ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಂಪೆನಿ ನಾಟಕಗಳ ಆ ಸೊಗಸು...
- ಜಾನಕಿ
-1-
ಕರ್ಣ; ಸಾಮ್ರಾಟಾ, ಏನೆಂದು ನಾಲಿಗೆಯ ನುಡಿಸಲಿ. ಶಿಖಂಡಿಯ ನೆವದಲಿ ಬಿಲ್ಲು ಬಾಣಗಳ ಬಿಟ್ಕೊಟ್ಟು ಬಲಿಯಾದರು ಭೀಷ್ಮಾರ್ಯರು. ಅರ್ಜುನನ ಅಂಬುವಿಗೆ ಮಗನ ಮರಣದ ವಾರ್ತೆಯ ನೆವದಲಿ, ಕಳೆವರವ ಕಳೆದೊಗೆದು ಕೈಲಾಸವಾಸಿಗಳಾದರು ದ್ರೋಣಾಚಾರ್ಯರು.
-2-
ಶಕುನಿ; ಈ ಶಕುನಿಯ ಎದೆ ಹುತ್ತದೊಳಡಗಿದ ಭೇದನೀತಿ ಎಂಬ ನಾಗಿಣಿಯ ಪೂತ್ಕಾರಕ್ಕೆ ಜಾತಿ ಝಳ ಹೊಡೆದು ಕಮರುವವು ಕೋಮಲ ಕರುಳ ಸೌಹಾರ್ದಸೂತ್ರಗಳು. ಮನುಷ್ಯತ್ವ ಮಣ್ಣುಗೂಡಿ ಸುರಶಿಲ್ಪಿ ವಿಶ್ವಕರ್ಮನ ಕೈಯಕುಂಚ ಕಠೋರಕುಠಾರಿಯಾಗುವುದು ಕೋಮು ಜಾತಿ ಜಗಳದ ಗರ್ಜನೆಯಲ್ಲಿ. ದುರ್ಯೋಧನನು ದಂಡಾಪತಿಯ ಪಟ್ಟವನ್ನು ಅಶ್ವತ್ಥಾಮನಿಗೆ ಕಟ್ಟಿದರೆ, ಉಳಿಗಾಲವಿಲ್ಲ ಪಾಂಡವರಿಗೆ ಮತ್ತೆ ಅಳಿಗಾಲವಿಲ್ಲ ಆ ಕುರುಡನ ಕುನ್ನಿಗಳಿಗೆ. ಆದ್ದರಿಂದ ಹೂಡಿ ಹೊಡೆಯುವೆ ದುರ್ಯೋಧನನೆದೆಗೆರಡು ಬಾಣಗಳನ್ನು. ಗರತಿಯಾದ ಭಾನುಮತಿಯ ಶೀಲದ ಬಗ್ಗೆ ಸಂಶಯದ ಬಾಣ. ಇನ್ನೊಂದು ಜಾತಿ ದ್ವೇಷದ ರಾಮಬಾಣ
(ಗಹಗಹಿಸುವನು)
-3-
ಉಷೆ; ಪ್ರಾಣಪ್ರಿಯಾ ಹೋದಿರಷ್ಟೆ ಕಡಿಗೆ? ರತ್ನಾ! ಈ ದೀನ ಅಬಲಿಯ ದಯ ಸ್ವಲ್ಪಾದರೂ ಬರಲಿಲ್ಲೆ ? ಹರಹರಾ! ಜಲವಿಲ್ಲದೆ ಮೀನವು ಬಾಳುವದುಂಟೆ? ಚಂದ್ರನಿಲ್ಲದ ಚಕೋರವು ಅನಂದಪಡಬಹುದೆ? ಹೇಮಾಶ್ರಯವಿಲ್ಲದೆ ವಜ್ರವು ಶೋಭಿಸುವುದುಂಟೆ? ತದ್ವತ್ ಭೋಗಸಾಗರಾ! ತಮ್ಮ ವಿನಾ ಈ ಬಡಬಾಲಕಿಯು ಹೇಗೆ ಬಾಳುವಳು? ಪ್ರಾಣಪ್ರಿಯ!
