ವಿಶಿಷ್ಟ ಕಾರ್ಯಕ್ರಮಕ್ಕೆ ಸಜ್ಜಾಗಿದೆ ಸಾಹಿತ್ಯ ಪರಿಷತ್ತು
ಇದರಲ್ಲಿ ವೈಶಿಷ್ಟ್ಯತೆ ಏನಿದೆ ಎಂದು ನೀವು ಅಚ್ಚರಿ ಪಡುವುದು ಗ್ಯಾರಂಟಿ. ಆ ವೈಶಿಷ್ಟ್ಯತೆ ಏನೆಂದರೆ ಕನ್ನಡದ ಪ್ರಪ್ರಥಮ ಮೊಬೈಲ್ ಕೃತಿ, ಅಂದರೆ ಸಂಪೂರ್ಣವಾಗಿ ಮೊಬೈಲ್ ನಲ್ಲಿಯೇ ಬರೆದಿರುವ 'ಕನಸಿನ ಚಿಟ್ಟೆಯ ಹಿಡಿಯಲು ಹೊರಟು' ಎಂಬ ಕನ್ನಡ ಕಾದಂಬರಿ ಬಿಡುಗಡೆಯಾಗಲಿದೆ. ಚೀನಾದ ಲೇಖಕರೊಬ್ಬರು ಪ್ರಥಮ ಬಾರಿಗೆ ಈ ಪ್ರಯೋಗ ಮಾಡಿದ್ದರೂ, ಕನ್ನಡದ ಮಟ್ಟಿದೆ ಇದೇ ಪ್ರಥಮ. ['ಕನಸಿನ ಚಿಟ್ಟೆ ಹಿಡಿಯಲು...' ಮೂಡಿದ ಬಗೆ]
ಇದರ ಜೊತೆ, ಒನ್ಇಂಡಿಯಾ ಕನ್ನಡ ಪೋರ್ಟಲ್ ನಲ್ಲಿ ಪ್ರಕಟವಾಗುತ್ತಿದ್ದ ಸ್ಫೂರ್ತಿಸೆಲೆ ಉಕ್ಕಿಸುವ ಸಣ್ಣಕಥೆಗಳ ಸಂಕಲನ 'ಶುಭಸಂಕಲ್ಪ' ಪುಸ್ತಕ ಕೂಡ ಬಿಡುಗಡೆಯಾಗಲಿದೆ. ನೋವೇ ಅನಾರೋಗ್ಯ, ಸಂತೋಷವೇ ಆರೋಗ್ಯ, ಶುಭಸಂಕಲ್ಪದೊಂದಿಗೆ ಗುಣಮುಖರಾಗುವುದೇ ಭಾಗ್ಯ! ಎಂಬ ಅಡಿಬರಹದೊಂದಿಗೆ ಈ ಸ್ಫೂರ್ತಿದಾಯಕ ಸಣ್ಣಕಥೆಗಳು ಪ್ರತಿ ಭಾನುವಾರ ಪ್ರಕಟವಾಗುತ್ತಿದ್ದವು. ಅದ್ವೈತ ಪಬ್ಲಿಕೇಷನ್ ಈ ಎರಡು ಕೃತಿಗಳನ್ನು ಪ್ರಕಟಿಸಿದೆ.
ಒನ್ಇಂಡಿಯಾ ಕನ್ನಡ ಸಂಪಾದಕ ಎಸ್.ಕೆ. ಶಾಮ ಸುಂದರ, ಉದಯವಾಣಿ ಪುರವಣಿ ಸಂಪಾದಕ ಮತ್ತು ಲೇಖಕ ಗಿರೀಶ್ ರಾವ್ (ಜೋಗಿ), ಕವಯಿತ್ರಿ ಮತ್ತು ಪತ್ರಕರ್ತೆ ಚೇತನಾ ತೀರ್ಥಹಳ್ಳಿ, ರಂಗಕರ್ಮಿ ಮತ್ತು ಜನಪ್ರಿಯ ಚಿತ್ರನಟಿ ಸುಕೃತ ವಾಗ್ಲೆ ಮುಂತಾದ ಗಣ್ಯರು ಶುಭಹಾರೈಸಲು ಬರುತ್ತಿದ್ದಾರೆ. ಇವರೆಲ್ಲ ಇದ್ದಾರೆಂದರೆ ಮಾತುಕತೆಗಳಿಗೆ ಕೊರತೆ ಇರುವುದಿಲ್ಲ.
ವಿದ್ಯಾಶಂಕರ ಹರಪನಹಳ್ಳಿ ಅವರು ಕಾರ್ಯಕ್ರಮಕ್ಕೆ ಬರುವ ಪುಸ್ತಕ ಪ್ರೇಮಿಗಳೇ ಮುಖ್ಯ ಅತಿಥಿಗಳು ಎಂದು ಹೇಳಿದ್ದಾರೆ. ಮುಖ್ಯ ಅತಿಥಿಗಳೆಂದ ಮೇಲೆ ಪುಸ್ತಕ ಬಿಡುಗಡೆ ತಪ್ಪಿಸಿಕೊಂಡರೆ ಹೇಗೆ? ಖಂಡಿತ ಬರ್ತೀರಿ ತಾನೆ? ಹೇಗಿದ್ರೂ ಮತ್ತೊಂದಿಷ್ಟು ಗೆಳೆಯ, ಗೆಳತಿಯರು ಹರಟೆಗೆ ಸಿಗುತ್ತಾರೆ. ಚಳಿಗೆ ಹೆದರಿಕೊಂಡು ಮನೆಯಲ್ಲಿ ಕುಳಿತುಕೊಳ್ಳಬೇಡಿ, ಬಿಸಿಬಿಸಿ ಕಾಫಿ ಮತ್ತು ತಿಂಡಿಯನ್ನು ವಿದ್ಯಾಶಂಕರ ಅರೇಂಜ್ ಮಾಡಿರುತ್ತಾರೆ.