ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡದಲ್ಲಿ ಏಕಕಾಲಕ್ಕೆ ನಾಲಕ್ಕು ಪುಸ್ತಕ ಬಿಡುಗಡೆ

By Staff
|
Google Oneindia Kannada News
  • ನಮ್ಮ ವರದಿಗಾರರಿಂದ
Four Kannada Books saw the light of the Day! Image courtesy: Vallisha Shastriಧಾರವಾಡ, ಆಗಸ್ಟ್ 15 : ಬುಧವಾರ ತುಂತುರು ಮಳೆಯ ಮುಂಜಾನೆ ಕರ್ನಾಟಕ ವಿದ್ಯಾವರ್ಧಕ ಸಂಘದ ರ.ಹ. ದೇಶಪಾಂಡೆ ಸಭಾಭವನದಲ್ಲಿ ಕನ್ನಡದ ನಾಲ್ಕು ಹೊಸ ಪುಸ್ತಕಗಳು ಬಿಡುಗಡೆಯ ಸ್ವಾತಂತ್ರ್ಯವನ್ನು ಪಡೆದುಕೊಂಡವು. 60ನೆಯ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಮನೋಹರ ಗ್ರಂಥ ಮಾಲಾದ 75ನೆಯ ವರ್ಷದ ಅಮೃತ ಮಹೋತ್ಸವದ ಸಂಭ್ರಮವೂ ಸೇರಿತ್ತು.

ಸ್ವಾಗತ ಪ್ರಾಸ್ತಾವಿಕ ಭಾಷಣ ಮಾಡುತ್ತಾ ರಮಾಕಾಂತ ಜೋಶಿಯವರು ಮ.ಗ್ರಂ.ಮಾ. ನಡೆದು ಬಂದ ದಾರಿಯತ್ತ ಒಂದು ಹೊರಳು ನೋಟವನ್ನು ಬೀರಿದರು. ಗ್ರಂಥ ಮಾಲೆಯು ಮುಂಬರುವ ದಿನಗಳಲ್ಲಿ ಗಿರೀಶ ಕಾರ್ನಾಡರ ಸಮಗ್ರ ನಾಟಕಗಳ ಸಂಗ್ರಹ ಮತ್ತು ಜಿ.ಬಿ. ಜೋಶಿಯವರ ಸಮಗ್ರ ಸಾಹಿತ್ಯ ಸಂಪುಟಗಳು ಹೊರ ತರುವ ಸಿದ್ಧತೆಯಲ್ಲಿದೆ ಎಂದು ತಿಳಿಸಿದರು. ಈ ಬಾರಿ ಪ್ರಕಟವಾದ ನಾಲ್ಕು ಪುಸ್ತಕಗಳ ಲೇಖಕರಲ್ಲಿ ಮೂವರು ಮ.ಗ್ರ.ಮಾ.ಗೆ ಹೊಸಬರು ಎಂಬುದನ್ನು ತಿಳಿಸಿ, ಈಗಲೂ ಮಾಲೆಗೆ ಹೊಸ ಬರಹಗಾರರ ಬಗ್ಗೆ ಇರುವ ಕಾಳಜಿಯನ್ನು ವ್ಯಕ್ತಪಡಿಸಿದರು.

ಬುಧವಾರ ಪ್ರಕಟಗೊಂಡ ನಾಲ್ಕು ಪುಸ್ತಕಗಳು:
ಹಿಡಿಯದ ಹಾದಿ (ಲಲಿತ ಪ್ರಬಂಧಗಳು) - ಡಾ. ಗಿರಡ್ಡಿ ಗೋವಿಂದರಾಜು
ಬಿಳಿಯ ಚಾದರ (ಕಾದಂಬರಿ) - ಡಾ. ಗುರುಪ್ರಸಾದ್ ಕಾಗಿನೆಲೆ
ಒಂದೇ ಕಾಂಡದ ಕುರ್ಚಿ (ಕಥಾಸಂಕಲನ) - ಕಸ್ತೂರಿ ಬಾಯರಿ
ತ್ರಸ್ತ (ಕಾದಂಬರಿ) - ರೇಖಾ ಕಾಖಂಡಕಿ

ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಿ.ಎನ್. ರಾಮಚಂದ್ರನ್‌ರವರು ಪರಂಪರಾಗತ ಸಾಹಿತ್ಯ ಚರಿತ್ರೆ ಮತ್ತು ಸಮೀಕ್ಷೆಯಲ್ಲಿ ಪುಸ್ತಕ ಪ್ರಕಾಶಕರ ಕೊಡುಗೆಯನ್ನು ಸ್ಮರಿಸಿದರು. ಒಂದು ಕೃತಿ ವರ್ಕ್ನಿಂದ ಟೆಕ್ಸ್ಟ್ ಆಗುವ ಮಹತ್ವದ ಪ್ರಕ್ರಿಯೆಯಲ್ಲಿ ಪ್ರಕಾಶಕರ ಸೂಲಗಿತ್ತಿಯ ಪಾತ್ರವನ್ನು ಮರೆಯುವಂತಿಲ್ಲ ಎಂದು ಎಚ್ಚರಿಸಿದರು. ಮ.ಗ್ರ.ಮಾ.ದ ಜಿ.ಬಿ. ಜೋಶಿ ಮತ್ತು ಕೀರ್ತಿನಾಥ ಕುರ್ತಕೋಟಿಯವರದು ಅರ್ಜುನ-ಕೃಷ್ಣರಂತಹ ಸಂಬಂಧ ಎಂದು ಬಣ್ಣಿಸಿದರು.

