ಅಂಕಿತ ಪುಸ್ತಕ ಮಳಿಗೆಯಲ್ಲಿ ಶಾನಭಾಗರ ತುಂಬು ‘ಸಂಸಾರ’
ಬೆಂಗಳೂರು : ಪ್ರಸ್ತುತ ಹೊಸ ಓದುಗರ ಪೀಳಿಗೆ ಸೃಷ್ಟಿಯಾಗಿದೆ. ಸಾಹಿತ್ಯವನ್ನು ಓದಿಕೊಂಡವರು, ಪ್ರತಿಷ್ಠಿತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವವರು ಈ ಗುಂಪಿನಲ್ಲಿಲ್ಲ ಎಂದು ಕಥೆಗಾರ ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು.
ನಗರದ ಗಾಂಧಿಬಜಾರ್ನ ಅಂಕಿತ ಪುಸ್ತಕ ಮಳಿಗೆಯಲ್ಲಿ ಅವರು, ವಿವೇಕ ಶಾನಭಾಗರ ‘ಮತ್ತೊಬ್ಬನ ಸಂಸಾರ’ ಕಥಾ ಸಂಕಲನವನ್ನು ಭಾನುವಾರ(ಡಿ.11)ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಈ ಹೊಸ ಪೀಳಿಗೆ ಓದುಗರು ಯಾವುದೇ ಚೌಕಟ್ಟನ್ನು ಹಾಕಿಕೊಂಡಿಲ್ಲ. ಪತ್ರಿಕೆಯಲ್ಲೋ ಅಥವಾ ಬೇರೆಲ್ಲಾದರೂ ಮಾಹಿತಿ ಸಿಕ್ಕರೇ ಸಾಕು, ಓದಿ ಮುಗಿಸುವ ತನಕ ನೆಮ್ಮದಿ ಇಲ್ಲ. ಪುಸ್ತಕದಂಗಡಿಗೆ ತೆರಳಿ, ‘ವಿವೇಕ ಶಾನಭಾಗರ ಹೊಸ ಪುಸ್ತಕ ಕೊಡಿ’ ಅಂಥ ಕೇಳಿ, ಕೊಂಡು ಓದುತ್ತಾರೆ. ಈ ಗುಂಪಿನಲ್ಲಿ ಆಟೋ ಚಾಲಕರು, ಸಣ್ಣ ಪುಟ್ಟ ಉದ್ಯೋಗದಲ್ಲಿರುವವರು, ಐಟಿ ಉದ್ಯೋಗಿಗಳೂ ಇದ್ದಾರೆ ಎಂದರು.
ಕಥೆಗಾರರ ಸಂಖ್ಯೆ ಹೆಚ್ಚಿದೆ. ಆದರೆ ಕಥೆಗಳ ಗುಣಮಟ್ಟದಲ್ಲಿ ಹೆಚ್ಚಳ ಕಂಡು ಬಂದಿಲ್ಲ. ಈ ಮಧ್ಯೆ, ಕಥೆಗಾರರ ಕಾಲೆಳೆಯುವ ಪ್ರಯತ್ನಗಳು ಸಹಾ ನಡೆಯುತ್ತಿವೆ. ಗಾಂಧೀಜಿ ನಡೆಯುವಾಗ ಅವರಿಗೆ ಇಬ್ಬರು ಯುವತಿಯರು ಊರುಗೋಲಿನಂತೆ ಅವರ ಎಡಬಲಭಾಗದಲ್ಲಿ ನಿಲ್ಲುತ್ತಿದ್ದರು. ಅದೇ ರೀತಿ ಕಥಾ ಸಂಕಲನದ ಜೊತೆಯಲ್ಲಿಯೇ ಈಗ ಎರಡು ವಿಮರ್ಶೆಗಳು ಹೊರಬರುತ್ತಿವೆ ಎಂದು ಕಾಯ್ಕಿಣಿ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಥೆಗಾರ ಅಬ್ದುಲ್ ರಶೀದ್, ಕಥೆಗಾರರ ತಲ್ಲಣಗಳು, ಸದ್ಯದ ಸಾಹಿತ್ಯಕ ವಾತಾವರಣದ ಬಗ್ಗೆ ಸ್ವಾರಸ್ಯಕರವಾಗಿ ಮಾತನಾಡಿದರು.
ಅಲ್ಲೊಂದು ಪುಸ್ತಕ ಸಂಭ್ರಮ : ಅಂಕಿತ ಪುಸ್ತಕ ಮಳಿಗೆಯ ತುಂಬಾ ಅಂದು, ಕಥೆಗಾರರು ಮತ್ತು ಕಥಾಸಕ್ತರ ದಂಡು ಸೇರಿತ್ತು. ಅಕ್ಕರೆಯಿಂದ ಪುಸ್ತಕ ಖರೀದಿಸಿ, ಕಥೆಗಾರ ಶಾನಭಾಗ ಅವರಿಂದ ಹಸ್ತಾಕ್ಷರ ಪಡೆಯಲು ಕಥಾಭಿಮಾನಿಗಳು ಮುಗಿಬೀಳುತ್ತಿದ್ದ ದೃಶ್ಯಗಳು ಅಲ್ಲಿದ್ದವು. ತುಂತುರು ಮಳೆಯಲ್ಲಿ ನೆನಯುತ್ತಲೇ, ನೆಚ್ಚಿನ ಕಥೆಗಾರರ ಮಾತುಗಳನ್ನು ಸಹೃದಯರು ಕೇಳಿಸಿಕೊಂಡರು.
ಕಾರ್ಯಕ್ರಮ ಮುಗಿದ ನಂತರ, ರಸ್ತೆಯಲ್ಲಿಯೇ ಕಥೆಗಾರರ ಕುಶಲೋಪರಿ ನಡೆಯಿತು. ಪ್ರತಿಭಾ ನಂದಕುಮಾರ್, ಸುಮಂಗಲಾ, ವಸುಧೇಂದ್ರ, ಅಪಾರ, ಜಿ.ಕೆ.ಗೋವಿಂದರಾವ್ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು. ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಕಾರ್ಯಕ್ರಮ ನಿರೂಪಿಸಿದರು.