ಪತ್ರಿಕೋದ್ಯಮದ ಬಗ್ಗೆ ಕುತೂಹಲವಿದ್ದರೆ ಇದನ್ನು ಓದಿ!
ವಿವಿಧ ಪತ್ರಕರ್ತರು ಒಟ್ಟಾಗಿ ರಚಿಸಿದ 'ನೀವೂ ಪತ್ರಕರ್ತರಾಗಬೇಕೆ?' ಕೃತಿಯನ್ನು ಓದಿ ಒಂದು ಹೊಸ ವಿಷಯ ತಿಳಿದುಕೊಂಡ ಸಂತೋಷವಾಯ್ತು.
ಪತ್ರಿಕೋದ್ಯಮದ ಕುರಿತು ಪ್ರಾಥಮಿಕ ಮಾಹಿತಿ ಒದಗಿಸುವ ಲೇಖನಗಳನ್ನು ಬರೆದ ರವಿಶಂಕರ್ ಕೆ. ಭಟ್, ರುದ್ರಣ್ಣ ಹರ್ತಿಕೋಟೆ, ಸುರೇಶ್ ಎನ್, ಸೋಮಶೇಖರ್ ಜಿಆರ್ಎನ್, ಚಂದ್ರ ಗಂಗೊಳ್ಳಿ, ರಶ್ಮಿ ಕೆ ಹಾಗೂ ಈ ಕೃತಿಯನ್ನು ಸಂಪಾದಿಸಿದ ವಿನಾಯಕ ಕೋಡ್ಸರ ಅವರನ್ನು ಅಭಿನಂದಿಸುತ್ತೇನೆ. ಅನೇಕ ಅಧ್ಯಾಯಗಳಿಂದ ಕೂಡಿದ ಈ ಪುಸ್ತಕ ಪತ್ರಿಕೋದ್ಯಮದ ಕುರಿತಾಗಿ ಒಂದು ಸಮಗ್ರ ಮಾಹಿತಿ ನೀಡುತ್ತದೆ.
ಒಂದು ಪತ್ರಿಕೆಯ ಸುದ್ದಿಮನೆ ಹೇಗಿರುತ್ತೆ? ಹೇಗೆ ಕೆಲಸ ನಿರ್ವಹಿಸುತ್ತೆ? ಸುದ್ದಿಗಳನ್ನು ಹೇಗೆ ಸಂಸ್ಕರಿಸಿ ಮುದ್ರಣಕ್ಕೆ ಸಿದ್ಧಪಡಿಸುತ್ತಾರೆ ಎಂಬ ವಿಷಯಗಳನ್ನು ಮೊದಲ ಅಧ್ಯಾಯಗಳಲ್ಲಿ ಬಹಳ ಸೊಗಸಾಗಿ ವಿವರಿಸಿದ್ದಾರೆ. ಪ್ರಧಾನ ಸಂಪಾದಕರಿಂದ ಹಿಡಿದು ಎಲ್ಲ ಸಿಬ್ಬಂದಿ ಬಗ್ಗೆ ಮೊದಲು ಒಂದೆರಡು ಅಧ್ಯಾಯಗಳಲ್ಲಿ ಹೇಳಿದ್ದಾರೆ ಇಲ್ಲಿನ ಲೇಖಕರು. ಮುಖ್ಯವಾಗಿ ಒಂದು ಸುದ್ದಿಮನೆಯಲ್ಲಿ ಯಾವೆಲ್ಲ ವಿಭಾಗಗಳು ಇರುತ್ತವೆ ಎಂಬುದರ ಪರಿಚಯ ಇಲ್ಲಿದೆ. ಹೊರಗಡೆಯಿಂದ ನಿಂತು ಪ್ರತಿನಿತ್ಯ ಪತ್ರಿಕೆಯನ್ನು ನೋಡುವವರಿಗೆ, ಸುದ್ದಿಗಳ ಕುರಿತು ಪ್ರತಿಕ್ರಿಯಿಸುವವರಿಗೆ ಒಂದು ಪ್ರಾಥಮಿಕ ಮಾಹಿತಿಯನ್ನು ಈ ಪುಸ್ತಕ ಖಂಡಿತವಾಗಿಯೂ ನೀಡುತ್ತದೆ.
ಸುದ್ದಿಗಾರರಿಗೆ ಏನು ಗೊತ್ತಿರಬೇಕು ಎಂಬ ಅಧ್ಯಾಯದಲ್ಲಿ ಮೊದಲಿಗೆ ಕನ್ನಡ ಭಾಷೆ ಬಗ್ಗೆ ಹೇಳಿದ್ದಾರೆ. ಪತ್ರಿಕೆಗೆ ಬರೆಯಲು ಖಂಡಿತ ಭಾಷಾ ಪಾಂಡಿತ್ಯ ಬೇಕಿಲ್ಲ. ಸರಳ ಭಾಷೆ ಬೇಕು. ಭಾಷಾಡಂಬರ ಬೇಕಿಲ್ಲ. ಎಲ್ಲ ಶ್ರೀಸಾಮಾನ್ಯರಿಗೆ ಅರ್ಥವಾಗುವ ಸರಳವಾದ ಭಾಷೆ ನಿಮಗೆ ಗೊತ್ತಿದೆಯಾ? ಹಾಗಿದ್ದರೆ ನೀವು ಪತ್ರಕರ್ತರಾಗುವ ನಿಟ್ಟಿನಲ್ಲಿ ಪ್ರಯತ್ನ ಮಾಡಬಹುದು.
