ವಿನಯಕುಮಾರ್ ಸಾಯ 'ಛಂದ ಕವರ್ ಸ್ಟಾರ್'
ಅಂತಿಮ ಸುತ್ತಿನಲ್ಲಿ ಸಾಯ ಅವರ ಕೃತಿಯ ಜೊತೆ ಕಾಶಿ ಸುಬ್ರಹ್ಮಣ್ಯ ಮತ್ತು ರಾಮಕೃಷ್ಣ ಸಿದ್ದಪಾಲ ಅವರು ಕಳಿಸಿದ್ದ ವಿನ್ಯಾಸಗಳು ಸ್ಥಾನ ಪಡೆದಿದ್ದವು. ಅಂತಿಮವಾಗಿ ಸಾಯ ಅವರು ರಚಿಸಿದ ವಿನ್ಯಾಸಕ್ಕೆ ಬಹುಮಾನ ಬಂದಿದೆ. ಬಹುಮಾನಕ್ಕೆ ಅತ್ಯುತ್ತಮ ವಿನ್ಯಾಸವನ್ನು ಆಯ್ಕೆ ಮಾಡಿದವರು ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ. ಬಹುಮಾನ ಪಡೆದವರಿಗೆ ರು. 5000 ನೀಡಲಾಗುತ್ತಿದೆ.
ಇಪ್ಪತ್ತೈದು ವರ್ಷದ ವಿನಯಕುಮಾರ ದಾವಣಗೆರೆಯ ಲಲಿತ ಕಲಾ ಮಹಾವಿದ್ಯಾಲಯದಲ್ಲಿ ಓದಿ ವಿಷುಯಲ್ ಆರ್ಟ್ಸ್ ಪದವಿ ಪಡೆದಿದ್ದಾರೆ. ಈಗ ಮಂಗಳೂರಿನ 'ಆರೆಂಜ್ ಆಂಗಲ್ ಸಂಸ್ಥೆಯಲ್ಲಿ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸಮಾಡುತ್ತಿದ್ದಾರೆ. ಹಲವು ಪ್ರಮುಖ ಪತ್ರಿಕೆಗಳಲ್ಲಿ ಕತೆ-ಕವನ-ಮಕ್ಕಳ ಪದ್ಯಗಳನ್ನು ಪ್ರಕಟಿಸಿರುವ ವಿನಯ್ ಅವರಿಗೆ ಜಾಹೀರಾತು ಕಲೆಯಲ್ಲಿ ಆಸಕ್ತಿ. ಕೆಲ ಪುಸ್ತಕಗಳಿಗೆ ಮುಖಪುಟ ರಚಿಸಿದ್ದಾರೆ. ಏಡ್ಸ್ ಜಾಗೃತಿ ಸಂದೇಶದ ಅವರ ಭಿತ್ತಿಚಿತ್ರವೊಂದಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ ಬಂದಿತ್ತು. ಪ್ರಸ್ತುತ ಸ್ಪರ್ಧೆಯ ಅಂತಿಮ ಮೂವತ್ತರಲ್ಲಿ ಅವರ 6 ಪ್ರವೇಶಗಳಿದ್ದವು.
ಅಂತಿಮ ಮೂವತ್ತರಲ್ಲಿ ಯಾವ ಕೃತಿ ಬಹುಮಾನ ಗೆಲ್ಲುತ್ತದೆಂದು ಊಹಿಸಿದವರಿಗೆ ಕೂಡ ಬಹುಮಾನ ಇಡಲಾಗಿತ್ತು. ವಿನಯ ಕುಮಾರ್ ಸಾಯ ಅವರ ವಿನ್ಯಾಸ ಗೆಲ್ಲುತ್ತದೆಂದು ಅಂದಾಜು ಮಾಡಿದವರು 8 ಜನ. ಈ ಎಂಟು ಜನರಿಗೆ ಬಹುಮಾನಕ್ಕಿಡಲಾಗಿದ್ದ 2 ಸಾವಿರ ರು. ಸಮನಾಗಿ ಹಂಚಲಾಗುತ್ತದೆ. ಈ ಊಹೆಯ ಬಹುಮಾನವನ್ನು ಛಂದ ಪುಸ್ತಕ ಮತ್ತು ಮೇಫ್ಲವರ್ ಮೀಡಿಯಾ ಹೌಸ್ ಪ್ರಾಯೋಜಿಸಿದ್ದವು.