ಎಸ್ಸಾರ್ವಿಗೆ ವಿಎಂ ಇನಾಂದಾರ್ ಪ್ರಶಸ್ತಿ
ಹೀಗೆ ಮಾಗಿದ ವಿಜಯಶಂಕರ್ ಅವರನ್ನು ಮಾಗಿಯ ಋತುವಿನಲ್ಲಿ ಪ್ರಶಸ್ತಿ ಸನ್ಮಾನಗಳು ಅರಸಿಬಂದಿವೆ. ಅವರ ಇತ್ತೀಚಿನ 'ಒಡನಾಟ' ಕೃತಿ ವಿ.ಎಂ. ಇನಾಂದಾರ್ ಪ್ರಶಸ್ತಿಗೆ ಭಾಜನವಾಗಿದೆ. ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರ, ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಮತ್ತು ಮಹಾತ್ಮಾ ಗಾಂಧೀ ಮೆಮೋರಿಯಲ್ ಕಾಲೇಜುಗಳು ಕಲೆತು ನೀಡುವ ಪ್ರಶಸ್ತಿಯನ್ನು ಜನವರಿ 21ರಂದು ಅವರಿಗೆ ಪ್ರದಾನ ಮಾಡಲಾಗಿದೆ. ಅಂದು ಉಡುಪಿಯಲ್ಲಿ ಮುದ್ದಣ್ಣ ಸಾಹಿತ್ಯ ಉತ್ಸವದ ಸಂಭ್ರಮವಿತ್ತು.
ಒಟ್ಟು 26 ಲೇಖನಗಳ ಸಂಗ್ರಹವೇ 'ಒಡನಾಟ' (meaning and acquaintances). ಕನ್ನಡದ ಖ್ಯಾತ ಲೇಖಕ, ಕವಿ, ನಾಟಕಕಾರ, ಪತ್ರಕರ್ತರ ವ್ಯಕ್ತಿತ್ವ, ಅವರೊಂದಿಗನ ಒಡನಾಟ ಮತ್ತು ಅವರ ಕೆಲವು ಕೃತಿಗಳ ವಿಮರ್ಷಾತ್ಮಕ ನೋಟಗಳು ಒಡನಾಟದಲ್ಲಿ ಅಡಕವಾಗಿವೆ. ವ್ಯಕ್ತಿಚಿತ್ರ ಬರವಣಿಗೆಯ ಕುಸುರಿ ಕೆಲಸದಲ್ಲಿ ಈ ಕೃತಿಯ ಮೂಲಕ ಅವರು ಹೊಸ ಹಾದಿಯನ್ನು ತುಳಿದಿದ್ದಾರೆ ಎಂದರೆ ಅತಿಶಯೋಕ್ತಿಯಾಗದು. ಸದ್ಯದಲ್ಲೇ ಅವರ ಲೇಖನಗಳ ಇನ್ನೊಂದು ಸಂಗ್ರಹ ಬಿಡುಗಡೆಗೆ ರೆಡಿಯಾಗಿದೆ ಎನ್ನುವುದು ನಿಮಗೂ ಗೊತ್ತಿರಲಿ.
(ದಟ್ಸ್ ಕನ್ನಡ ಸುದ್ದಿಮನೆ)