ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೌಢ್ಯ ನಾಶವಾಗಬೇಕಾದರೆ ಪ್ರಳಯ ಆಗಲೇಬೇಕೆ?

By ರಾಜಶೇಖರ ಹಿರೇಮಠ, ಬಾಗಲಕೋಟೆ
|
Google Oneindia Kannada News

Book by Osho
"ಯಾವುದೇ ರೀತಿಯಿಂದ ನೋಡಿದರೂ ಬದುಕಿನ ವಿಷಯದಲ್ಲಿ ಯಾವುದೇ ಭವಿಷ್ಯ ಕಾಣಿಸುತ್ತಿಲ್ಲ. ನಾವೀಗ ಬಹುತೇಕ ರಸ್ತೆಯ ಅಂಚಿಗೆ ಬಂದು ನಿಂತಿದ್ದೇವೆ. ಈ ಸತ್ಯವನ್ನು ಒಪ್ಪಿಕೊಳ್ಳಲು ತುಂಬಾ ಖೇದವಾಗುತ್ತಿದೆ. ಆದರೆ ಅದನ್ನು ಗುರುತಿಸುವುದು ಮತ್ತು ಒಪ್ಪಿಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ. ಈ ಗುರುತಿಸುವಿಕೆಯಲ್ಲಿಯೇ ನಾವು ಏನಾದರೂ ಬದಲಾವಣೆ ತರುವ ದಿಕ್ಕಿನಲ್ಲಿ ಪ್ರಯತ್ನಿಸಲು ದಾರಿ ತೋರಬಹುದು. ಪ್ರಪಂಚವು ಪ್ರಸ್ತುತ ಸಾಗುತ್ತಿರುವ ಹಾದಿಯನ್ನು ಯಾವುದೇ ತರ್ಕದ ಮೂಲಕ ಗಮನಿಸಿದರೂ ಅದು ಅಂತ್ಯವಾಗುವುದು ಜಾಗತಿಕ ಆತ್ಮಹತ್ಯೆಯಲ್ಲಿಯೇ. ಇದಕ್ಕಿಂತ ಇನ್ನೂ ಆತಂಕಕಾರಿಯಾದ, ಭಯಾನಕವಾದ ಸಂಗಂತಿಯೆಂದರೆ, ಈ ಕುರಿತು ಎಚ್ಚರಿಕೆಯ ಗಂಟೆ ಮೊಳಗಿಸಬೇಕಾಗಿರುವ ಜಗತ್ತಿನ ಬುದ್ಧಿ ಜೀವಿಗಳು, ತತ್ವಜ್ಞಾನಿಗಳು, ವಿಜ್ಞಾನಿಗಳೆಲ್ಲರೂ ಈ ನಿಷ್ಠುರವಾದ ಸತ್ಯದ ಕುರಿತು ನಿರ್ಲಕ್ಷ್ಯವಹಿಸಿರುವುದು."

ಎಂಬ ನಗ್ನ ಸತ್ಯದ ಎಚ್ಚರಿಕೆಯ ಮಾತುಗಳೊಂದಿಗೆ ಆರಂಭವಾಗುವ "ಪ್ರಳಯ - ಇದು ಬದುಕಲಿಚ್ಛಿಸುವವರಿಗೆ ಮಾತ್ರ" ಎಂಬ ಪುಸ್ತಕ. ಓಶೋ ಅವರ ಹಲವು ಪ್ರವಚನ ಮಾಲಿಕೆಗಳಿಂದ ಆಯ್ದ ಕೆಲವು ವಿಚಾರಧಾರೆಯ ಕನ್ನಡ ಅವತರಣಿಕೆ. ಮೈಸೂರಿನ ಓಶೋ-ಅಲ್ಲಮ ಇನ್ ಸೈಟ್ ಸಂಸ್ಥೆಯಿಂದ ಕಳೆದ ಭಾನುವಾರ ಈ ಪುಸ್ತಕ ಲೋಕಾರ್ಪಣೆಯಾಯಿತು.

ಪುಸ್ತಕದುದ್ದಕ್ಕೂ, ಈ ಪ್ರಕೃತಿ, ಈ ಮನುಕುಲ, ಈ ಜಗತ್ತು ಎದುರಿಸುತ್ತಿರುವ ಸವಾಲುಗಳು, ಅವುಗಳ ಕಾರಣಗಳನ್ನು ಯಥಾವತ್ತಾಗಿ ಚಿತ್ರಿಸಿದ ಬಗೆಯನ್ನು ಓದಿದರೆ, ಪ್ರಳಯ ಆಗಬಹುದೇನು? ಪ್ರಳಯವಾಗಲೇ ಪ್ರಾರಂಭವಾಗಿದೆ ಎಂಬ ಭಾಸ ಬರದೇಇರದು. ಜಾಕತಿಕ ಅತ್ಮಹತ್ಯೆಯ ಕುರಿತಾದ ಓಶೋ ಅವರ ಮನ ಮುಟ್ಟವ ಮಾತುಗಳನ್ನು ಓದುತ್ತ ಹೋದಂತೆ...

