ಪ್ರೇಮ್ ಅವರ ಎರಡು ಕಥಾಸಂಕಲನಗಳ ಲೋಕಾರ್ಪಣೆ
ಪ್ರೇಮ್ ಅವರ ಇನ್ನೆರಡು ಕಥಾಸಂಕಲನಗಳಾದ 'ಅಲೆಮಾರಿಯ ಕಥೆಗಳು' ಮತ್ತು 'ಮೊದ್ದುಮಣಿ' ಏಪ್ರಿಲ್ 5 ಮತ್ತು 6ರಂದು ನವದೆಹಲಿಯಲ್ಲಿ ನಡೆದ 25ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದವು. ಸಿಂಡಿಕೇಟ್ ಬ್ಯಾಂಕಿನ ಮಾಜೀ ಛೇರ್ಮನ್ನರೂ ಮಣಿಪಾಲ್ ಅಕ್ಯಾಡೆಮಿ ಆಫ್ ಹೈಯರ್ ಎಜುಕೇಷನ್ನ ಮಾಜಿ ಕುಲಸಚಿವರೂ ಆದ ಕೆ.ಕೆ. ಪೈ ಅವರು 'ಮೊದ್ದುಮಣಿ' ಕೃತಿಯನ್ನು ಲೋಕಾರ್ಪಣೆ ಮಾಡಿದರು. 'ಅಲೆಮಾರಿಯ ಕಥೆಗಳು' ಕೃತಿ ಹಿರಿಯ ಕವಯಿತ್ರಿ ಪ್ರೊ. ಅಹಲ್ಯಾ ಚಿಂತಾಮಣಿ ಅವರಿಂದ ಬಿಡುಗಡೆಗೊಂಡಿತು.
ಈ ಕಥಾಸಂಕಲನಗಳು ಕೆಳಕಂಡ ವಿಳಾಸದಲ್ಲಿ ಲಭ್ಯವಿವೆ.
ಪ್ರಕಾಶಕರು:
ಹೇಮಂತ
ಸಾಹಿತ್ಯ
ನಂ.
972
-
ಸಿ,
ನಾಲ್ಕನೆಯ
"ಇ"
ಬ್ಲಾಕ್
ಹತ್ತನೆಯ
"ಎ"
ಮುಖ್ಯರಸ್ತೆ,
ರಾಜಾಜಿನಗರ
ಬೆಂಗಳೂರು
-
560
010
ದೂರವಾಣಿ:
080-2335
4619
ಓದುಗರ ಅವಗಾಹನೆಗಾಗಿ ಅಲೆಮಾರಿ ಕಥೆಗಳು ಮತ್ತು ಮೊದ್ದುಮಣಿ ಕಥಾಸಂಕಲನಗಳ ಮುನ್ನುಡಿಯಿಂದಾಯ್ದ ತುಣುಕನ್ನು ಇಲ್ಲಿ ನೀಡಲಾಗಿದೆ.
