ಬೆಂಗಳೂರಿನಲ್ಲಿ ಶ್ರೀವತ್ಸ ಜೋಶಿ ಪುಸ್ತಕ ಬಿಡುಗಡೆ
ವಿಶ್ವವಾಣಿ ಪತ್ರಿಕೆ ಆರಂಭವಾದಾಗಿನಿಂದಲೂ ಪ್ರತಿ ಭಾನುವಾರ ಪ್ರಕಟವಾಗಿ ಅಪಾರ ಮೆಚ್ಚುಗೆ ಗಳಿಸಿರುವ ತಿಳಿರುತೋರಣ ಅಂಕಣಬರಹಗಳು ಇದೀಗ ಪುಸ್ತಕ ರೂಪದಲ್ಲಿ ಹೊರಬರುತ್ತಿವೆ. ಬಿಡಿ ಬಿಡಿ ಲೇಖನಗಳನ್ನು ಹಿಡಿಯಾಗಿ ಒಂದೇ ಕಡೆ ಓದುವ ಅವಕಾಶ ಓದುಗರಿಗೆ ಸಿಗಲಿದೆ.
ಪರ್ಣಮಾಲೆ-1 ಮತ್ತು ಪರ್ಣಮಾಲೆ-2 ಎಂಬ ಶೀರ್ಷಿಕೆಯುಳ್ಳ ಈ ಅವಳಿ ಪುಸ್ತಕಗಳನ್ನು ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ ಇವರು ಪ್ರಕಟಿಸಿದ್ದಾರೆ. ಪುಸ್ತಕಗಳ ಲೋಕಾರ್ಪಣೆಯ ಅನೌಪಚಾರಿಕ ಕಾರ್ಯಕ್ರಮವೊಂದನ್ನು ಶನಿವಾರ 16, ಡಿಸೆಂಬರ್ 2017ರಂದು ಬೆಳಿಗ್ಗೆ 9:30ಕ್ಕೆ ಬೆಂಗಳೂರಿನ ಸುಚಿತ್ರಾ ಸಿನೆಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಆವರಣದ ನಾಣಿ ಅಂಗಳದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವು ಸಾಂಪ್ರದಾಯಿಕ ಪುಸ್ತಕ ಬಿಡುಗಡೆ ಸಮಾರಂಭಗಳಂತಿರದೆ, ಸ್ನೇಹಸಮ್ಮಿಲನದ ಆತ್ಮೀಯ ಸ್ವರೂಪದ್ದಾಗಿರುತ್ತದೆ. ಭಾಷಣಗಳ ಭೋರ್ಗರೆತ ಇರುವುದಿಲ್ಲ. ಅಮೆರಿಕದಿಂದ ರಜೆಯಲ್ಲಿ ಬೆಂಗಳೂರಿಗೆ ಬಂದಿರುವ ಅಂಕಣಕಾರ ಶ್ರೀವತ್ಸ ಜೋಶಿ ಅವರೊಂದಿಗೆ ಓದುಗರಿಗೆ ಮುಕ್ತ ಸಂವಾದಕ್ಕೆ ಒಂದು ಅವಕಾಶ.
ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮತ್ತು ಸಾಹಿತ್ಯ ಪ್ರಕಾಶನದ ಎಂ.ಎ.ಸುಬ್ರಹ್ಮಣ್ಯ ಉಪಸ್ಥಿತರಿರುತ್ತಾರೆ. ಪುಸ್ತಕಗಳನ್ನು ಲೋಕಾರ್ಪಣೆ ಮಾಡುವುದಕ್ಕೆ ಸಭಿಕರಲ್ಲೇ ಯಾರಾದರೂ ಒಬ್ಬರನ್ನು ವೇದಿಕೆಗೆ ಕರೆಸುವ ವಿನೂತನ ಯೋಜನೆ ಇದೆ. ಲೋಕಾರ್ಪಣೆಗೊಂಡ ಪುಸ್ತಕಗಳು ಆಕರ್ಷಕ ರಿಯಾಯಿತಿ ಬೆಲೆಯಲ್ಲಿ ಲಭ್ಯವಿರುತ್ತವೆ.