ನಾಗೇಶ್ ಹೆಗಡೆ, ಗಂಗಾಧರ ಹಿರೇಗುತ್ತಿಯವರಿಗೆ ಪತ್ರಿಕೋದ್ಯಮ ಪ್ರಶಸ್ತಿ
ಪತ್ರಕರ್ತನಿಗಿರಬೇಕಾದ ಇನ್ನೊಂದು ಮಹತ್ವದ ಗುಣ ಕಾಮನ್ಸೆನ್ಸ್. ಅಂದರೆ ಸಾಮಾನ್ಯ ಅರಿವು. ಪ್ರತಿನಿತ್ಯ ಸುದ್ದಿಗಳನ್ನು ಓದುವ ಶ್ರೀಸಾಮಾನ್ಯನ ಆಸಕ್ತಿ ತಿಳಿದುಕೊಂಡು, ಅದಕ್ಕೆ ತಕ್ಕಂತೆ ಸುದ್ದಿ ಸಂಗ್ರಹಣೆ ಮಾಡುವುದು ಪತ್ರಕರ್ತರ ಕರ್ತವ್ಯ.
ಸುದ್ದಿಮನೆಯಲ್ಲಿ ತಿಳಿದುಕೊಳ್ಳಲೇ ಬೇಕಾದ ಇನ್ನೊಂದು ಸಂಗತಿ ಅನುವಾದ. ಬೇರೆ ಭಾಷೆಯಿಂದ ಮಕ್ಕಿ ಕಾ ಮಕ್ಕಿ ಎಂಬಂಥ ಅನುವಾದ ಮಾಡಬಾರದು. ಅನುವಾದ ಕೂಡ ಕನ್ನಡದಲ್ಲೇ ಬರೆದಂತೆ ಇರಬೇಕು ಎಂಬ ಮಾಹಿತಿಯನ್ನು ಲೇಖಕರು ಕೊಡುತ್ತಾರೆ.
ಸುದ್ದಿಯಲ್ಲಿ ಮುಖ್ಯವಾಗಿ ಗೊತ್ತಿರಬೇಕಾದ ಅಂಶಗಳ ಬಗ್ಗೆ ಹೇಳುತ್ತಾರೆ. ಎಲ್ಲಿ, ಯಾವಾಗ, ಏನು ಇತ್ಯಾದಿ ಮೂಲಭೂತ ಅಂಶಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯಿದೆ.
ಪತ್ರಿಕಾರಂಗದ ಸಾಧಕರಿಗೆ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ
ಪುಟವಿನ್ಯಾಸ, ರೇಖಾಚಿತ್ರಗಳು, ಛಾಯಾಚಿತ್ರ, ಆನ್ಲೈನ್ ಪತ್ರಿಕೋದ್ಯಮ, ವರದಿಗಾರಿಕೆ... ಹೀಗೆ ಒಂದು ಪತ್ರಿಕೆ ಸುತ್ತ ಆವರಿಸಿಕೊಂಡ ಎಲ್ಲ ಅಂಶಗಳನ್ನು ಈ ಪುಸ್ತಕ ಹೊಂದಿದೆ.
ಒಟ್ಟಿನಲ್ಲಿ ಸುದ್ದಿಮನೆಯ ಮೂಲಭೂತ ಅಂಶಗಳನ್ನು ವಿವರಿಸುವ ಯತ್ನವಿದು. ಪತ್ರಕರ್ತರಾಗುವವರಿಗಂತೂ ಇದು ಓದಲೇಬೇಕಾದ ಪುಸ್ತಕ. ಅಲ್ಲಿ ಕೆಲಸ ಮಾಡಲು ಒಂದು ಗೈಡ್. ಅದಲ್ಲದೇ ಪ್ರತಿನಿತ್ಯ ಹೊರಗಡೆಯಿಂದ ಪತ್ರಿಕೆ ಓದಿ ಸುದ್ದಿಗಳನ್ನು ವಿಶ್ಲೇಷಿಸುವ ಸಾಮಾನ್ಯರು ಒಂದು ವಿಷಯದ ಗ್ರಹಿಕೆಗಾಗಿ ಈ ಪುಸ್ತಕವನ್ನು ಓದಬೇಕು. ಇಂಥ ಸುಂದರ ಪುಸ್ತಕವನ್ನು ಓದಿನ ಜಗತ್ತಿಗೆ ನೀಡಿದ ಎಲ್ಲ ಲೇಖಕರನ್ನು ಮತ್ತೊಮ್ಮೆ ಅಭಿನಂದಿಸೋಣ.
ಮಿಥಿಲಾ ಪ್ರಕಾಶನ ಈ ಪುಸ್ತಕವನ್ನು ಪ್ರಕಾಶಿಸಿದ್ದು ವಿನಾಯಕ ಕೋಡ್ಸರ ಇದರ ಸಂಪಾದಕರು. ಪುಸ್ತಕದ ಬೆಲೆ: 100 ರುಪಾಯಿ. ನಾಡಿನ ಎಲ್ಲ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಈ ಪುಸ್ತಕ ಲಭ್ಯವಿದೆ. ಕೊಂಡು ಓದಿ.