ಮಾನವರೋ ದಾನವರೋ ಭೂಮಾತೆಯನು ತಣಿಸೆ
ಶೋನಿತವನೆರೆಯುವರು ಭಾಷ್ಪ ಸಲುವುದಿರೆ
ಏನು ಹಗೆ ಏನು ಧಗೆ ಏನು ಹೊಗೆ ಯೀ ಧರಣಿ
ಸೌನಿಕನ ಕಟ್ಟೆಯೇಂ? ಮಂಕುತಿಮ್ಮ
ಅನ್ನುವ ಡಿವಿಜಿ ಯವರ ಕಗ್ಗದಸಾಲುಗಳು ಕೆಲವರಿಗೆ ನೆನಪಾಗಬಹುದೇನೋ..

ಮನುಕುಲವು ಜಾಗತಿಕ ಆತ್ಮಹತ್ಯಾ ಹಾದಿ ಹಿಡಿದಿರುವುದೇಕೆ? ಎಂಬ ಪ್ರಶ್ನೆಗೆ, ಓಶೋ ಮಾರ್ಮಿಕವಾಗಿ ಉತ್ತರಿಸುತ್ತ "ಬದುಕಿಗೆ ಯಾವ ಅರ್ಥವೂ ಇಲ್ಲ. ಬದುಕಿನಲ್ಲಿರುವುದೆಲ್ಲ ಕಷ್ಟ ಕೋಟಲೆಗಳೇ. ಇಲ್ಲಿ ಕೇವಲ ಆತಂಕ, ದುಗುಡ, ಕೋಪದ ಹೊರತು ಮತ್ತೇನು ಇಲ್ಲ" ಎಂದು ನಿರಾಸೆಗೊಂಡು ತಾವಷ್ಟೇ ಆತ್ಮಹತ್ಯೆ ಮಾಡಿಕೊಳ್ಳದೆ ಇಡೀ ವಿಶ್ವವನ್ನೇ ವಿನಾಶಮಾಡ ಹೊರಟಿರುವ ನಮ್ಮ so called ಬುದ್ಧಿಜೀವಿಗಳು ಮತ್ತು ರಾಜಕೀಯ ನಾಯಕರುಗಳ "ಲ್ಯೂನಾಸಿ"ತನವದು. ಇವರ ಈ ಹುಚ್ಚುತನವನ್ನು ನೋಡುತ್ತಾ ಸುಮ್ಮನೆ ಕೂರಬೇಡಿ. ನಿಮ್ಮ ದುಃಖ ದುಮ್ಮಾನಗಳಲ್ಲಿ ಕಳೆದು ಹೋಗುವ ಮುನ್ನ, ನಿಮ್ಮೊಳಡಗಿರುವ ಬದುಕಿನ ಮೂಲದ ರಹಸ್ಯವನ್ನು ಹುಡುಕಿ. ನಕಾರತ್ಮಕವಾಗಿ ಬದುಕದೆ ಸಕಾರಾತ್ಮಕವಾಗಿ ಬದುಕಿ. ಧ್ಯಾನಾಸಕ್ತರಾಗಿ. ಅಂಥದೊಂದು "ಧ್ಯಾನದ" ಬಲದಿಂದ ಮಾತ್ರ ಈ ಅಜ್ಞಾನದ ಕೇಡ ನೋಡಲು ಸಾಧ್ಯ. ಆಗ ಮಾತ್ರ ಒಂದು ಪ್ರಜ್ಞಾಪೂರ್ವಕ ಜಗತ್ತು ನಿರ್ಮಾಣವಾಗಲು ಸಾಧ್ಯ ಎಂದು ಓಶೋ ಕಿವಿಮಾತು ಹೇಳುತ್ತಾರೆ.