ಬಿಳಿಯ ಚಾದರ ಕಾದಂಬರಿ ಕನ್ನಡ ಸಾಹಿತ್ಯ ಜಗತ್ತಿಗೆ ಹೊಸ ಬಗೆಯ, ಹೊಸ ನಿರೂಪಣೆಯ ಕೃತಿಯೆಂದು ಅಭಿಪ್ರಾಯಪಟ್ಟರು. ಅಮೆರಿಕಾದ ಭೋಗ ಜೀವನದ ಬೆತ್ತಲೆ ಚಿತ್ರಣವನ್ನು ಕಾದಂಬರಿ ತೀಕ್ಷ್ಣವಾಗಿ ಹಿಡಿದಿದೆ, ಆದರೆ ಕಾದಂಬರಿಯು ಆ ಜೀವನದ ಒಂದೇ ಮುಖದ ದರ್ಶನ ಮಾಡಿಸುತ್ತದೆ ಎಂದರು.

ರೇಖಾ ಕಾಖಂಡಕಿಯವರ ಮೂವತ್ತೈದನೆಯ ಕಾದಂಬರಿ ತ್ರಸ್ತ ಎರಡು ನೆಲೆಗಳಲ್ಲಿ ಸಂಚರಿಸುವ ವಿಶಿಷ್ಟ ಕತೆಯೆಂದೂ, ಕಸ್ತೂರಿ ಬಾಯರಿಯವರ ಒಂದೇ ಕಾಂಡದ ಕುರ್ಚಿ ಕಥಾಸಂಕಲನವು ಕ್ರೂರ ಬರ್ಬರ ಸಾಮಾಜಿಕ ವ್ಯವಸ್ಥೆಯ ಚಕ್ರದಡಿ ನುಚ್ಚು ನೂರಾಗುವವರ ಚಿತ್ರಣವೆಂದು ಅಭಿಪ್ರಾಯ ಪಟ್ಟರು. ಗಿರಡ್ಡಿಯವರ ಲಲಿತ ಪ್ರಬಂಧಗಳು ವೈನೋದಿಕ ಶೈಲಿಯನ್ನು ಹೊಂದಿದ್ದು, ಎಲ್ಲೂ ವಿಡಂಬನೆಯಾಗದೆ ಸ್ವಾನುಭವ ಆಧಾರಿತ ಲೇಖನಗಳೆಂದೂ, ರಂಜನೆಯನ್ನೂ ಗಂಭೀರ ಚಿಂತನೆಯನ್ನೂ ಒದಗಿಸುತ್ತವೆ ಎಂದು ವಿಮರ್ಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿ.ಎಸ್. ಆಮೂರರು ಜಿ.ಬಿ. ಜೋಶಿಯವರನ್ನು ಕೃತಜ್ಞತೆಯಿಂದ ನೆನಸಿಕೊಂಡರು. ಲೇಖಕರಿಗೆ ಅತ್ಯಂತ ನಿಸ್ವಾರ್ಥದ ಪ್ರಕಾಶರಾಗಿದ್ದರೆಂದು ಹೇಳಿದರು. ಎಲ್ಲಾ ಲೇಖಕರು ತಮ್ಮ ಪುಸ್ತಕ ರಚನೆಯ ಮತ್ತು ಪ್ರಕಟಣೆಯ ಸಂತಸವನ್ನು ಹಂಚಿಕೊಂಡರು. ಹ.ವೆಂ. ಕಾಖಂಡಕಿಯವರು ಕಾರ್ಯಕ್ರಮವನ್ನು ನಿರ್ವಹಿಸಿ ವಂದನಾರ್ಪಣೆ ಸಲ್ಲಿಸಿದರು.

ಕಾಗಿನೆಲೆ ಕಾದಂಬರಿ ಬಿಳಿಯ ಚಾದರ ಆ.15 ಬಿಡುಗಡೆ

ದಟ್ಸ್‌ಕನ್ನಡದಲ್ಲಿ ಪ್ರಕಟವಾದ ಗುರುಪ್ರಸಾದ್ ಅವರ ಕಥೆಗಳು

ಮಧ್ವ ವಿಜಯ!!!
ಬೀಜ
ಅಲಬಾಮಾದ ಅಪಾನವಾಯು
ಆಲ್ಮೋಸ್ಟ್... ಒಂದು ಕಥೆ
...ಹೀಗೆ ಒಂಥರಾ ಪ್ರೇಮ ಕಥೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X