ಹರಿವು ಪ್ರಕಾಶನದಿಂದ ಜುಲೈ 10ಕ್ಕೆ 3 ಕೃತಿಗಳು ಬಿಡುಗಡೆ
ಬೆಂಗಳೂರು, ಜುಲೈ 07: ಪುಸ್ತಕ ಪ್ರಕಾಶನದ ಮೂಲಕ, ಕನ್ನಡದ ಮೇರು ಬರಹಗಾರರ ಪುಸ್ತಕಗಳನ್ನು ಹೊರಪಡಿಸಬೇಕೆಂಬ ಹೆಬ್ಬಯಕೆ ಹೊತ್ತ ಹರಿವು ಬುಕ್ಸ್, ಇದೀಗ ಆ ಹಾದಿಯಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಹರಿವು ಬುಕ್ಸ್ ಪ್ರಕಾಶನದ ಮೂಲಕ, ಜುಲೈ 10 ರಂದು ಮೂರು ಪುಸ್ತಕಗಳು ಬಿಡುಗಡೆಯಾಗಲಿವೆ. ವಾಸುದೇವ್ ಮೂರ್ತಿ ಅವರು ಬರೆದಿರುವ "ಪಾತಾಳ ಗರಡಿ", ಅನುಪಮಾ ಕೆ ಬೆಣಚಿನಮರಡಿ ಅವರ "ರಿಕ್ಕು ರಿಕ್ಷಣ್ಣಾ" ಹಾಗೂ ಎಂ ಆರ್ ಕಮಲ ಅವರ "ಹೊನ್ನಾವರಿಕೆ", ಈ ಮೂರು ಹೊತ್ತಗೆಗಳು ಅಂದು ನಿಮ್ಮೆಲ್ಲರ ಕೈಸೇರಲಿವೆ.
ಹಲವಾರು ಸಿನೆಮಾ, ಧಾರಾವಾಹಿ ಹಾಗೂ ವೆಬ್ ಸೀರೀಸ್ಗಳನ್ನು ಕನ್ನಡಕ್ಕೆ ಡಬ್ ಮಾಡಿ ಗೆಲುವನ್ನು ಕಾಣುವುದರ ಜೊತೆಗೆ ಕಾನೂನು, ವೈದ್ಯಕೀಯ, ಕೃಷಿ, ವಾಣಿಜ್ಯ, ಆರೋಗ್ಯ, ವಿಜ್ಞಾನ, ಮನರಂಜನೆ ಹಾಗೂ ಇನ್ನಷ್ಟು ವಿಷಯಗಳ ಕನ್ನಡ ಅನುವಾದ ಕೆಲಸಗಳಲ್ಲಿ ಹರಿವು ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ತೊಡಗಿಸಿಕೊಂಡಿದೆ.
ಕಳೆದ ಡಿಸೆಂಬರ್ 5 ರಂದು "ಹರಿವು ಬುಕ್ಸ್" ಹೆಸರಿನಡಿಯಲ್ಲಿ ಪುಸ್ತಕ ಪ್ರಕಾಶನ ಮತ್ತು ಮಾರಾಟ ಕ್ಷೇತ್ರಗಳಿಗೂ ಹುರುಪಿನಿಂದ ಲಗ್ಗೆಯಿಟ್ಟಿತು. ಅಂದಿನಿಂದ ಇಂದಿನವರೆಗೂ ಬರೀ ಕರ್ನಾಟಕವೊಂದೇ ಅಲ್ಲದೆ, ಭಾರತದ ಮೂಲೆ ಮೂಲೆಯಲ್ಲೂ ನೆಲೆಸಿರುವ ಪುಸ್ತಕ ಪ್ರೇಮಿಗಳಿಗೆ ಓದಿನ ಸವಿಯನ್ನು ಉಣಬಡಿಸುತ್ತಿದೆ.
