ಮೇ 31ರಂದು ನಟನದಲ್ಲಿ ರಂಗವಲ್ಲಿಯ ಲೋಕಾರ್ಪಣೆ
ಡಾ|| ಹಾಲತಿ ಸೋಮಶೇಖರ್ ಅವರ ವಿಸ್ಮಯ ಪ್ರಕಾಶನ ಹೊರತಂದಿರುವ ಈ ಕೃತಿಯನ್ನು ಕುತೂಹಲ ಸಂಸ್ಥೆ ಲೋಕಾರ್ಪಣೆಗೊಳಿಸಲಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ, ಜನಪ್ರಿಯ ಲೇಖಕ ಡಾ|| ಸಿದ್ಧಲಿಂಗಯ್ಯ ಬಿಡುಗಡೆ ಮಾಡಲಿದ್ದಾರೆ. ಲೇಖಕರಾದ ಡಾ|| ನಾ. ದಾಮೋದರಶೆಟ್ಟಿ ಹಾಗೂ ಗಣೇಶ್ ಅಮೀನಗಡ ಕೃತಿ ಕುರಿತು ಮಾತನಾಡಲಿದ್ದಾರೆ. ಚಲನಚಿತ್ರ ಹಾಗೂ ಕಿರುತೆರೆ ನಿರ್ದೇಶಕ ಬಿ.ಸುರೇಶ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಮಾತು-ಮೌನದ ನಡುವೆ ಒಪ್ಪೊತ್ತಿನ ನೆನಪು ಎಂಬ ಶೀರ್ಷಿಕೆ ಹೊತ್ತ ರಂಗವಲ್ಲಿ ಕೃತಿಯ ಮೂಲಕ ನಟ ಮಂಡ್ಯ ರಮೇಶ್ ತಮ್ಮ ಬದುಕಿನ ಹಲವು ಮಜಲುಗಳನ್ನು 'ರಂಗವಲ್ಲಿ'ಯಲ್ಲಿ ಬಿಡಿಸಿದ್ದಾರೆ. ಮೂಲತಃ ರಂಗಭೂಮಿಯ ಮೈಸೂರಿನ ರಂಗಾಯಣ ಮೂಲಕ ರಂಗಯಾತ್ರೆ ನಡೆಸಿ ನಗರದ ರಾಮಕೃಷ್ಣನಗರದಲ್ಲಿ ನಟನ ರಂಗಮಂಟಪ ಎಂಬ ರಂಗ ಕುಟೀರ ಕಟ್ಟಿ ನಿರಂತರ ರಂಗಭೂಮಿಯ ಕೈಂಕರ್ಯ ನಡೆಸಿಕೊಂಡು ಬಂದವರು. ಈ ಪಯಣದ ಮೆಲುಕುಗಳಲ್ಲದೇ ರಾಜ್ಯದ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡ ಅವರ ಲೇಖನಗಳು 'ರಂಗವಲ್ಲಿ'ಯಲ್ಲಿ ಅಡಕವಾಗಿದೆ.
ಈ ಲೋಕಾರ್ಪಣೆ ಸಮಾರಂಭದಲ್ಲಿ ನಟನ ಹೆಣ್ಣು ಮಕ್ಕಳಿಂದ ಬೀಸು ಕಂಸಾಳೆ, ಹಾಡು-ಹಸೆ ಹಾಗೂ ಇನ್ನಿತರ ಸಾಂಸ್ಕೃತಿಕ ಸಡಗರವಿದ್ದು ಸಾಹಿತ್ಯಾಸ್ತಕರು ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದು ಕುತೂಹಲದ ಕಾರ್ಯದರ್ಶಿ ರವೀಂದ್ರ ಜೋಶಿ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)