ಗೂಢಾರ್ಥ ನೀಡುತ್ತಲೇ ಕುತೂಹಲ ಕೆರಳಿಸುವ 'ಹಂಸಯಾನ'
ಇತ್ತೀಚೆಗೆ ಮೂಡಬಿದಿರೆಯಲ್ಲಿ ನಡೆದ ಆಳ್ವಾಸ್ ನುಡಿಸಿರಿಯಲ್ಲಿ ಲೋಕಾರ್ಪಣೆಗೊಂಡ ಕನ್ನಡ ಲೇಖಕಿ ತೇಜಸ್ವಿನಿ ಹೆಗಡೆ ಅವರ 'ಹಂಸಯಾನ' ಕೃತಿಯ ಕುರಿತು ಹಲವು ಸಾಹಿತ್ಯ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಥ್ರಿಲ್ಲರ್ ಕಾದಂಬರಿಯಾದರೂ, ಸಾಮಾಜಿಕ ಕಾಳಜಿ, ಆಧ್ಯಾತ್ಮಿಕತೆಯನ್ನೂ ತನ್ನೊಳಗೆ ಹುದುಗಿಸಿಕೊಂಡಿರುವ 'ಹಂಸಯಾನ'ದ ಕಿರುನೋಟ ಇಲ್ಲಿದೆ.
ತೇಜಸ್ವಿನಿ ಅವರ 'ಹೊರಳುದಾರಿ' ಕೃತಿಗೆ ಸ್ವಸ್ತಿ ಪ್ರಕಾಶನ ಪ್ರಶಸ್ತಿ ಪ್ರದಾನ
ಕೃತಿ:
ಹಂಸಯಾನ
ಲೇಖಕಿ:
ತೇಜಸ್ವಿನಿ
ಹೆಗಡೆ
ಪುಟ
ಸಂಖ್ಯೆ:
240
ಬೆಲೆ:
ರೂ.
200/-
ಜಯಶ್ರೀ
ಪ್ರಕಾಶನ
'ಹಂಸಯಾನ' ಹೆಸರಿನ ಕಾದಂಬರಿಯ ಬಿಡುಗಡೆ ಸಮಾರಂಭಕ್ಕೆ ಹೋಗುವಾಗ ಕಾದಂಬರಿಯ ಕಥಾವಸ್ತುವಿನ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಇಷ್ಟು ಚಂದದ ಹೆಸರು ಹೊತ್ತ ಪುಸ್ತಕದ ಕಥಾಹಂದರ ಹೇಗಿರಬಹುದೆಂಬ ಕುತೂಹಲವಷ್ಟೇ ಇತ್ತು. ಪುಸ್ತಕ ಪ್ರೀತಿ, ಬರವಣಿಗೆಯ ಬಗೆಗಿನ ಸೆಳೆತ, ಈ ಬರವಣಿಗೆಯ ನಂಟಿನಿಂದಲೇ ಹುಟ್ಟಿಕೊಂಡ ಸ್ನೇಹ ಇವಿಷ್ಟೇ ಕಾರಣಗಳಿಂದಾಗಿ ನಾನು ಅಂದು ಅಲ್ಲಿದ್ದೆ.
ತೇಜಸ್ವಿನಿಯವರ 'ಹಂಸಯಾನ' ಕಾದಂಬರಿಯ ಲೋಕಾರ್ಪಣೆಗೆ ಆಹ್ವಾನ
ಕಾರ್ಯಕ್ರಮದಲ್ಲಿ ಪುಸ್ತಕ ಪರಿಚಯ ಮಾಡಿದಾಗಲೇ ಗೊತ್ತಾಗಿದ್ದು ಇದೊಂದು ಪತ್ತೇದಾರಿ ಕಥಾಹಂದರ ಹೊಂದಿದ ಕಾದಂಬರಿ ಎಂದು. ಸಹಜವಾಗಿಯೇ ಕುತೂಹಲ ಇನ್ನೂ ಹೆಚ್ಚಾಗಿತ್ತು.
'ಹಂಸಯಾನ' ಎಂಬ ಹೆಸರಲ್ಲೇ ಗೂಢಾರ್ಥವಿದೆ ಎಂದು ಕಾದಂಬರಿಯ ಪುಟಗಳು ಸರಿದಾಗಲೇ ಗೊತ್ತಾಗಿದ್ದು. ಪ್ರತಿ ಪಾತ್ರಗಳ ಪುಟ್ಟ ಪುಟ್ಟ ವಿವರಗಳು, ನಿಸರ್ಗ ಸೌಂದರ್ಯದ ಚಿತ್ರಣ, ವಿರಳ ಔಷಧಿ ಸಸ್ಯಗಳ ಮಾಹಿತಿ ಇವೆಲ್ಲವೂ ಕಥೆಯ ಓಘಕ್ಕೆ ತಡೆಯೊಡ್ಡದೇ ಕಥೆಯೊಂದಿಗೇ ಸಾಗುವಂತೆ ಮಾಡಿದ್ದು ಲೇಖಕಿಯ ಜಾಣ್ಮೆ ಎಂದೇ ನನಗೆ ಅನ್ನಿಸಿತು.
