ದೇಶಾವಲೋಕನ ಸಮಾನ ಸಮಾಜದ ಕನಸಿಗೊಂದು ಮುನ್ನುಡಿ
ತಾನು ಬೆಳೆಯುವುದು ಮಾತ್ರವಲ್ಲ, ತನ್ನ ಸುತ್ತಲಿನ ಸಮಾಜವೂ ಬೆಳೆಯಬೇಕು ಎಂಬ ಉದಾತ್ತ ಮನೋಭಾವದಿಂದ ತಮ್ಮ ಸಂಪತ್ತನ್ನು ಧಾರೆಯೆರೆಯುತ್ತಿರುವ ಹುಬ್ಬಳ್ಳಿಯವರಾದ ಡಾ. ಗುರುರಾಜ್ ದೇಶಪಾಂಡೆ ಅವರು ಬರೆದಿರುವ 'ದೇಶಾವಲೋಕನ' ಪುಸ್ತಕ ಹುಬ್ಬಳ್ಳಿಯಲ್ಲಿ ಜುಲೈ 7, ಗುರುವಾರದಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆಯಾಗುತ್ತಿದೆ. ಉದ್ಯಮಶೀಲ ಯುವಕ-ಯುವತಿಯರ ಪಾಲಿಗೆ ದಾರಿದೀಪವಾಗಲಿರುವ ಈ ಪುಸ್ತಕ ಮತ್ತು ಲೇಖಕರ ಧ್ಯೇಯೋದ್ದೇಶಗಳ ಕುರಿತು ಅವಲೋಕನ ಇಲ್ಲಿದೆ - ಸಂಪಾದಕ.
ಜಾಗತಿಕ ಮಟ್ಟದಲ್ಲಿ ಅತ್ಯಂತ ಯಶಸ್ವಿಯಾದ ಉದ್ಯಮಪತಿಯೊಬ್ಬ, ಬಿಲಿಯಾಧಿಪತಿಯೊಬ್ಬ ಸಮಾನ ಸಮಾಜದ ಕನಸು ಕಾಣುವುದು, ಅದಕ್ಕಾಗಿ ತನ್ನ ಸ್ವಂತ ಸಂಪತ್ತನ್ನು ಧಾರೆಯೆರೆಯುವುದು ಅಪರೂಪ. ಅದರಲ್ಲಿಯಂತೂ, ದೇಶ ಬಿಟ್ಟು ಮೂರು ದಶಕಗಳ ನಂತರ ಕೂಡ ನಮ್ಮೂರು ಹುಬ್ಬಳ್ಳಿ ಮತ್ತು ಅದರ ಸುತ್ತಮುತ್ತಲಿನ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಎಂಬ ಧ್ಯೇಯ ಇಟ್ಟುಕೊಳ್ಳುವುದು ಅಪರೂದದಲ್ಲೊಂದು ಅಪರೂಪ.
ಅಂತಹ ಅಪರೂಪದಲ್ಲೊಂದು ಅಪರೂಪ ಡಾ. ಗುರುರಾಜ್ ದೇಶಪಾಂಡೆ. ಗುರುರಾಜ್ ಮತ್ತು ಅವರ ಪತ್ನಿ ಜಯಶ್ರೀ ದೇಶಪಾಂಡೆ ಫೌಂಡೇಷನ್ ಟ್ರಸ್ಟಿಗಳಾಗಿದ್ದಾರೆ. ಗುರುರಾಜ್ ಅವರು ಕುಟುಂಬದ ಒಡೆತನ ಹೊಂದಿರುವ ಬಂಡವಾಳ ಹೂಡಿಕೆ ಕಂಪೆನಿ ಸ್ಪಾರ್ಟಾ ಗ್ರೂಪ್ ಎಲ್ಎಲ್ಸಿಯ ಪ್ರೆಸಿಡೆಂಟ್ ಮತ್ತು ಚೇರ್ಮನ್.
ಮೂರು ದಶಕಗಳಿಂದ ಉದ್ಯಮಶೀಲರಾಗಿರುವ ಗುರುರಾಜ್ ಅವರು ಅಮೆರಿಕದಲ್ಲಿ ಕ್ಯಾಸ್ಕೇಡ್ ಕಮ್ಯುನಿಕೇಷನ್ಸ್ ಮತ್ತು ಸೈಕಮೋರ್ ನೆಟ್ವರ್ಕ್ಸ್ನಂತಹ ಹಲವಾರು ಕಂಪೆನಿಗಳನ್ನು ಸ್ಥಾಪಿಸಿ, ಆ ಕಂಪೆನಿಗಳನ್ನು ಯಶಸ್ಸಿನ ತುತ್ತ ತುದಿಗೇರಿಸಿದ ಅನುಭವ ಹೊಂದಿದವರು.
