ಅಂತರ್ಜಾಲ ಮತ್ತು ‘ಹೂಮನೆ’ಯಲ್ಲಿ ಹೂಲಿ ಶೇಖರ್!
- ಕೇಶವಸುತ
ಈಗವರು ತಮ್ಮ ಚೆಂದದ ‘ಹೂಮನೆ’ಯಲ್ಲಿ ಕೂತು, ಅಕ್ಷರಗಳ ಪೋಣಿಸುತ್ತಿದ್ದಾರೆ... ಅವರ ಲೇಖನಿಯಿಂದ ಇನ್ನೊಂದು ‘ಮೂಡಲ ಮನೆ’ ಹೊರಬಂದರೂ ಅಚ್ಚರಿಯೇನಿಲ್ಲ...
ಅಕ್ಷರಗಳಲ್ಲಿ ಚೆಂದದ ಮಹಲು-ಗೋಪುರ ಕಟ್ಟುತ್ತಿದ್ದ ಶೇಖರ್, ಮನೆಕಟ್ಟಿದ್ದಾರೆ. ಇತ್ತೀಚೆಗಷ್ಟೇ ಕನಕಪುರ ರಸ್ತೆಯ ವಾಜರಹಳ್ಳಿಯಲ್ಲಿ ನಡೆದ ‘ಹೂಮನೆ’ಯ ಗೃಹಪ್ರವೇಶಕ್ಕೆ ಅವರು, ರಂಗಭೂಮಿ ಮತ್ತು ಸಾಹಿತ್ಯಲೋಕದ ಗೆಳೆಯರನ್ನು ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿಯೇ www.hoolishekhar.com ಎಂಬ ವೆಬ್ಸೈಟ್ನ್ನು ಸಂಗೀತ ನಿದೇಶಕ ಹಂಸಲೇಖ, ಶೇಖರ್ರ ಎರಡು ನಾಟಕ(ಒಂದು ವೃಧಾ ಪ್ರಸಂಗ, ರಂಗಪುರಂದರ)ಗಳನ್ನು ಈಟೀವಿಯ ಕಾರ್ಯಕ್ರಮ ನಿರ್ಮಾಪಕ ಕೆ.ಎಸ್.ಶ್ರೀಧರ್ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್.ಶ್ರೀಧರ್, ರಂಗಭೂಮಿಯಲ್ಲಿ ಹೆಸರು ಮಾಡಿರುವ ಹೂಲಿ ಶೇಖರ್ ಪ್ರತಿಭೆಯನ್ನು ಚಿತ್ರರಂಗ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅವರಿಗೆ ತಕ್ಕ ಸ್ಥಾನ ದೊರಕಬೇಕು ಎಂದು ಅಭಿಪ್ರಾಯಪಟ್ಟರು.
ಪುಸ್ತಕಗಳ ಕುರಿತು ರಂಗನಿರ್ದೇಶಕ ಎಸ್.ರಾಮಮೂರ್ತಿ ಹಾಗೂ ಲೇಖಕಿ ಎಚ್.ಉಷಾ ಮಾತನಾಡಿದರು. ಸಮಾರಂಭದಲ್ಲಿ ‘ನೆನಪಿರಲಿ’ ಖ್ಯಾತಿಯ ನಿರ್ದೇಶಕ ರತ್ನಜ, ಬೆಂಗಳೂರು ಮಹಾನಗರಪಾಲಿಕೆ ಜಂಟಿ ಆಯುಕ್ತ ಹಾಗೂ ಕಥೆಗಾರ ಮನು ಬಳಿಗಾರ್ ಮಾತನಾಡಿದರು.
ಹಿರಿಯ ರಂಗನಟಿ ಲಕ್ಷ್ಮೀ ಚಂದ್ರಶೇಖರ್, ಕಿರುತೆರೆ ನಟ ಸುನೀಲ್ ಪುರಾಣಿಕ್ ಸೇರಿದಂತೆ ಕಿರುತೆರೆ ಹಾಗೂ ಹಿರಿತೆರೆಯ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಸಮಾರಂಭದಲ್ಲಿ ಭಾಗವಹಿಸಿ, ಹೂಲಿಶೇಖರ್ ಅವರಿಗೆ ಶುಭಕೋರಿದರು.