ಭವಿಷ್ಯವಾಣಿಗಳಲ್ಲಿ ನಂಬಿಕೆ, ಜನಸಂಖ್ಯಾಸ್ಫೋಟ, ಎಡ್ಸ್ ನಂಥ ಮಹಾ ಕಾಯಿಲೆಗಳು, ಪರಿಸರ ವಿನಾಶ, ಮಾನವನ ಮೌಡ್ಯತೆ- ಇವು ಮನುಕುಲವನ್ನೇ ಮುಗಿಸಿಬಿಡುವ ಐದು ಮಹಾ ಅಪಾಯಗಳು ಎನ್ನುತ್ತಾರೆ ಓಶೋ. ಪರಿಸರ ವಿನಾಶದ ಬಗ್ಗೆ ಮಾತನಾಡುತ್ತ, ನಮಗೆ ಇತ್ತೀಚಿನ ವರುಷಗಳಲ್ಲಿ ಅರಿವಾಗುತ್ತಿರುವ ಓಝೋನ್ ಪರದೆಯ ಸವೆಯುವಿಕೆ, ಅದರಿಂದಾಗುವ ಅಪಾಯಕಾರಿ ಪರಿಣಾಮಗಳ ಬಗ್ಗೆ ಓಶೋ ಕೆಲ ದಶಕಗಳ ಹಿಂದಿಯೇ ಎಚ್ಚರಿಸಿದ್ದಾರೆ! ಮಾನವ ತನ್ನ ನಡುವೆ, ಕರಿಯರು-ಬಿಳಿಯರು, ಪೌರ್ವಾತ್ಯ- ಪಾಶ್ಚಿಮಾತ್ಯ, ಉತ್ತರ-ದಕ್ಷಿಣ ಎಂಬ ಬೇಧ ಭಾವಗಳನ್ನು ಅಡ್ಡಗೋಡೆಯನ್ನು ನಿರ್ಮಿಸಿದ್ದಾನೆ. ಮನುಕುಲ ಈಗ ಧರ್ಮದ ಆಧಾರದ ಮೇಲೆ, ಜನಾಂಗಗಳ ಆಧಾರದ ಮೇಲೆ, ಮೈ ಬಣ್ಣದ ಆಧಾರದ ಮೇಲೆ ಒಡೆದು ಹೋಗಿ ಒಟ್ಟಿನಲ್ಲಿ ಒಡೆದ ಮನೆಯಾಗಿದೆ. ಇಂಥದೊಂದು ಅಪಾಯದಿಂದ ಪಾರಾಗಬೇಕಾದರೆ ಪವಾಡ ಸಂಭವಿಸಬೇಕಷ್ಟೆ ಎಂದು ವಿಷಾದದಿಂದ ಮಾನವನ ಮೌಡ್ಯತೆಯ ಬಗ್ಗೆ ಹೇಳುತ್ತಾರೆ.

ಎಲ್ಲವೂ ಮಾನವ ನಿರ್ಮಿತ : ಕುಟುಂಬ ಯೋಜನೆ, ಜನನ ನಿಯಂತ್ರಣ, ಜೆನೆಟಿಕ್ ತಂತ್ರಜ್ಞಾನದ ಬಗೆಗಿನ ವಿಚಾರಗಳು ತುಂಬಾ ಮನೋಜ್ಞವಾಗಿ ಪುಸ್ತಕದಲ್ಲಿ ವಿವರಿಸಲಾಗಿದೆ. ಮಹತ್ವಾಕಾಂಕ್ಷೆ, ಮಹದಾಸೆಗಳೇ ಭ್ರಷ್ಟಾಚಾರಕ್ಕೆ ಮೂಲ. ಈ ಪರಸ್ಥಿತಿ ಪೂರ್ತಿಯಾಗಿ ಮಾನವ ನಿರ್ಮಿತ. ಎಲ್ಲರೂ ಹೇಗಾದರೂ ಮಾಡಿ ಹಣ, ಆಸ್ತಿ, ಅಂತಸ್ತು, ಅಧಿಕಾರಗಳಿಸಲು ಹಾತೊರೆಯುತ್ತಾರೆ. ಅದನ್ನು ನಾವೂ ಬೆಂಬಲಿಸುತ್ತಾ ಹೋಗುತ್ತೇವೆ. ಆನಂತರ ಸಮಾಜದಲ್ಲಿನ ಭ್ರಷ್ಟಾಚಾರವನ್ನು ಪ್ರಶ್ನಿಸುತ್ತೇವೆ. ಎಲ್ಲಿ ಮಹತ್ವಾಕಾಂಕ್ಷೆ ಇರುವುದೋ ಅದರ ಪ್ರತಿರೂಪವೇ ಭ್ರಷ್ಟಾಚಾರ. ಮಹತ್ವಾಕಾಂಕ್ಷೆಯನ್ನು ಪ್ರೋತ್ಸಾಹಿಸುತ್ತಿರುವ ಮೂಲ ವ್ಯವಸ್ತೆಯನ್ನು ಧ್ವಂಸ ಮಾಡದೇ ನೀವು ಭ್ರಷ್ಟಾಚಾರವನ್ನು ನಿಯಂತ್ರಿಸುವುದು ಸಾಧ್ಯವೇ ಇಲ್ಲ ಎಂದು ಹಲವು ದಶಕಗಳ ಹಿಂದೆಯೇ ಹೇಳಿರುವ ಅವರ ಮಾತುಗಳು ಈಗಲೂ ಔಚಿತ್ಯ ಪೂರ್ಣ.

