ಪತ್ರಕರ್ತರೆಂದು ಬೀಗದ ಅಧಿಕಾರಸ್ಥರಿಗೆಂದೂ ಬಾಗದ ಪ.ಗೋ
ವೃತ್ತಿ ಧರ್ಮ ಹಾಗೂ ಸ್ವಾಭಿಮಾನವೇ ಉಸಿರು ಎಂದು ಬದುಕಿದ ಒಬ್ಬ ಆದರ್ಶ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣರ ವೃತ್ತಿ ಜೀವನದ ಬಗ್ಗೆ ಅವರ ಗರಡಿಯಲ್ಲೇ ಪಳಗಿ, ಅವರ ಒಡನಾಡಿಯಾಗಿದ್ದ ಚಿದಂಬರ ಬೈಕಂಪಾಡಿಯವರು ಬರೆದ ಸರಣಿ ಲೇಖನಗಳು, ರಂಗಸ್ವಾಮಿ ಮೂಕನಹಳ್ಳಿಯವರ ಏಕಂ ಪ್ರಕಾಶನದ ಮೂಲಕ 'ಪ.ಗೋ ಪ್ರಪಂಚ 'ಎಂಬ ಪುಸ್ತಕವಾಗಿ ಹೊರ ಬಂದಿದೆ.
ಪ.ಗೋ ಅಂದರೆ ಪದ್ಯಾಣ ಗೋಪಾಲಕೃಷ್ಣರು, ಪತ್ರಿಕಾರಂಗದ ವಿವಿಧ ಮಜಲುಗಳಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಪತ್ರಿಕಾ ಸೇವೆಗೈದವರು. ಇವರು ಬೆಂಗಳೂರಿನ ವಿಶ್ವ ಕರ್ನಾಟಕ ಎಂಬ ಸಂಜೆ ಪತ್ರಿಕೆಯಲ್ಲಿ 1956ರಲ್ಲಿ ಉಪಸಂಪಾದಕರಾಗಿ ವೃತ್ತಿಜೀವನ ಪ್ರಾರಂಭಿಸಿದರು. (ನಮ್ಮ ಬೆಂಗಳೂರು ಜೋಗಿ ಕಂಡಂತೆ)
ತದನಂತರ, ತಾಯಿನಾಡು , ಕಾಂಗ್ರೆಸ್ ಸಂದೇಶ , ಸಂಯುಕ್ತ ಕರ್ನಾಟಕ ಮತ್ತು ಶಕ್ತಿ ಎಂಬ ಪತ್ರಿಕೆಗಳಲ್ಲಿ ಬೆಂಗಳೂರಿನಲ್ಲಿ ಕೆಲಸಮಾಡಿ ನಂತರ 1959ರ ಸುಮಾರಿಗೆ ಮಂಗಳೂರಿಗೆ ಬಂದು ನೆಲಸಿ ನವಭಾರತ, ಕನ್ನಡವಾಣಿ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರ್.
ಇದಾದ ನಂತರ ಇಂಡಿಯನ್ ಎಕ್ಸ್ಪ್ರೆಸ್, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಟೈಮ್ಸ್ ಆಫ್ ಡೆಕ್ಕನ್ ಪತ್ರಿಕೆಗಳ ಮಂಗಳೂರು ವರದಿಗಾರರಾಗಿ ಮುಂದುವರಿದರು. 1963-1964 ರಲ್ಲಿ ಮಂಗಳೂರಿನಲ್ಲಿ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗುವ ಮೂಲಕ, ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು ಪ.ಗೋ.
1994 ರಲ್ಲಿ ಕಾರ್ಯನಿರತ ಪತ್ರಿಕೋದ್ಯಮದಿಂದ ನಿವೃತ್ತಿ ಹೊಂದುವ ಮೊದಲು ತಮ್ಮ ಒಂಬತ್ತು ವರ್ಷಗಳನ್ನು ಇಂಗ್ಲಿಷ್ ಪತ್ರಿಕಾರಂಗದ 'ಟೈಮ್ಸ್ ಆಫ್ ಇಂಡಿಯಾ'ಕ್ಕೆ ಸಲ್ಲಿಸಿ 10-8-1997ರಂದು ಈ ಪ್ರಪಂಚಕ್ಕೆ ವಿದಾಯ ಹೇಳಿದರು. 1976ರಲ್ಲಿ ಪ್ರಾರಂಭಗೊಂಡ ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಸದಸ್ಯ ಹಾಗೂ ಸಂಘದ ಪ್ರಥಮ ಕಾರ್ಯದರ್ಶಿಯಾಗಿದ್ದವರು ಪ.ಗೋಪಾಲಕೃಷ್ಣ.
