ಸಾಹಿತ್ಯ ವಿಮರ್ಶೆ ಅಂದರೆ ಏನು? ಏಕೆ? ಹೇಗೆ ಹುಟ್ಟಿತು?
ನವೆಂಬರ್ 21 ಮತ್ತು 22ರಂದು ಜೆ.ಪಿ.ನಗರದಲ್ಲಿರುವ 'ಕಪ್ಪಣ್ಣ ಅಂಗಳ'ದಲ್ಲಿ ಈ ಹೊತ್ತಿಗೆಯಿಂದ ವಿಮರ್ಶಾ ಕಮ್ಮಟವನ್ನು ಆಯೋಜಿಸಲಾಯಿತು. 28 ಜನ ಅಭ್ಯರ್ಥಿಗಳು ಭಾಗವಹಿಸಿದ್ದ ಈ ಕಮ್ಮಟವನ್ನು ಸಂಪನ್ಮೂಲ ವ್ಯಕ್ತಿಗಳಾಗಿ ನಾಡಿನ ಖ್ಯಾತ ವಿಮರ್ಶಕರಾದ, ಎಸ್. ದಿವಾಕರ್, ಡಾ. ಸಿ.ಎನ್. ರಾಮಚಂದ್ರನ್, ಡಾ.ಓ.ಎಲ್. ನಾಗಭೂಷಣಸ್ವಾಮಿ, ಡಾ.ಬಿ.ಎನ್.ಸುಮಿತ್ರಾಬಾಯಿ, ಡಾ.ಎಸ್.ಆರ್. ವಿಜಯ ಶಂಕರ್, ಡಾ. ಕೆ.ವೈ. ನಾರಾಯಣಸ್ವಾಮಿ, ಡಾ.ಜಿ.ಬಿ. ಹರೀಶ್, ಡಾ. ಕೆ.ಎಸ್. ಮಧುಸೂದನ ಅವರು ನಡೆಸಿಕೊಟ್ಟರು.
ಮೊದಲ ದಿನದ ಕಮ್ಮಟವನ್ನು ನಡೆಸಿಕೊಟ್ಟ ಸಂಪನ್ಮೂಲ ವ್ಯಕ್ತಿಗಳು - ಎಸ್. ದಿವಾಕರ್, ಡಾ. ಸಿ.ಎನ್.ಆರ್, ಡಾ. ಜೆ.ಬಿ. ಹರೀಶ್ ಮತ್ತು ಡಾ.ಎಸ್.ಆರ್.ವಿಜಯಶಂಕರ್. ಕಮ್ಮಟವನ್ನಾರಂಭಿಸಿದ ಎಸ್.ದಿವಾಕರ್ ಅವರು ಸಾಹಿತ್ಯ ವಿಮರ್ಶೆ ಅಂದರೆ ಏನು? ಏಕೆ? ಅದು ಹೇಗೆ ಹುಟ್ಟಿತು? ಯಾಕೆ ಬೇಕು? ಎಂಬುದನೆಲ್ಲಾ ವಿಸ್ತೃತವಾಗಿ ವಿವರಿಸಿದರು.
ವಿವರಣೆ : ವಿಮರ್ಶೆ ಎಂದರೆ ಸಂಸ್ಕೃತಿ. ಸಂಸ್ಕೃತಿಗೆ ಭಾಷೆ ಮುಖ್ಯ. ಭಾಷೆಯಿಂದ ದಕ್ಕುವ ಈ ಸಂಸ್ಕೃತಿಯಿಂದಲೇ ಮನುಷ್ಯ, ಪ್ರಾಣಿಯಿಂದ ಭಿನ್ನನಾಗುತ್ತಾನೆ. ವಿಮರ್ಶೆ ಸಂಸ್ಕೃತಿಯೊಂದಿಗೇ ಬೆಳೆದು ಬಂದಿದೆ. ಸೂಕ್ಷ್ಮ ಓದುಗ ತಾನು ಓದುತ್ತಿರುವ ಬರಹದ ಜೊತೆ ಸಂಪರ್ಕ, ಸಂವಾದ ನಡೆಸುವ ಕ್ರಿಯೆಯೇ ವಿಮರ್ಶೆ. ಸಾಹಿತ್ಯ ಸೃಷ್ಟಿಯಾಗುವುದೇ ಭಾಷೆಯಲ್ಲಿ. ಭಾಷೆಯ ಸಂಕೇತಗಳಾದ ಅಕ್ಷರಗಳು ಕಣ್ಣಿಗೆ ಕಾಣುವಂಥದ್ದು. ಸಾಹಿತ್ಯ ಒಂದು ಏಕಾಂಗಿ ಕೃತ್ಯ. ಓದಿದ ಪುಸ್ತಕಗಳ ಕುರಿತು ಒಂದೆಡೆ ಕುಳಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಇರುವ ಸಾಧ್ಯತೆ ಇರುವುದು ಕೇವಲ ಸಾಹಿತ್ಯದಲ್ಲಿ ಮಾತ್ರ.