ಅಲೆಮಾರಿಯ ಕಥೆಗಳು
"ಯಾನ" ಮತ್ತು "ಜತೆಗಾತಿ"ಯ ನಂತರ ಇದು ನನ್ನ ಮೂರನೆಯ ಕಥಾಸಂಕಲನ. ಆ ಎರಡು ಸಂಕಲನಗಳಲ್ಲಿರುವ ಕಥೆಗಳನ್ನು ಓದಿರುವ ನಿಮ್ಮಲ್ಲಿ ನನ್ನ ಶೈಲಿ, ವಸ್ತುವಿಷಯ- ಒಟ್ಟಾರೆ ಬರವಣಿಗೆಯ ಬಗ್ಗೆ ಒಂದು ಸ್ಥೂಲ ಅಭಿಪ್ರಾಯ ಮೂಡಿರಲಿಕ್ಕೆ ಸಾಕು. ಆ ಅಭಿಪ್ರಾಯವನ್ನು ಈ ಸಂಗ್ರಹದಲ್ಲಿನ ಕಥೆಗಳು ಮತ್ತಷ್ಟು ದಟ್ಟಗೊಳಿಸುತ್ತವೆ. ಇಲ್ಲಿನ ಹದಿನಾಲ್ಕು ಕಥೆಗಳಲ್ಲಿ ವೈಯುಕ್ತಿಕ ಬದುಕಿನ ನೋವು ನಲಿವಿನ ವಾಸ್ತವಿಕ ಚಿತ್ರವಿದೆ, ಜತೆಗೇ ಅಸಂಗತೆಯೂ ಇದೆ; ಪುರಾಣದ ಜತೆ ಪತ್ತೇದಾರಿಯೂ ಇದೆ! ಒಟ್ಟಾರೆಯಾಗಿ "ಅಲೆಮಾರಿಯ ಕಥೆಗಳು" ಎಂಬ ಈ ಬಾಳೆಲೆಯಲ್ಲಿ ಅನ್ನ, ಹುಳಿ, ಗೊಜ್ಜು, ಪಲ್ಯ, ಕೋಸಂಬರಿ, ಉಪ್ಪಿನಕಾಯಿ, ಹಪ್ಪಳ ಮತ್ತು ಮೊಸರಿನ ಜತೆ ಚಿಲ್ಲಿ ಚಿಕನ್ ಮತ್ತು ಫಿಶ್ ಫ್ರೈ ಸಹಾ ಇವೆ!
ನಾನೊಬ್ಬ ಸಾಹಿತ್ಯಕ ಅಲೆಮಾರಿ. ಯಾವುದೇ ಒಂದು ನಿರ್ದಿಷ್ಟ ನಿರೂಪಣಾ ಶೈಲಿಗೆ, ವಸ್ತುವಿಷಯಕ್ಕೆ ಅಂಟಿಕೊಂಡವನಲ್ಲ. ನಾನು ಯಾವ ಸಾಹಿತ್ಯಪಂಥಕ್ಕೂ ಸೇರಿಲ್ಲ. ಯಾವುದೇ ಒಂದು ನಿರ್ದಿಷ್ಟ ಗುಂಪಿನೊಡನೆ ನನ್ನನ್ನು ಗುರುತಿಸಿಕೊಳ್ಳುವುದು ನನ್ನ ಜಾಯಮಾನಕ್ಕೆ ಒಗ್ಗದ ವಿಚಾರ... ಏಕತಾನತೆ ನನಗೆ ಒಗ್ಗದು. ಒಂದು ನಿರ್ದಿಷ್ಟ ದಿನದಲ್ಲಿ ನನಗಿಷ್ಟವಾದ ವಿಷಯವನ್ನೆತ್ತಿಕೊಂಡು, ನನಗೆ ಹಿತವೆನಿಸುವ ಶೈಲಿಯಲ್ಲಿ ಬರೆಯುತ್ತಾ ಹೋಗುವುದು ನನಗೆ ಖುಶಿ ನೀಡುತ್ತದೆ... ಒಬ್ಬ ಬರಹಗಾರ ಒಂದು ನಿರ್ದಿಷ್ಟ ಪಂಥಕ್ಕೆ ಅಂಟಿಕೊಂಡಿರಬೇಕೆಂಬ ಅಲಿಖಿತ ನಿಯಮವೊಂದನ್ನು ವಿಮರ್ಶಕರು ರೂಪಿಸಿಕೊಂಡಿದ್ದಾರಂತೆ. ನನ್ನಂಥಾ ಅಲೆಮಾರಿಯನ್ನು ಅಥವಾ ಸಾಹಿತ್ಯಕ ಆಯಾರಾಂ ಗಯಾರಾಂ'ಗಳನ್ನು ಕಂಡರೆ "ಇಶ್ಶೀ" ಎಂದು ಮುಖ ಅತ್ತ ತಿರುಗಿಸಿಕೊಳ್ಳುತ್ತಾರಂತೆ. ಹಾಗಂತ ಬಲ್ಲವರು ಹೇಳುತ್ತಾರೆ. ನನಗೆ ಗೊತ್ತಿಲ್ಲ. ವಿಮರ್ಶಕರೆಂದರೆ ನನಗೆ ಸ್ವಲ್ಪ ಭಯವೂ ಇದೆ. ಇವರಲ್ಲಿ ಹೆಚ್ಚಿನವರು ಊರುಕೇರಿ, ಜಾತಿಮತ, ಪಂಥ- ಹೀಗೆ ಯಾವುದಾದರೊಂದು ವ್ಯಕ್ತಿನಿಷ್ಠ ಬಂಧೀಖಾನೆಯೊಳಗೆ ನನ್ನನ್ನು ದೂಡಿಬಿಟ್ಟು ಜೀವನಪೂರ್ತಿ ಅಲ್ಲೇ ಕೊಳೆಹಾಕಿಬಿಡುತ್ತಾರೆ ಎಂಬ ಹೆದರಿಕೆ ನನ್ನಲ್ಲಿ ಹೇಗೋ ಮೂಡಿಬಿಟ್ಟಿದೆ. ಹೀಗಾಗಿ ಇವರ ಕೈಗೆ ಸಿಗದೇ ನುಣುಚಿಕೊಳ್ಳಬೇಕೆಂಬ ಮನದಾಳದ ಅವ್ಯಕ್ತ ಬಯಕೆಯೇ ನನ್ನನ್ನು ಒಂದೆಡೆ ನಿಲ್ಲಿಸದೇ ಹೀಗೆ ಅಲೆದಾಡಿಸುತ್ತಿರಬಹುದೇನೋ...
***
ಮೊದ್ದುಮಣಿ
2003ರಿಂದ 2006ರವರೆಗೆ ನಾನು ಬರೆದ ಪತ್ತೇದಾರಿ ಕಥೆ-ನೀಳ್ಗಥೆಗಳಲ್ಲಿ ಹಲವು ಇಲ್ಲಿವೆ. ಇನ್ನುಳಿದವನ್ನು "ಜತೆಗಾತಿ" ಕಥಾಸಂಕಲನದಲ್ಲಿ ನೀವು ಈಗಾಗಲೇ ಓದಿದ್ದೀರಿ...
...ಬಹುಷಃ ನನ್ನ ಕೊನೆಯ ಪತ್ತೇದಾರಿ ಕಥಾಸಂಕಲನ ಇದು. ಗಂಭೀರ ಸಾಹಿತ್ಯದತ್ತ ಸಾಗಿರುವ ನಾನು ಹೊಸ ಪತ್ತೇದಾರಿ ಕಥೆಗಳನ್ನಾಗಲೀ, ಅರ್ಧಕ್ಕೆ ನಿಂತಿರುವ ಎರಡು ಮೂರು ಕಾದಂಬರಿಗಳನ್ನಾಗಲೀ ಬರೆದು ಮುಗಿಸುವ ಸಾಧ್ಯತೆ ಬಹುಷಃ ಇಲ್ಲ. ನನ್ನ ಪತ್ತೇದಾರಿ ಬರಹಗಳನ್ನು ಮೆಚ್ಚುವ ನನ್ನ ಅಭಿಮಾನಿಗಳಿಗೆ ಇದರಿಂದ ನಿರಾಶೆಯಾಗಬಹುದೇನೋ. ಅವರೆಲ್ಲರ ಕ್ಷಮೆ ಕೇಳುವುದರೊಡನೆ ನಮ್ರನಾಗಿ ಒಂದು ಮಾತು ಹೇಳಬಯಸುತ್ತೇನೆ- ನಾನು ಬೆಳೆಯುತ್ತಿದ್ದೇನೆ. ನನ್ನ ಜತೆ ನನ್ನ ಓದುಗರೂ ಬೆಳೆಯಬೇಕು ಎನ್ನುವುದು ನನ್ನ ಆಶಯ.
ದಟ್ಸ್ಕನ್ನಡದಲ್ಲಿ ಪ್ರಕಟವಾಗಿರುವ ಪ್ರೇಮ್ ಅವರ ಕಥೆಗಳು