ಲೇಖಕರ ಪ್ರಕಾರ ಪ.ಗೋ ಅವರ ಆರ್ಥಿಕ ಸ್ಥಿತಿ ಉತ್ತಮವಾಗಿರದಿದ್ದರೂ, ಹಣದ ಹಿಂದೆ ಬಿದ್ದು ಸ್ವಾಭಿಮಾನವನ್ನು ಬಲಿಕೊಟ್ಟವರಲ್ಲ ಅಥವಾ ಹಣ ಸಂಪಾದಿಸಲು ಅನ್ಯ ಮಾರ್ಗವನ್ನೂ ಅರಸಿದವರಲ್ಲ. ಪತ್ರಿಕಾ ಸೇವೆಯೆಂಬ ಯಜ್ಞದಲ್ಲಿ ಸಮಿತೆಯಾಗಿ ದುಡಿದವರು. ತನ್ನ ಲೇಖನಿಯ ಪ್ರಭಾವದಿಂದಲೇ ರಾಜಕಾರಣಿಗಳಿಗೆ ನಡುಕ ಹುಟ್ಟಿಸಿದವರು.
ಪ.ಗೋ ಅವರ ಜೀವನ ಶೈಲಿ ಹಾಗೂ ಎಲ್ಲರೊಡನೆ ವ್ಯವಹರಿಸುತ್ತಿದ್ದ ರೀತಿಯಿಂದಲೇ ಅವರ ಜಾತ್ಯಾತೀತ ಮನೋಭಾವನೆ ವ್ಯಕ್ತವಾಗುತಿತ್ತು. ಬ್ರಾಹ್ಮಣ ಹಾಗೂ ಯಾರು ದಲಿತರು ಎಂಬ ಚರ್ಚೆಗಳು ಉತ್ತುಂಗಕ್ಕೆ ತಲುಪಿದ್ದ ಕಾಲಘಟ್ಟದಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಅದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದವರು. (ಜಟಕಾ ಸಾಬಿ ಆಗಬೇಕೆಂದಿದ್ದವ ವಿವೇಕಾನಂದ ಆದ)
ಆ ವಿಚಾರವನ್ನು ಅವರು ಎಂದಿಗೂ ಸ್ವಾರ್ಥ ಸಾಧನೆಯ ಅಸ್ತ್ರವಾಗಿ ಬಳಸಲೇ ಇಲ್ಲ.ಆಗಿನ ಕಾಲದಲ್ಲಿ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿದ್ದ ಕೆಲ ಸೈದ್ಧಾಂತಿಕ ಶೀತಲ ಸಮರದ ಬಗ್ಗೆಯೂ ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ.
ಪ.ಗೋ ಅವರು ಪತ್ರಿಕಾಗೋಷ್ಟಿಗಳಲ್ಲಿ ಭಾಗವಹಿಸುವ, ವ್ಯಕ್ತಿಯ ಹಿನ್ನೆಲೆ ಗಮನಿಸಿ ಅವರಿಂದ ಸ್ಪಷ್ಟ ಉತ್ತರ ಹೊರಡಿಸುವಂತಹ ಕ್ಲಿಷ್ಟಕರ ಪ್ರಶ್ನೆಯನ್ನು ಸಿದ್ದಪಡಿಸುತ್ತಿದ್ದರು . ಪತ್ರಕರ್ತ ಯಾವುದಾದರೂ ಪತ್ರಿಕಾ ಗೋಷ್ಠಿಗೆ ತೆರಳುವಾಗ, ಪೆನ್ನು, ಪೇಪರಿನ ಜೊತೆಗೆ ಅಲ್ಲಿ ಸಂಗ್ರಹಿಸಬೇಕಾದ ವಿಚಾರಗಳ ಬಗ್ಗೆ ಮಾನಸಿಕವಾಗಿ ಸಿದ್ಧವಾಗುವುದು ಅತೀ ಮುಖ್ಯ ಎಂದು ಪ.ಗೋ ಪ್ರತಿಪಾದಿಸುತ್ತಿದ್ದರು. ಮುಂದಿನ ಪುಟ ಕ್ಲಿಕ್ಕಿಸಿ