ವಿಮರ್ಶೆ ಏಕೆ ಬೇಕು? : ಕೃತಿ ರಚನೆಯಾದ ಕಾಲ ಘಟ್ಟ, ಆಗಿದ್ದ ಸಾಮಾಜಿಕ ಸ್ಥಿತಿ ಗತಿ, ಸಾಂಸ್ಕೃತಿಕ ರೂಪಗಳನ್ನು ನೋಡಲು, ತಿಳಿಯಲು ವಿಮರ್ಶೆ ಬೇಕು. ಯಾವುದೇ ಒಂದು ಸಾಹಿತ್ಯ ಕೃತಿಯಿಂದ ಆ ಕಾಲದ ಘಟ್ಟ ಹೇಗಿದೆ? ಕಥೆಯಲ್ಲಿ ಅದು ಹೇಗೆಲ್ಲಾ ಪ್ರಕಟಗೊಂಡಿದೆ? ಎಂದು ವಿಮರ್ಶೆಯಿಂದ ತಿಳಿಯಬಹುದು. ವಿಮರ್ಶಕ ಓದುವ ಅಭಿರುಚಿ ಬೆಳೆಸುತ್ತಾನೆ. ಅಭಿರುಚಿಗೂ ಸಂಸ್ಕೃತಿಗೂ ಸಂಬಂಧವಿದೆ. ನಿಜವಾದ ವಿಮರ್ಶಕ ಜೊಳ್ಳು, ಕಾಳುಗಳನ್ನು ಬೇರ್ಪಡಿಸುತ್ತಾನೆ. ಹಾಗೆ ತಾನು ಬೇರ್ಪಡಿಸಿದ ಗಟ್ಟಿಯಾದ ಕಾಳುಗಳ ಮೇಲೆ ಅಭಿರುಚಿಯನ್ನು ಬೆಳೆಸಿಕೊಳ್ಳಲು ಪ್ರೇರೇಪಿಸುತ್ತಾನೆ. ಅತ್ಯುತ್ತಮ ಕೃತಿಗಳತ್ತ ಓದುಗರ ಗಮನ ಸೆಳೆವುದು ಅವನ ಕಾರ್ಯ.
ವಿಮರ್ಶೆಯ ಅಗತ್ಯ : ವಿಮರ್ಶೆಯಿಂದಲೇ ಪ್ರಜಾಪ್ರಭುತ್ವದ ಉತ್ತುಂಗ ಸ್ಥಿತಿಯನ್ನು ತಲುಪಬಹುದು, ವ್ಯವಸ್ಥೆಯನ್ನು ಸರಿಪಡಿಸಬಹುದು. ಸಮಾಜದ ವಿವಿಧ ಅಂಗಗಳಲ್ಲಿ ವಿಮರ್ಶೆ ತನ್ನ ಕೆಲಸವನ್ನು ಮಾಡುತ್ತಿದೆ. ಹಿಂದೆ ಮೌಲ್ಯಗಳನ್ನು ಪ್ರಶ್ನಿಸದೇ ಸ್ವೀಕರಿಸುವ ಸಮಾಜವಿತ್ತು. ಇಂದು ಅವುಗಳ ಅತೀವ ಕೊರತೆಯಿಂದೆ. ಓರ್ವ ನಿಜವಾದ ವಿಮರ್ಶಕ ಅತ್ಯುತ್ತಮವಾದ ಬರಹವನ್ನು ಉಳಿಸಿ, ಮುಂದಿನ ಪೀಳಿಗೆಗೆ ದಾಟಿಸುವ ಕೆಲಸವನ್ನು ಮಾಡುತ್ತಾನೆ.
