ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಮೇಘಾ ಕಾಯರ್ಪಾಡಿ ಮತ್ತು ರೇಶ್ಮಾ ನರಸಿಂಹ ಅವರಿಂದ ಲಘು ಸಂಗೀತ ಕಾರ್ಯಕ್ರಮ ನಡೆಯಿತು.
ನಂತರ ನಡೆದ ಯಕ್ಷಗಾನಾಮೃತ ಸಿಂಚನ ಕಾರ್ಯಕ್ರಮ ಉತ್ತಮವಾಗಿ ಮೂಡಿ ಸಭಿಕರನ್ನು ರಂಜಿಸಿತು. ಭಾಗವತರಾಗಿ ಶ್ರೀ ಮುರಳಿ ಕೃಷ್ಣ ತೆಂಕಬೈಲ್, ಕು. ಕಾವ್ಯಶ್ರೀ ಅಜೇರು, ಮದ್ದಳೆಯಲ್ಲಿ ನೆಕ್ಕರೆಮೂಲೆ ಗಣೇಶ್ ಭಟ್, ಚೆಂಡೆಯಲ್ಲಿ ನಿಡ್ವಜೆ ಶಂಕರ ಭಟ್, ಸುಭ್ರಮಣ್ಯ ಮುರಾರಿ ಚಕ್ರತಾಳದಲ್ಲಿ ಸಹಕರಿಸಿದರು. ಶ್ರೀ ಕಿಶೋರ್ ಭಟ್ ಕೊಮ್ಮೆ ಕಾರ್ಯಕ್ರಮ ನಿರೂಪಣೆ ಮಾಡಿದರು.