ಅಮೆರಿಕದ ಬಾಸ್ಟನ್ನಲ್ಲಿ ನೆಲೆಸಿರುವ ಗುರುರಾಜ್ ಎಂಐಟಿ ಕಾರ್ಪೋರೇಷನ್ನ ಅಜೀವ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇಶಪಾಂಡೆ ಫೌಂಡೇಷನ್ ಭಾರತ, ಅಮೆರಿಕ ಮತ್ತು ಕೆನಡಾದಲ್ಲಿ ಸಮಾಜಮುಖಿ ಸೇವೆಯಲ್ಲಿ ನಿರತವಾಗಿದೆ. ಅಮೆರಿಕದ ಮಸಾಚುಸೆಟ್ಸ್ನಲ್ಲಿರುವ ಎಂಐಟಿಯಲ್ಲಿ ದೇಶಪಾಂಡೆ ಸೆಂಟರ್ ಫಾರ್ ಟೆಕ್ನಲಾಜಿಕಲ್ ಇನೊವೇಷನ್; ಭಾರತದ ಹುಬ್ಬಳ್ಳಿಯಲ್ಲಿ ದೇಶಪಾಂಡೆ ಸೆಂಟರ್ ಫಾರ್ ಸೋಷಿಯಲ್ ಆಂತ್ರಪ್ರನರ್ಷಿಪ್; ಮಸಾಚುಸೆಟ್ಸ್ನ ಲೊವೆಲ್/ಲಾರೆನ್ಸ್ನಲ್ಲಿ ಆಂತ್ರಪ್ರನರ್ಷಿಪ್ ಫಾರ್ ಆಲ್- ಇಫಾರ್ ಆಲ್; ಕೆನಡಾದ ನ್ಯೂ ಬ್ರಾನ್ಸ್ವಿಕ್ ವಿಶ್ವವಿದ್ಯಾಲಯದ ಪಾಂಡ್-ದೇಶಪಾಂಡೆ ಸೆಂಟರ್ಗಳನ್ನು ದೇಶಪಾಂಡೆ ಫೌಂಡೇಷನ್ ಸ್ಥಾಪಿಸಿದೆ. ಆ ಮೂಲಕ ಸಾಮಾಜಿಕ ಅನ್ವೇಷಣಾ ಯೋಜನೆಗಳಲ್ಲಿ ದೇಶಪಾಂಡೆ ಫೌಂಡೇಷನ್ ನಿರತವಾಗಿದೆ.
ಹುಬ್ಬಳ್ಳಿ ಮೂಲದ ಗುರುರಾಜ್ ಅವರು ಮದ್ರಾಸ್ (ಈಗಿನ ಚೆನ್ನೈ)ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಬಿಟೆಕ್ ಮಾಡಿದವರು. ನಂತರ ಕೆನಡಾದ ನ್ಯೂ ಬ್ರನ್ಸ್ವಿಕ್ ವಿಶ್ವವಿದ್ಯಾಲಯದಲ್ಲಿ ಎಂಇ ಮುಗಿಸಿ, ಕ್ವೀನ್ಸ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪಡೆದರು. ಅದಾದ ಮೇಲೆ ಕೆನಡಾದಿಂದ ಅಮೆರಿಕಕ್ಕೆ ಹೋಗಿ ನೆಲೆನಿಂತು ಉದ್ಯಮಶೀಲರಾದರು.
ದೇಶಾವಲೋಕನ ಪುಸ್ತಕದ ಕುರಿತು
ಇದು ಡಾ. ಗುರುರಾಜ್ ದೇಶಪಾಂಡೆ ಅವರು ಬರೆದ ಕೃತಿ. ಭಾರತ, ಅಮೆರಿಕ, ಕೆನಡಾ ಅಥವಾ ಯುರೋಪ್ನ ಯಾವುದೇ ಭಾಗಗಳಿಗೆ ಹೋದರೂ, ಈಗ ಎಲ್ಲೆಡೆ ಕೇಳಿಬರುತ್ತಿರುವ ಪದವೆಂದರೆ, ಸ್ಟಾರ್ಟ್ಅಪ್. ಈ ಮೂಲಕ ಜಗತ್ತಿನ ಔದ್ಯಮಿಕ ರೂಪವೇ ಈಗ ಸ್ಥಿತ್ಯಂತರಗೊಂಡಿದೆ. ಅದರಲ್ಲಂತೂ ಭಾರತವನ್ನು ಈಗ ಸ್ಟಾರ್ಟ್ಅಪ್ ಪ್ರಂಪಚದ ರಾಜಧಾನಿ ಎಂದೇ ಹೇಳಬಹುದು.