ಉದಾಹರಣೆಗೆ : ಪಂಪನ ಮಹಾಕಾವ್ಯವಿನ್ನೂ ನಮ್ಮೊಂದಿಗಿರುವುದು. ವಿಮರ್ಶಕರ ನೆರವಿಲ್ಲದೇ ನಾವು 15, 16ನೇ ಶತಮಾನದ ಕೃತಿಗಳನ್ನು ಓದಲು ಸಾಧ್ಯವಿಲ್ಲ. ವಿಮರ್ಶೆಯ ಮೇಲೆ ಪಾಶ್ಚಾತ್ಯರ ಪ್ರಭಾವ ಅಗಾಧವಾಗಿದೆ. ಹಾಗೆಂದು ಇಲ್ಲಿನ ವಿಮರ್ಶಕರೆಲ್ಲಾ ಎಲ್ಲವನ್ನೂ ಅಲ್ಲಿಂದಲೇ ಭಟ್ಟಿ ಇಳಿಸಿದಿದ್ದು ಎಂದಲ್ಲ. ಅಲ್ಲಿಯ ಸಾಹಿತ್ಯದಿಂದ ಪ್ರೇರಿತರಾದವರು. ಅನುಕರಣೆಯೇ ಬೇರೆ ಪ್ರಭಾವವೇ ಬೇರೆ. ನವೋದಯದ ಕಾಲದಲ್ಲಿ ಪ್ರತಿಯೊಬ್ಬ ಲೇಖಕನೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ವಿಮರ್ಶಕನೂ ಆಗಿದ್ದ. ಅಂದು ವಿಮರ್ಶೆ ಹೆಚ್ಚು ಪ್ರಶಂಸಾತ್ಮಕವಾಗಿತ್ತು.
ನನ್ನ ಪ್ರಕಾರ ಎ.ಆರ್.ಕೃಷ್ಣ ಶಾಸ್ತ್ರಿಯವರು ಮಾತ್ರ ಆಧುನಿಕ ಕನ್ನಡ ಸಾಹಿತ್ಯದ ಮೊತ್ತ ಮೊದಲ ವಿಮರ್ಶಕ. ಅತ್ಯಂತ ವ್ಯವಸ್ಥಿತವಾಗಿ ವಿಮರ್ಶೆ ಮಾಡಿದವರು ನವ್ಯರು. ಹಿಂದೆ ಯಾರೂ ಮಾಡದ್ದ ರೀತಿಯಲ್ಲಿ ಮಾಡಲು ಹೊರಟವರು. ನಮ್ಮ ವಿಮರ್ಶೆ, ಕೃತಿ ನಿಷ್ಠದ ಜೊತೆಗೇ ಸಮಾಜಮುಖಿಯಾಗಿ ಬೆಳೆದು ಬಂದಿದೆ. ಕಾಲಕ್ಕೆ ತಕ್ಕಂತೇ ವಿಮರ್ಶಾ ಮಾನದಂಡಗಳು ಬದಲಾಗುತ್ತಿವೆ. ಸ್ವತಃ ವಿಮರ್ಶಕರೇ ಬದಲಾಯಿಸಿಕೊಂಡಿದ್ದಾರೆ. ಕನ್ನಡದಲ್ಲಿ ಹುಟ್ಟಿದ ಕೆಲವು ವಿಶಿಷ್ಟ ಕೃತಿಗಳೇ ಸ್ವ ವಿಮರ್ಶೆ ಮಾಡಿಕೊಂಡು ತಮ್ಮ ವಿಮರ್ಶಾ ಮಾನದಂಡಗಳನ್ನು ಬದಲಾಯಿಸಿಕೊಳ್ಳುವಂತೆ ಮಾಡಿವೆ. ಇಂದು ಮಾತ್ರ ವಿಮರ್ಶೆ ಒಂದೋ ಹೊಗಳಿಕೆಗೆ ಇಲ್ಲಾ ನಿರ್ಲಿಪ್ತತತೆಗೆ ಒಗ್ಗಿರುವುದು ಹೆಚ್ಚಾಗಿ ಕಂಡು ಬರುತ್ತಿದೆ.