ಜ.24ಕ್ಕೆ ಕುಂವೀ ''ಎನ್ಕೌಂಟರ್'' ಪುಸ್ತಕ ಲೋಕಾರ್ಪಣೆ
ಬೆಂಗಳೂರು, ಜನವರಿ 21: ಖ್ಯಾತ ಕಾದಂಬರಿಕಾರ ಕುಂ. ವೀರಭದ್ರಪ್ಪ ಅವರ ಹೊಚ್ಚ ಹೊಸ ಕಾದಂಬರಿ ''ಎನ್ಕೌಂಟರ್'' ಪುಸ್ತಕ ಜನವರಿ 24ರಂದು ಲೋಕಾರ್ಪಣೆಗೊಳ್ಳುತ್ತಿದೆ.
ಕುಖ್ಯಾತ ಕ್ರಿಮಿನಲ್ ಜೀವನ ಆಧಾರಿತ ಈ ಕೃತಿಯನ್ನು ಅಂಕಿತ ಪುಸ್ತಕ ಪ್ರಕಾಶನ ಹೊರ ತರುತ್ತಿದೆ. ಜನವರಿ 24ರಂದು ಫೇಸ್ಬುಕ್ ಲೈವ್ ಮೂಲಕ ಪುಸ್ತಕವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ. ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಮಹಾದೇವ ಬಿದರಿ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಬುಕ್ ಬ್ರಹ್ಮ ವತಿಯಿಂದ ಲೈವ್ ಕಾರ್ಯಕ್ರಮ ನಡೆಸಲಾಗುತ್ತಿದೆ ಬೆಳಗ್ಗೆ 11 ಗಂಟೆ ಪುಸ್ತಕ ಬಿಡುಗಡೆ ನಂತರ ಅಗ್ರಹಾರ ಕೃಷ್ಣಮೂರ್ತಿ ಅವರು ಕುಂ ವೀರಭದ್ರಪ್ಪ ಅವರೊಂದಿಗೆ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಅಂಕಿತ ಪ್ರಕಾಶನವಲ್ಲದೆ, ಸ್ವಪ್ನ, ನವಕರ್ನಾಟಕ ಪಬ್ಲಿಕೇಷನ್ ಮುಖಾಂತರ ಆನ್ ಲೈನ್ ನಲ್ಲೂ ಪುಸ್ತಕ ಖರೀದಿಸಬಹುದು. ಬೆಲೆ 330 ರು.
90ರ ದಶಕದಲ್ಲಿ ಎನ್ಕೌಂಟರ್ನಲ್ಲಿ ಹತ್ಯೆಗೀಡಾದ ಕ್ರಿಮಿನಲ್ ಭೀಮ್ಲಾ ನಾಯಕ್ ಬದುಕಿನ ಚಿತ್ರಣ ಇಲ್ಲಿದೆ. ಕೆಡುಕುತನದ ನಂಜು ಅವನ ದೇಹದ ತುಂಬೆಲ್ಲ ವ್ಯಾಪಿಸಿತ್ತು, ಅವನ ಮನಸ್ಸನ್ನು ಪ್ರಳಯಾಂತಕಾರಿಯಾಗಿಸಿತ್ತು, ಆದರೂ, ಅವನಲ್ಲಿ ಎಳ್ಳುಗಾತ್ರದಷ್ಟು ಒಳ್ಳೆತನವಿತ್ತು. ಆ ಒಳ್ಳೆತನದ ಪ್ರತಿಬಿಂಬ ಈ ಕೃತಿ, ಈ ಬಯೋಪಿಕ್ಕು! ಎಂದು ಬೆನ್ನುಡಿಯಲ್ಲಿ ಕುಂವೀ ಬರೆದಿದ್ದಾರೆ.
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರಾದ ಕುಂ ವೀರಭದ್ರಪ್ಪ ಅವರು ಗ್ರಾಮೀಣ ಬದುಕಿನ ಸಂವೇದನೆಗಳನ್ನು ತಮ್ಮ ಕೃತಿಗಳಲ್ಲಿ ಮೂಡಿಸಿದ್ದಾರೆ. ಕರ್ನಾಟಕ ಆಂಧ್ರ ಗಡಿ ಭಾಗದ ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ವೃತ್ತಿ ಜೀವನ ಕಂಡಿದ್ದಾರೆ. 19 ಕಾದಂಬರಿಗಳಲ್ಲದೆ, ಕಥಾ ಸಂಕಲನ, ಜೀವನ ಚರಿತ್ರೆ, ವಿಮರ್ಶೆ, ಕವನ, ಅನುವಾದಿತ ಕೃತಿಗಳನ್ನು ಹೊರ ತಂದಿದ್ದಾರೆ.