ಛಂದ ಪುಸ್ತಕದಿಂದ ಹೊಸ ಕಥಾಸಂಕಲನ ಬಿಡುಗಡೆ
ಬೆಂಗಳೂರು, ಆ. 24 : ಯುವ ಬರಹಗಾರರಿಗೆ ಮತ್ತು ಹೊಸ ಲೇಖಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಛಂದ ಪುಸ್ತಕ ಪ್ರಕಾಶನ ಪ್ರತಿವರ್ಷ ಸಣ್ಣಕಥಾ ಸ್ಪರ್ಧೆಯನ್ನು ನಡೆಸುತ್ತಿರುತ್ತದೆ ಮತ್ತು ಆಯ್ಕೆಯಾದ ಪುಸ್ತಕವನ್ನು ಬಿಡುಗಡೆ ಮಾಡುತ್ತಿರುತ್ತದೆ. ಅಂಥದೊಂದು ಪುಸ್ತಕ ಬಿಡುಗಡೆಯ ಸಂಭ್ರಮ ಮತ್ತೆ ಬೆಂಗಳೂರಿನ ಪುಸ್ತಕ ಪ್ರೇಮಿಗಳ ಎದುರಿಗೆ ಬಂದಿದೆ.
ಛಂದ ಪುಸ್ತಕ ಸ್ಪರ್ಧೆಯಲ್ಲಿ 2013ರಲ್ಲಿ ಬಹುಮಾನ ಪಡೆದ ಕೃತಿ, ಮೌನೇಶ್ ಬಡಿಗೇರ್ ಅವರ 'ಮಾಯಾ ಕೋಲಾಹಲ' ಎಂಬ ಶೀರ್ಷಿಕೆಯ ಕಥಾಸಂಕಲನ ಆಗಸ್ಟ್ 25, ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಚಾಮರಾಜಪೇಟೆ, ಪಂಪ ಮಹಾಕವಿ ರಸ್ತೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬಿಡುಗಡೆಯಾಗುತ್ತಿದೆ.
ಸಾಹಿತ್ಯ ಪ್ರೇಮಿಗಳಿಗೆ ಇದಕ್ಕಿಂತ ರಸಗವಳ ಇನ್ನೇನು ಬೇಕು? ಹೊಸ ಮತ್ತು ಹಳೆ ಪುಸ್ತಕಗಳನ್ನು ಕೊಳ್ಳುವುದು, ಹೊಸ ಬರಹಗಳನ್ನು ಓದುವುದು, ಹೊಸ ಗೆಳೆಯರನ್ನು ಪರಿಚಯ ಮಾಡಿಕೊಳ್ಳುವುದು, ಹಳೆ ಗೆಳೆಯ ಗೆಳತಿಯರನ್ನು ಕಂಡು ಭೇಟಿಯಾಗುವುದು, ಜೊತೆಗೆ ಪುಸ್ತಕ ಬಿಡುಗಡೆಗೆ ಬಂದ ಘಟಾನುಘಟಿ ಸಾಹಿತಿಗಳನ್ನು ಕಂಡು ಮಾತನಾಡಿಸುವುದು, ಹರಟೆ ಹೊಡೆಯುವುದು, ಫೋಟೋ ಕ್ಲಿಕ್ಕಿಸುವುದು, ಫೇಸ್ ಬುಕ್ಕಲ್ಲಿ ಹಾಕಿಕೊಳ್ಳುವುದು.
ಮೌನೇಶ್ ಬಡಿಗೇರ್ ಅವರ ಹೊಸ ಪುಸ್ತಕ 'ಮಾಯಾ ಕೋಲಾಹಲ' ಕೃತಿಯ ಕುರಿತು ಖ್ಯಾತ ವಿಮರ್ಶಕ ಟಿ.ಪಿ. ಅಶೋಕ್ ಅವರು ಮಾತನಾಡಲಿದ್ದಾರೆ. ಜೊತೆಗೆ, 'ಹೊಸ ಕಾಲ, ಹೊಸ ಬರಹ, ಹೊಸ ಸಂಕಟಗಳು' ಎಂಬ ವಿಷಯ ಕುರಿತು ಆನಂದ ಝಂಜರವಾಡ ಅವರು ಉಪನ್ಯಾಸವನ್ನು ನೀಡಲಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬರುವವರು ಮನೆಯಲ್ಲಿ ಉಪಹಾರ ಮುಗಿಸಿಕೊಂಡು ಬರಬೇಕಿಲ್ಲ, ಉಪಹಾರ ಆಯೋಜಿಸಲಾಗಿದೆ.