ಕಥೆಯು ಸಾಗಿದಂತೆ ರಹಸ್ಯ ಬಯಲಾಗದೇ ಇನ್ನೂ ಹೊಸ ಹೊಸ ಗೌಪ್ಯ ಸಂಗತಿಗಳು ಎದುರಾಗಿ ಕಥೆಯ ಅಂತ್ಯದವರೆಗೂ ಓದುಗರನ್ನು ಮೊದಲಿನಷ್ಟೇ ಕುತೂಹಲಿಗಳಾಗಿಯೇ ಒಯ್ಯುತ್ತದೆ. ಕಥೆಯಲ್ಲಿ ಬಳಸಿರುವ ಕಾಲ್ಪನಿಕ ಊರಿನ ಹೆಸರುಗಳೂ ಪರಿಸರವೂ ತುಂಬ ಆಪ್ತವಾಗಿದ್ದು, ಕಥೆ ನಮ್ಮ ಕಣ್ಮುಂದೆಯೇ ನಡೆಯತ್ತಿದೆಯೇನೋ ಎನ್ನುವಷ್ಟು ಮನಸ್ಸಿಗೆ ಹತ್ತಿರವಾಗುತ್ತದೆ.
ನಾಯಕಿಯ ನಿರಂತರ ಹುಟುಕಾಟ, ಗುರಿಮುಟ್ಟಲೇಬೇಕೆಂಬ ಛಲ, ರುಕ್ಮಿಣಿಯಮ್ಮನ ಒಂದು ಬಗೆಯ ಹೋರಾಟ, ಕಾಳಮ್ಮನ ನಿಸ್ಪೃಹ ಕಾಳಜಿ, ಬೆಟ್ಟದಜ್ಜನ ಅಧ್ಯಾತ್ಮ ಎಲ್ಲವೂ ಬೆರಗು ಮೂಡಿಸುತ್ತದೆ. ಬೆಟ್ಟದಜ್ಜನ ಮಾತುಗಳು 'ನಮಗೆ ಕಂಡಷ್ಟು,ದಕ್ಕಿದಷ್ಟು ನಮ್ಮ ಪ್ರಾಪ್ತಿ', 'ಅನುಭವವನ್ನು ಹಂಚಿಕೊಳ್ಳಬಹುದೇ ಹೊರತು ಅನುಭೂತಿಯನ್ನಲ್ಲ' ಇವೆಲ್ಲ ನಮ್ಮನ್ನು ಇನ್ನಷ್ಟು ಅಧ್ಯಾತ್ಮದ ಆಳಕ್ಕೆ ಇಳಿಸುತ್ತದೆ.
ಪುಸ್ತಕ ಓದಿ ಮುಗಿಯುವ ಹೊತ್ತಿಗೆ ಅನಿಸಿದ್ದು ಇದು ಬರೀ ಥ್ರಿಲ್ಲರ್ ಕಾದಂಬರಿಯಲ್ಲ, ಸಾಮಾಜಿಕ ಕಳಕಳಿ, ಆಡಂಬರ ವಂಚನೆಗಳೆಲ್ಲವನ್ನೂ ಮೀರಿ ಕೇವಲ ಆತ್ಮೋನ್ನತಿಯ ದಾರಿಯಲ್ಲಿ ಅನಾವರಣವಾಗಬಹುದಾದ ಅಧ್ಯಾತ್ಮ, ಕಥೆಗೆ ಪೂರಕವಾಗಿ ಒಂದಿಷ್ಟು ರಹಸ್ಯಗಳು ಎಲ್ಲವೂ ಮಿಳಿತವಾಗಿರುವ ಒಂದು ವಿಶಿಷ್ಟ ಕಾದಂಬರಿ.
ತಮ್ಮ ಮೊದಲನೇ ಪ್ರಯತ್ನದಲ್ಲೇ ಇಂಥ ಒಂದು ವೈವಿಧ್ಯಮಯ ಕಥಾಹಂದರವುಳ್ಳ ಕಾದಂಬರಿಯನ್ನು ನೀಡಿದ್ದಕ್ಕೆ ತೇಜಸ್ವಿನಿಯವರಿಗೆ ಅಭಿನಂದನೆಗಳು.