ತಲೆಬರಹ : ನೂರೆಂಟು ಮಾತು ಕೇಳಲು ಭಾನುವಾರ ಬನ್ನಿ
ಪ್ರತಿ ಗುರುವಾರ ಪ್ರಕಟವಾಗುವ ಅಂಕಣ 'ನೂರೆಂಟು ಮಾತು' ಮೊನಚಿನಿಂದ ಕೂಡಿದ ಅಭಿಪ್ರಾಯ, ಸೊಗಸಾದ ನಿರೂಪಣೆಯಿಂದ ಓದುಗರ ಮನ ಮುಟ್ಟಿದೆ. ಈ ಅಂಕಣ ಬರಹದ ಐದನೇ ಪುಸ್ತಕ ಭಾನುವಾರ ಓದಗರ ಕೈಸೈರಲಿದೆ. ಇನ್ನು 'ತಲೆಬರಹ ಪತ್ರಿಕೆ ಹಣೆಬರಹ'ದಂಥ ಪುಸ್ತಕ ಪ್ರಕಟವಾಗಿರುವುದು ಕಡಿಮೆಯೇ. ಸೊಗಸಾದ ಮತ್ತು ಸೂಕ್ತವಾದ ತಲೆಬರಹ ಒಂದು ಸಾಧಾರಣ ಲೇಖನವನ್ನು ಕೂಡ ಓದುವಂತೆ ಸೆಳೆಯಬಲ್ಲದು. ಅದೇ ರೀತಿ ಒಂದು ಅರ್ಥಹೀನ, ಕೆಟ್ಟ ತಲೆಬರಹ ಅತ್ಯುತ್ತಮವಾದ ಬರಹವನ್ನು ಕೊಲ್ಲಲೂಬಹುದು. ನೂರೆಂಟು ಮಾತು ಬರಹಗಳು ಕೂಡ ಓದುಗರನ್ನು ಸೆಳೆದದ್ದು ಉತ್ತಮ ತಲೆಬರಹಗಳಿಂದಲೇ.
ಪುಸ್ತಕ ಬಿಡುಗಡೆ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ 10.30ಕ್ಕೆ ಬಸವನಗುಡಿಯ ಬಿಪಿ ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಜರುಗಲಿದೆ.
ಬೆಳಗಿನ ಬಿಸಿಬಿಸಿ ಉಪಹಾರದ ಜೊತೆಗೆ ಸವಿಸವಿಯಾದ ನೂರೆಂಟು ಮಾತುಗಳಿಗೂ ಕೊರತೆಯಿರುವುದಿಲ್ಲ. ವಿಶ್ವೇಶ್ವರ ಭಟ್ ಅವರ ಜೊತೆ ಮುಖ್ಯ ಅತಿಥಿಗಳಾಗಿ ಕವಿ, ಕಥೆಗಾರ ಜಯಂತ್ ಕಾಯ್ಕಿಣಿ ಮತ್ತು ಜಿಎನ್ ಮೋಹನ್ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಕವಿ ಡಾ. ಎಚ್.ಎಸ್.ವೆಂಕಟೇಶ ಮೂರ್ತಿ ಅವರು ವಹಿಸಿಕೊಳ್ಳಲಿದ್ದಾರೆ.
ಎರಡೂ ಪುಸ್ತಕಗಳನ್ನು ಅಂಕಿತ ಪುಸ್ತಕ ಪ್ರಕಾಶನ ಹೊರತಂದಿದೆ. ನೂರೆಂಟು ಮಾತು ಕೇಳಲು ಮತ್ತು ಕೊಳ್ಳಲು ಪುಸ್ತಕ ಪ್ರೇಮಿಗಳೇ ಭಾನುವಾರ ಬನ್ನಿ.
(ದಟ್ಸ್ ಕನ್ನಡ ವಾರ್ತೆ)