ಕನ್ನಡ ಪುಸ್ತಕ ಕೊಳ್ಳಲೊಂದು ಹೊಸ ತಾಣ - ಹರಿವು ಬುಕ್ಸ್
ಹರಿವು ಬುಕ್ಸ್ನಲ್ಲಿ ಹಲವು ಬಗೆಯ ಪುಸ್ತಕಗಳು
ಕತೆ, ಕಾದಂಬರಿ, ಇತಿಹಾಸ, ನಾಡು-ನುಡಿ, ವಿಜ್ಞಾನ ಮತ್ತು ತಂತ್ರಜ್ಞಾನ, ಮಕ್ಕಳ ಪುಸ್ತಕಗಳು, ಆರೋಗ್ಯ, ಜೀವನಶೈಲಿ, ಅಡುಗೆ, ಪುರಾಣ, ಆಧ್ಯಾತ್ಮ, ನಾಟಕಗಳು ಹಾಗೂ ಇನ್ನೂ ಹಲವು ಬಗೆಯ ಪುಸ್ತಕಗಳು ಹರಿವು ಬುಕ್ಸ್ನಲ್ಲಿ ದೊರೆಯುತ್ತವೆ. ಬೆಂಗಳೂರಿನ ಬಸವನಗುಡಿಯ ಡಿ.ವಿ.ಜಿ ರಸ್ತೆಯಲ್ಲಿರುವ ಮಳಿಗೆಗೆ ದಿನವೂ ನೂರಾರು ಓದುಗರು ಬಂದು ಪುಸ್ತಕಗಳನ್ನು ಕೊಳ್ಳುತ್ತಾರೆ. www.harivubooks.com ಮಿಂದಾಣದ ಮೂಲಕ ನೀವು ಆನ್ಲೈನ್ನಲ್ಲಿಯೂ ಪುಸ್ತಕಗಳನ್ನು ಕೊಳ್ಳಬಹುದು.
2022 ಜುಲೈ 10 ಭಾನುವಾರದಂದು ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನ ವಾಡಿಯಾ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ಮೂರು ವಿಶೇಷ ಕೃತಿಗಳು ಬಿಡುಗಡೆಯಾಗಲಿವೆ.
ಪಾತಾಳ ಗರಡಿ
ವೃತ್ತಿಯಿಂದ ಸಿವಿಲ್ ಇಂಜಿನಿಯರ್ ಆಗಿರುವ ವಾಸುದೇವ್ ಮೂರ್ತಿ ಅವರು, ಒಬ್ಬ ಅತ್ಯುತ್ತಮ ಬರಹಗಾರರೂ ಆಗಿದ್ದಾರೆ. 25 ವರ್ಷಗಳಿಗಿಂತ ಹೆಚ್ಚು ಕಾಲ ಕಾರ್ಪೊರೇಟ್ ಸಂಸ್ಥೆಗಳಲ್ಲಿ ದುಡಿದ ಅನುಭವವುಳ್ಳ ಇವರು ಒಬ್ಬ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ನಡವಳಿಕೆ ವಿಶ್ಲೇಷಕರಾಗಿದ್ದಾರೆ. ಕ್ರೈಮ್ ಥ್ರಿಲ್ಲರ್ಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರು. ಇವರ ಹಲವಾರು ಕಿರುಗತೆಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಮೊದಲ ಕೃತಿ,''ದಿ ಪರ್ಫೆಕ್ಟ್ ಮರ್ಡರ್'' ಬಹಳಷ್ಟು ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ಬಿಡುಗಡೆಗೆ ಅಣಿಯಾಗಿರುವ ''ಪಾತಾಳ ಗರಡಿ'', 7 ಬಗೆಬಗೆಯ ಥ್ರಿಲ್ಲರ್ ಕತೆಗಳ ಗೊಂಚಲು. ಈ ಕತೆಗಳು ರೋಚಕ ಬರವಣಿಗೆಯ ಶೈಲಿಯಿಂದ ಓದುಗನನ್ನು ಅಡಿಗಡಿಗೆ ಕುತೂಹಲದ ಕಡಲಿಗೆ ನೂಕಿ ಥ್ರಿಲ್ ನೀಡುವುದರಲ್ಲಿ ಯಾವ ಸಂಶಯವೂ ಇಲ್ಲ.
ಚಂದದ ರಿಕ್ಷಾದ ಕತೆ
ವೃತ್ತಿಯಿಂದ ಇಂಜಿನಿಯರ್ ಆಗಿರುವ ಅನುಪಮಾ ಕೆ ಬೆಣಚಿನಮರಡಿ ಅವರು ಒಬ್ಬ ಸೃಜನಶೀಲ ಬರಹಗಾರ್ತಿ. ಹಲವಾರು ಪತ್ರಿಕೆಗಳಿಗೆ ಮಕ್ಕಳ ಕತೆ, ಪ್ರಬಂಧ, ವಿಜ್ಞಾನ ಮತ್ತು ಜೀವವಿಜ್ಞಾನದ ಬರಹಗಳನ್ನು ಬರೆದಿದ್ದಾರೆ. ಪರಿಸರದ ಮೇಲೆ ತುಂಬ ಒಲವಿರುವ ಇವರಿಗೆ, ತಮ್ಮ ಇಬ್ಬರು ಪುಟ್ಟ ಮಕ್ಕಳೊಂದಿಗೆ ಸುತ್ತಮುತ್ತಲಿನ ಪಕ್ಷಿ ಮತ್ತು ಕೀಟ ಪ್ರಪಂಚವನ್ನು ಗಂಟೆಗಟ್ಟಲೆ ಗಮನಿಸುತ್ತಾ ಅವರ ಪ್ರಶ್ನೆಗಳಿಗೆ ಉತ್ತರಿಸುವುದೆಂದರೆ ತುಂಬ ಇಷ್ಟ. ಪ್ರಾಣಿಗಳೊಂದಿಗೆ ಮಾತಾಡಬಲ್ಲ ರಿಕ್ಕು ಎಂಬ ಒಂದು ಚಂದದ ರಿಕ್ಷಾದ ಕತೆಯನ್ನು ''ರಿಕ್ಕು ರಿಕ್ಷಣ್ಣಾ'' ದಲ್ಲಿ ಅನುಪಮಾ ಹೇಳಿದ್ದಾರೆ. ಒಂದೊಂದು ಪುಟದಲ್ಲೂ ಸಂತೋಷ್ ಸಸಿಹಿತ್ಲು ಅವರು ಬಿಡಿಸಿದ ಬಣ್ಣಬಣ್ಣದ ಚಿತ್ರಗಳು ಮಕ್ಕಳನ್ನು ಮೋಡಿ ಮಾಡುವುದರಲ್ಲಿ ಎರಡು ಮಾತಿಲ್ಲ.