ಭೂತಕಾಲ ಈಗ ಕಳೆದು ಹೋಗಿದೆ. ಭವಿಷ್ಯತ್ ಕಾಲ ಇನ್ನೂ ಬಂದಿಲ್ಲ. ನಮ್ಮ ಕೈಯಲ್ಲಿ ಇರುವುದೆಲ್ಲಾ "ಈ ಕ್ಷಣ" ಮಾತ್ರ. ಭೂತ-ಭವಿಷ್ಯಗಳ ಬಗ್ಗೆ ತೆಲೆಕೆಡಿಸಿಕೊಳ್ಳದೆ ಬರುವುದು ಬರಲೆಂದು ನಗುನಗುತ ಬಾಳಿ. ಈ ಅಸ್ತಿತ್ವ ತುಂಬಾ ಸುಂದರವಾದುದು. ಒಂದು ವೇಳೆ ಈ ಜಗತ್ತು ತಾನು ಕಣ್ಮರೆಯಾಗಲು ಬಯಿಸಿದಲ್ಲಿ ಧನ್ಯತೆಯ ವಿದಾಯ ಹೇಳಿ. ಆ ದಿವ್ಯ ಮೌನದಲ್ಲಿ ಮೌನವಾಗಿರದೆ ಮತ್ತೇನು ಮಾಡಲು ಸಾಧ್ಯ? ತನುವು ನಿನ್ನದು, ಮನವು ನಿನ್ನದು, ಎನ್ನ ಜೀವನ ಧನವು ನಿನ್ನದು. ನಾನು ನಿನ್ನವ ನೆಂಬ ಹೆಮ್ಮೆಯ ಋಣವು ಮಾತ್ರವೇ ನನ್ನದು ಎನ್ನುತ್ತಾ ಆ ಋಣಾನು ಬಂಧನವನ್ನು ಹಾಡುತ್ತ, ಕುಣಿಯುತ್ತ , ನಲಿಯುತ್ತಲೇ ಕಳಚಬೇಕು.

ಒಲೆಹತ್ತಿ ಉರಿದರೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದರೆ ನಿಲ್ಲಬಹುದೇ? ಧರೆಯು ಉರಿಯದಿರಲಿ. ಮನುಕುಲ ಮುಳಗದಿರಲಿ, ಧ್ಯಾನ ಜ್ಯೋತಿ ಎಲ್ಲಡೆ ಬೆಳಗಲಿ, ಹೃದಯ ಹೃದಯಗಳು ಬೆಸೆಯಲಿ, ಪ್ರೇಮ ಎಲ್ಲಡೆ ಪಸರಿಸಲಿ, ಮಾನವನಲ್ಲಿಯೇ ನವ ಮಾನವನ ನಿರ್ಮಾಣವಾಗಲಿ. ನಾವಿರುವ ಈ ಲೋಕವೇ ಸ್ವರ್ಗವಾಗಲಿ ಎಂಬ "ಓಶೋ" ಅವರ ಹೃದಯಪೂರ್ವಕ ಆಶಯ ಪುಸ್ತಕದುದ್ದಕ್ಕೂ ಎದ್ದುಕಾಣುತ್ತದೆ. ಈ ಭುವಿಗೆ ಅಂಥದೊಂದು ಅಂತರ್ ಕ್ರಾಂತಿಯಿಂದ ಹೊರಹೊಮ್ಮವ ಹೊಸ ಮಾನವನ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಅಂತ್ಯ ಬಹುದೂರವಿಲ್ಲ. ಆದರೆ ಆ ಅಂತ್ಯವೇ ಒಂದು ಹೊಸ ಬದಲಾವಣೆಗೆ ನಾಂದಿಯಾಗಬಹುದು - ಅದೂ ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ ಮಾತ್ರ ಸಾಧ್ಯ. ಅದೇ ಅಂತ್ಯದ ಅಲೆಗಳ ಮೇಲೆ ಆರಂಭದ ಪಯಣವನ್ನು ಆರಂಭಿಸಬಹುದು - ನಾವು ಪ್ರಜ್ಞಾಪೂರ್ವಕವಾಗಿ ಬದುಕಲಿಚ್ಛಿಸಿದಾಗ ಮಾತ್ರ!

ಪುಸ್ತಕದ ಹೆಸರು : ಪ್ರಳಯ - ಇದು ಬದುಕಲಿಚ್ಛಿಸುವವರಿಗೆ ಮಾತ್ರ
ದೊರೆಯುವ ಸ್ಥಳ : ಓಶೋ ಅಲ್ಲಮ ಇನ್‌ಸೈಟ್ ಫೌಂಡೇಷನ್, ಮೈಸೂರು.
ಬೆಲೆ : 200 ರು.

English summary
Should pralaya happen or should the world end to end all evil things happening in this world? A book based on the lectures rendered by Osho invokes this question and puts it before the reader. Book review by Rajashekar Hiremath, Bagalkot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X