ಸುಚಿತ್ರಾದಲ್ಲಿ ಪ್ರಣತಿಯ ಐದನೇ ಕನಸು ನನಸು
ಸುಶ್ರುತ ದೊಡ್ಡೇರಿಯ ಹೊಳೆಬಾಗಿಲು ಬಿಡುಗಡೆ ಮಾಡಿ ಮಾತನಾಡಿದ ನಾಗತಿಹಳ್ಳಿ, ಹಳ್ಳಿಯ ಹುಡುಗರು ನಗರಗಳಿಗೆ ಬಂದು, ಮತ್ತೆ ಹಳ್ಳಿಗೆ ಮರಳದೇ, ಒಂದು ರೀತಿಯ ಅನಿವಾಸಿ ಹಳ್ಳಿಗ ಪ್ರಜ್ಞೆಯಲ್ಲಿ- ಎನ್ ಆರ್ ವಿ- ನಾನ್ ರೆಸಿಡೆಂಟ್ ವಿಲೇಜ್ ಪ್ರಜ್ಞೆಯಲ್ಲಿ ಬದುಕುತ್ತಿದ್ದಾರೆ ಎಂದರು. ನಾವು ಇಂದಿನ ಆಧುನಿಕ ಪಲ್ಲಟಗಳ ಬಗ್ಗೆ ತಲೆಕೆಡಿಸಿಕೊಳ್ಳದೇ,ಅವುಗಳ ಜೊತೆ ಬದುಕುವುದನ್ನು ಕಲಿಯಬೇಕೆಂದು ಅವರು ಅಭಿಪ್ರಾಯಪಟ್ಟರು.
ಹೂವು ಹೆಕ್ಕುವ ಸಮಯ ಬಿಡುಗಡೆ ಮಾಡಿದ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಪರಂಪರೆಯ ಓದು ಅತ್ಯಂತ ಅವಶ್ಯಕ ಎಂದು ಪ್ರತಿಪಾದಿಸಿದರು. ಹಳೆಯ ಕವಿಗಳ, ಗ್ರಂಥಗಳ ಅಧ್ಯಯನದಿಂದ ಜ್ಞಾನ ಹೆಚ್ಚುತ್ತದೆ ಎಂದ ಅವರು, ಅಂತಹ ಅಧ್ಯಯನ ಇಲ್ಲದ ಸಾಹಿತಿ, ಬರವಣಿಗೆಯ ಮುಖ್ಯ ಹೆದ್ದಾರಿಗೆ ಬರಲು ಸಾಧ್ಯವಿಲ್ಲ ಎಂದರು. ಕುಮಾರವ್ಯಾಸನಂತಹ ಕವಿಗಳನ್ನು ಓದುವುದರಿಂದ ಹೊಸ ಹೊಳಹು ಸಿಗುತ್ತದೆ ಎಂದ ಎಚ್ ಎಸ್ ವಿ, ಹೊಸ ತಲೆಮಾರಿನ ಹುಡುಗರು ಸಾಹಿತ್ಯದ ಬಗ್ಗೆ ಆಸಕ್ತಿ ಬೆಳಸಿಕೊಂಡಿರುವುದಕ್ಕೆ ಖುಷಿ ವ್ಯಕ್ತಪಡಿಸಿದರು.
ಬ್ಲಾಗ್ ಜಗತ್ತಿನ ಆಗು ಹೋಗುಗಳ ಬಗ್ಗೆ ಮಾತನಾಡಿದ ಜೋಗಿ ಇತ್ತೀಚಿನ ದಿನಗಳಲ್ಲಿ ಅಂತರ್ಜಾಲ ಕನ್ನಡ ಬರಹಗಳಲ್ಲಿ ಅಸಹನೆ ವ್ಯಕ್ತವಾಗುತ್ತಿರುವುದರ ಬಗ್ಗೆ ಖೇದ ವ್ಯಕ್ತಪಡಿಸಿದರು. ಸುಮಾರು ಎರಡುಸಾವಿರದವರೆಗಿರುವ ಕನ್ನಡ ಬ್ಲಾಗಿಗರು ಬರಹ ಜಗತ್ತಿನ ಹೊಸ ಸಾಧ್ಯತೆಗಳನ್ನು ತೋರಿಸುತ್ತಿದ್ದಾರೆಂಬುದು ಅವರ ಅಭಿಪ್ರಾಯ.
ಪರಿಸರ ಸಂಬಂಧೀ ಕೃತಿ ಚಿತ್ರಚಾಪ ಬಿಡುಗಡೆ, ಕನ್ನಡ ಬ್ಲಾಗಿಗರ ಕೂಟ, ನುಡಿವ ವೀಣೆ, ಗಮಕ ಕಾರ್ಯಕ್ರಮಗಳನ್ನು ಈಗಾಗಲೇ ಆಯೋಜಿಸಿರುವ ಪ್ರಣತಿಗೆ ಇದು ಐದನೇ ಕಾರ್ಯಕ್ರಮ. ಕನ್ನಡ ಬ್ಲಾಗ್ ಜಗತ್ತಿನ ಹಲವರು ಮತ್ತು ಹಿರಿಯ ಸಾಹಿತಿಗಳೂ ಸೇರಿದಂತೆ ಹಲವು ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.