ಶಾಲಿನಿ ರಜನೀಶ್ ಅವರ 'ನಡೆಮುಂದೆ' ಲೋಕಾರ್ಪಣೆ
'ವಿಜಯ ಕರ್ನಾಟಕ'ದ ಮಹಿಳಾ ವಿಜಯ ಪುರವಣಿಯಲ್ಲಿ ಬರೆದ ಅಂಕಣ ಬರಹಗಳ ಈ ಕೃತಿ ಬಿಡುಗಡೆ ನಂತರ ಮಾತನಾಡಿದ ಅವರು ಕರ್ತವ್ಯದ ಜತೆಗೆ ಸಾಮಾಜಿಕ ಜವಾಬ್ದಾರಿಯೂ ಮುಖ್ಯ ಎಂಬುದನ್ನು ತೋರಿಸಿಕೊಟ್ಟಿರುವ ಶಾಲಿನಿ ರಜನೀಶ್ ಎಲ್ಲ ಹಿರಿಯ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ದೇವದಾಸಿ ಪದ್ಧತಿ, ಲೈಂಗಿಕ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಮಹಿಳೆಯ ಆಸ್ತಿ ಹಕ್ಕುಗಳು, ಮದುವೆ ನೋಂದಣಿ, ಬಾಲ ಕಾರ್ಮಿಕರ ನಿರ್ಮೂಲನೆ ಇದೇ ಮೊದಲಾದ ಸಾಕಷ್ಟು ಮಾಹಿತಿಪೂರ್ಣ ಅಂಶಗಳನ್ನು 'ನಡೆಮುಂದೆ' ಒಳಗೊಂಡಿದೆ. ಒಟ್ಟಿನಲ್ಲಿ ಮಹಿಳಾ ಸಬಲೀಕರಣಕ್ಕೆ ಬೇಕಿರುವ ಎಲ್ಲ ಅಗತ್ಯಮಾಹಿತಿಗಳನ್ನು ಒಳಗೊಂಡಿರುವ ಈ ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಮಹಿಳೆಯರಿಗೆ ಮುಟ್ಟಿಸುವ ಕೆಲಸವನ್ನು ಪ್ರಾಧಿಕಾರ ಮಾಡಲಿದೆ ಎಂದು ಆಶ್ವಾಸನೆ ನೀಡಿದರು.
ಬೇರೆ ರಾಜ್ಯದಲ್ಲಿ ಹುಟ್ಟಿ, ಕನ್ನಡ ಕಲಿತು, ಕನ್ನಡದಲ್ಲೇ ಅಂಕಣ ಬರೆಯುತ್ತಿರುವ ಶಾಲಿನಿ, ಹೊರ ರಾಜ್ಯದಿಂದ ಬಂದು ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಿಗೆ ಮಾದರಿ ಎಂದು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವತ್ಸಲಾ ವತ್ಸ ಬಣ್ಣಿಸಿದರು.
ಮಹಿಳೆಯರಿಗೆ ತಮ್ಮ ಸಬಲೀಕರಣಕ್ಕಾಗಿ ದಾರಿ ತೋರುವ ಪ್ರಯತ್ನ ಈ ಕೃತಿಯಲ್ಲಿ ಮಾಡಲಾಗಿದೆ. ಸಾವಿರಾರು ವರ್ಷಗಳಿಂದ ಮಹಿಳೆಯರು ಸಾಮಾಜಿಕ, ಆರ್ಥಿಕ, ದೈಹಿಕ ಹಾಗೂ ಮಾನಸಿಕವಾಗಿ ಶೋಷಿತರಾಗಿ ಸಂಪೂರ್ಣ ಸ್ವಾಭಿಮಾನದಿಂದ ತಮ್ಮ ಜೀವನ ಸಾಗಿಸಲು ವಿಫಲರಾಗಿದ್ದಾರೆ. ಈ ವಿಷ ವರ್ತುಲದಿಂದ ಹೊರಬಂದು ಧೈರ್ಯದಿಂದ ತಮ್ಮ ಅಭಿವೃದ್ಧಿಯನ್ನು ಸಾಧಿಸಿ, ಸಮಾಜದ ಅಭಿವೃದ್ಧಿಗೆ ಕಾರಣರಾಗಬೇಕು ಎಂಬ ಅಂಶವನ್ನು ಲೇಖಕರು ಕೃತಿಯಲ್ಲಿ ಪ್ರತಿಪಾದಿಸಿದ್ದಾರೆ.
2008ರ ವಿಶ್ವ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಆರಂಭವಾದ ಈ ಲೇಖನಗಳ ಸಂಗ್ರಹದ ಕೃತಿಯನ್ನು ಸ್ವಪ್ನ ಬುಕ್ ಹೌಸ್ ಹೊರತಂದಿದೆ.
(ದಟ್ಸ್ ಕನ್ನಡ ವಾರ್ತೆ)