ಸ್ಟಾರ್ಟ್ಅಪ್ ಮೂಲಕ ಸಾಮಾಜಿಕ-ಆರ್ಥಿಕ ಸ್ಥರದಲ್ಲಿ ತಮ್ಮದೇ ಛಾಪನ್ನು ಒತ್ತಲು, ಶಾಶ್ವತ ಹೆಜ್ಜೆ ಗುರುತು ಮೂಡಿಸಲು ಉತ್ಸಾಹದಿಂದ ಮುನ್ನುಗ್ಗುತ್ತಿರುವ ಯುವಪಡೆಯನ್ನು ಕೇವಲ ನಮ್ಮ ರಾಜಧಾನಿಗಳಲ್ಲಿ, ದೊಡ್ಡ-ದೊಡ್ಡ ನಗರಗಳಲ್ಲಿ ಮಾತ್ರವಲ್ಲ ಎರಡು, ಮೂರನೇ ಸ್ಥರದ ನಗರ- ಪಟ್ಟಣಗಳಲ್ಲಿ ಕೂಡ ಕಾಣಬಹುದು.
ಸುಮಾರು ಒಂದು ದಶಕದ ಹಿಂದಿನವರೆಗೆ ಭಾರತದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದ ಪ್ರತಿಯೊಬ್ಬ ಯುವಕ-ಯುವತಿಯೂ ಒಂದು ಭದ್ರ ಕೆಲಸ, ಉತ್ತಮ ಕೆರಿಯರ್ನ ಕನಸು ಕಾಣುತ್ತಿದ್ದರು. ಆದರಿಂದು ಆ ಪೈಕಿ ಅನೇಕ ಉತ್ಸಾಹಿಗಳು ಉದ್ಯಮಶೀಲರಾಗಲು ಮುಂದಡಿಯಿಡುತ್ತಿದ್ದಾರೆ. ಇವರಲ್ಲಿ ಕೆಲವರು ಉದ್ಯಮಶೀಲ ಬದುಕನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಕೆಲವರು ಯಶಸ್ಸಿನ ಹಿಂದೆ ಯಶಸ್ಸು ಕಟ್ಟುತ್ತಿದ್ದಾರೆ. ಹಲವರು ಸೋಲಿನ ಮೇಲೆ ಸೋಲುಂಡು, ನಂತರ ಯಶಸ್ಸು ಪಡೆಯವ ಯತ್ನ ಮಾಡುತ್ತಿದ್ದಾರೆ.
ಇಂತಹ ಉತ್ಸಾಹ ತುಂಬಿದ ವಾತಾವರಣದ ನಡುವೆ, ನಾವು ಕೆಲವೇ ಕೆಲವು ಯಶಸ್ಸಿನ ಕಥೆ ಕೇಳುತ್ತಿದ್ದೇವೆ. ಯಾರಿಗೂ ಗೊತ್ತಿಲ್ಲದ ಹಲವಾರು ಸೋಲಿನ ಕಥೆಗಳು ಸ್ಟಾರ್ಟ್ಅಪ್ ಪ್ರಪಂಚದಲ್ಲಿ ಕಳೆದುಹೋಗುತ್ತಿವೆ. ಇದಕ್ಕೆ ಉದ್ಯಮಶೀಲರಾಗುತ್ತಿರುವ ಯುವಕರೇ ಸಂಪೂರ್ಣ ಕಾರಣರಲ್ಲ. ಅವರ ಸಾಹಸವನ್ನು ನಾವೆಲ್ಲ ಮೆಚ್ಚಲೇಬೇಕು. ಉದ್ಯಮಶೀಲ ಪಯಣದಲ್ಲಿ ಅವರು ಸಣ್ಣ-ಸಣ್ಣ ತಪ್ಪು ಮಾಡಿ ಅವರು ಎಡವುತ್ತಿದ್ದಾರೆ ಎಂಬ ಅಂಶವನ್ನು ಅರ್ಥ ಮಾಡಿಕೊಳ್ಳಬೇಕು. ಆ ಹಿನ್ನಲೆಯಲ್ಲಿ ಸ್ಟಾರ್ಟ್ಅಪ್ ಪ್ರಪಂಚದಲ್ಲಿ ಎಚ್ಚರದಿಂದ ಹೇಗೆ ಹೆಜ್ಜೆ ಇಡಬೇಕು ಎನ್ನುವ ಅಂಶಗಳನ್ನು ಒಳಗೊಂಡ 'ದೇಶಾವಲೋಕನ' ಉದ್ಯಮಶೀಲ ಯುವಕ-ಯುವತಿಯರ ಪಾಲಿಗೆ ದಾರಿದೀಪ.
ಪುಸ್ತಕ ಬಿಡುಗಡೆಯ ವಿಳಾಸ : ದೇಶಪಾಂಡೆ ಫೌಂಡೇಷನ್ ಸಭಾಂಗಣ, ದೇಶಪಾಂಡೆ ಸೆಂಟರ್ ಫಾರ್ ಸೋಷಿಯಲ್ ಆಂತ್ರಪ್ರನರ್ಷಿಪ್ ಕಟ್ಟಡ, ಬಿವಿಬಿ ಇಂಜಿನಿಯರಿಂಗ್ ಕಾಲೇಜು ಆವರಣ, ವಿದ್ಯಾನಗರ, ಹುಬ್ಬಳ್ಳಿ - 580 031.