***
ಒಬ್ಬ ಸೂತ್ರಧಾರ, ಮತ್ತೊಬ್ಬಳು ನಟೀ. ಎರಡು ಆಯಾಮದ ಪರದೆಯಾಳಗೆ ಕಾಣಿಸುವ ಮೂರನೆಯ ಆಯಾಮ. ಝಗಮಗಿಸುವ ಬೆಳಕು. ವಸ್ತ್ರಾಭರಣ, ಕಿರೀಟ ಕರ್ಣಕುಂಡಲ.
ಕಂಪೆನಿ ನಾಟಕಗಳ ಸೊಗಸೇ ಬೇರೆ. ಅಂಥ ನಾಟಕಗಳು ಇವತ್ತು ನೋಡುವುದಕ್ಕೆ ಸಿಗುವುದಿಲ್ಲ. ಎಂದೋ ನೋಡಿದ ನೆನಪು ಮಾಸುವುದಿಲ್ಲ. ಈ ಸಂಭಾಷಣೆಯನ್ನು ಓದುತ್ತಿದ್ದರೆ ಸಿನಿಮಾಗಳಿಗೆ ಸೀರಿಯಲ್ಲುಗಳಿಗೆ ಸಂಭಾಷಣೆ ಬರೆಯುವುದು ಎಷ್ಟು ಸುಲಭ ಅನ್ನಿಸಿಬಿಡುತ್ತದೆ.
ಇವು ನಮ್ಮ ವೃತ್ತಿರಂಗಭೂಮಿಯ ನಾಟಕಗಳ ಸಾಲುಗಳು. ಇಲ್ಲಿ ಪದವೊಂದು ಪದವನ್ನು ಹುಡುಕಿಕೊಳ್ಳುತ್ತದೆ. ಪದವೇ ಮುಂದಿನ ಪದವನ್ನು ಕಟ್ಟಿಕೊಡುತ್ತದೆ. ಆ ಪ್ರಾಸದ, ಅನುಬಂಧದ, ಕೊಡುಕೊಳುವಿಕೆಯಲ್ಲಿ ಇಡೀ ನಾಟಕ ಕಟ್ಟಿಕೊಳ್ಳುತ್ತದೆ.
ಈ ನಾಟಕಗಳನ್ನು ಗಟ್ಟಿಯಾಗಿ ಓದುವುದೂ ಒಂದು ಖುಷಿ. ನೀವು ವೃತ್ತಿರಂಗಭೂಮಿಯ ನಾಟಕಗಳನ್ನು ನೋಡಿರಬಹುದು. ಆದರೆ ಆಗ ಆ ನಾಟಕದ ಮಾತುಗಳನ್ನು ಜೀರ್ಣಿಸಿಕೊಂಡಿರಕ್ಕಿಲ್ಲ. ಕರ್ನಾಟಕ ನಾಟಕ ಅಕಾಡೆಮಿ ಐದು ಕಂಪೆನಿ ನಾಟಕಗಳನ್ನು ಪ್ರಕಟಿಸಿದೆ. ಇದನ್ನು ಓದುತ್ತಾ ಹೋದರೆ ನಾಟಕಗಳ ಭಾಷೆಯ ಅರ್ಥ ಮತ್ತು ರಭಸ ಎರಡನ್ನೂ ಒಟ್ಟಿಗೆ ಅನುಭವಿಸಬಹುದು.
ಪುಸ್ತಕದ ಹೆಸರು; ವೃತ್ತಿರಂಗದ ಮಹತ್ತರ ನಾಟಕಗಳು.
Comments
Story first published: Thursday, April 11, 2002, 5:30 [IST]