'ಅಮ್ಮನ ಜೋಳಿಗೆ' ಪ್ರಬಂಧ ಸಂಕಲನದಲ್ಲಿ ಏನಿದೆ?
ಬೆಂಗಳೂರು, ಏಪ್ರಿಲ್ 13 : ಯುವ ಕವಯಿತ್ರಿಯಾಗಿಯೂ ಪ್ರವರ್ಧಮಾನಕ್ಕೆ ಬರುತ್ತಿರುವ ಪತ್ರಕರ್ತೆ ಕೋಡಿಬೆಟ್ಟು ರಾಜಲಕ್ಷ್ಮಿ ಅವರ ಪ್ರಬಂಧಗಳ ಸಂಕಲನ 'ಅಮ್ಮನ ಜೋಳಿಗೆ' ಏಪ್ರಿಲ್ 16ರ ಶನಿವಾರ, ಸಂಜೆ 4.30ಕ್ಕೆ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.
ಕರ್ನಾಟಕ ಲೇಖಕಿಯರ ಸಂಘದ ಸಹಯೋಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಅಭಿನವ ಪ್ರಕಾಶನ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದೆ. ಇದೇ ಸಂದರ್ಭದಲ್ಲಿ 'ಆಧುನಿಕ ಬದುಕು ಮತ್ತು ಸಾಹಿತ್ಯ' ವಿಷಯ ಕುರಿತು ವಿಚಾರಗೋಷ್ಠಿಯೂ ನಡೆಯಲಿದೆ.
ಖ್ಯಾತ ಲೇಖಕಿ ಡಾ. ವಸುಂಧುರಾ ಭೂಪತಿ ಅವರು ಅಧ್ಯಕ್ಷತೆ ವಹಿಸುತ್ತಿದ್ದು, ಖ್ಯಾತ ಪ್ರಸೂತಿ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಮತ್ತು ಆಪ್ತ ಸಮಾಲೋಚಕ ತಜ್ಞ ಎಂ ಶ್ರೀಧರ ಮೂರ್ತಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ.
ರಾಜಲಕ್ಷ್ಮಿಯವರ ಈ ನಿರೂಪಣೆಗಳು ಅದೆಷ್ಟು ತಾಜಾ ಆಗಿವೆ ಎಂದರೆ, ಪ್ರಿಯವಾದ ತಿಂಡಿಯನ್ನು ನಾವು ನಿಧಾನವಾಗಿ ತಿಂದು ಸವಿಯುತ್ತೇವಲ್ಲ ಹಾಗೆ ಸವಿಯುತ್ತಾ ಓದುವ ಆಸೆಯಾಗುವಷ್ಟು, ಎಂದಿದ್ದಾರೆ ಎಂ.ಎಸ್. ಆಶಾದೇವಿ. 'ಅಮ್ಮನ ಜೋಳಿ'ಗೆಯಲ್ಲಿ ಏನಿದೆ ಎಂದು ತಿಳಿಯಲು ಖಂಡಿತ ಶನಿವಾರ ಬಿಡುವು ಮಾಡಿಕೊಂಡು ಬನ್ನಿ.
ಸ್ಥಳ : ಸೇತೂರಾವ್ ಸಭಾಂಗಣ, ವಿಜ್ಞಾನ ಭವನ, 2ನೇ ಮಹಡಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬಿಡಿಎ ಸಂಕೀರ್ಣದ ಸಮೀಪ, ಬನಶಂಕರಿ 2ನೇ ಹಂತ, ಬೆಂಗಳೂರು - 560 070.