ಬಹುಮುಖ ಪ್ರತಿಭೆ ಎಂಆರ್ ಕಮಲ
ಭರತನಾಟ್ಯ ಪ್ರವೀಣೆ, ವೀಣಾವಾದಕಿ, ಕವಯತ್ರಿ, ಬರಹಗಾರ್ತಿಯಾದ ಎಂ ಆರ್ ಕಮಲ ಅವರದ್ದು ಬಹುಮುಖ ಪ್ರತಿಭೆ. ಕನ್ನಡ ಉಪನ್ಯಾಸಕಿಯಾಗಿ ಕೂಡ ಸೇವೆ ಸಲ್ಲಿಸಿರುವ ಇವರು ಕನ್ನಡ ಸಾಹಿತ್ಯಲೋಕಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಶಕುಂತಲೋಪಾಖ್ಯಾನ, ಹೂವು ಚೆಲ್ಲಿದ ಹಾದಿ, ಮಾರಿಬಿಡಿ ಮುಂತಾದ ಕವನ ಸಂಕಲನಗಳು, ಕಪ್ಪು ಹಕ್ಕಿಯ ಬೆಳಕಿನ ಹಾಡು, ಉತ್ತರ ನಕ್ಷತ್ರ ಮುಂತಾದ ಅನುವಾದಿತ ಕೃತಿಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ.
ಹೊಸ ಪ್ರಬಂಧ ಸಂಕಲನ
ಫ್ರೆಂಚ್ ನುಡಿಯಲ್ಲಿ ಪದವೀಧರರಾಗಿರುವ ಇವರು ಆಫ್ರಿಕನ್-ಅಮೇರಿಕನ್ ಮತ್ತು ಅರಬ್ ಮಹಿಳಾ ಕಾವ್ಯದಲ್ಲಿ ಕೂಡ ವಿಶೇಷ ಪರಿಣತಿ ಹೊಂದಿದ್ದಾರೆ. ಹೊನ್ನಾವರಿಕೆ, ಎಂ ಆರ್ ಕಮಲ ಅವರ ಹೊಸ ಪ್ರಬಂಧ ಸಂಕಲನ. ಈ ಪುಸ್ತಕ ಹರಿವು ಬುಕ್ಸ್ ಪ್ರಕಾಶನದ ಮೂಲಕ ಮರುಬಿಡುಗಡೆ ಆಗುತ್ತಿದೆ. ಅವರ ಈ ಹಿಂದಿನ ಗದ್ಯ ಬರಹಗಳಂತೆಯೇ ಸರಳ ಮತ್ತು ನೇರ ನಿರೂಪಣೆ ಈ ಪ್ರಬಂಧಗಳಲ್ಲಿಯೂ ಕಾಣುತ್ತದೆ. ಇಲ್ಲಿ ಹೇಳುತ್ತಿರುವ ಸಂಗತಿ, ಪ್ರಸಂಗ, ಅನುಭವಗಳು ನಮಗೂ ಆಗಿವೆಯಲ್ಲ ಎಂಬ ಅಚ್ಚರಿಯಲ್ಲಿ, ಓದುಗ ಅದರಲ್ಲಿ ತಲ್ಲೀನನಾಗಬಲ್ಲ ಗುಣವನ್ನು ಈ ಪ್ರಬಂಧಗಳು ಪಡೆದಿವೆ. ಬದುಕಿನ ಸಾಮಾನ್ಯ ಸಂಗತಿಗಳಿಗೂ ಅದರದೇ ಆದ ಚೆಲುವು ಇರುತ್ತದೆಂಬ ಅರಿವನ್ನು ಈ ಬರಹಗಳು ಮೂಡಿಸುತ್ತವೆ.