ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಟ್ಟರ ಪದ್ಯಕ್ಕಿಂಥ ವಿಮರ್ಶೆಯೇ ಚೆನ್ನ !

By Staff
|
Google Oneindia Kannada News

*ಎಂ.ವಿನೋದಿನಿ

Dr. B.C.Ramachandra Sharma‘ಲಕ್ಷ್ಮಿನಾರಾಯಣಭಟ್ಟರು ಪದ್ಯ ಬರೆಯುವುದನ್ನು ಬಿಟ್ಟು ಬರಿ ವಿಮರ್ಶೆಯನ್ನೇ ಬರೆದಿದ್ದರೆ ಅವರು ದೊಡ್ಡ ವಿಮರ್ಶಕರಾಗುತ್ತಿದ್ದರು’.
- ಡಾ.ಬಿ.ಸಿ.ರಾಮಚಂದ್ರಶರ್ಮ.

ನವ್ಯಕಾವ್ಯದ ಪ್ರಮುಖ ಕವಿ ಬಿ.ಸಿ.ರಾಮಚಂದ್ರಶರ್ಮರು ಮೇಲಿನ ಮಾತನ್ನು ಹೇಳಿದ್ದು ಲಕ್ಷ್ಮಿನಾರಾಯಣ ಭಟ್ಟರನ್ನು ಕಿಚಾಯಿಸುವ ಉದ್ದೇಶದಿಂದಲ್ಲ ;ಪ್ರೀತಿಯಿಂದ. ಭಟ್ಟರ ವಿಮರ್ಶಾ ಪ್ರತಿಭೆ ಶರ್ಮರಿಗೆ ಇಷ್ಟವಾಗಿತ್ತು . ಆ ಇಷ್ಟವನ್ನು ಸಭೆಯ ಮುಂದೆ ಹೇಳಿಯೂ ಬಿಟ್ಟರು. ಅನ್ನಿಸಿದ್ದನ್ನು ನೇರವಾಗಿ ಹೇಳುವುದು ಶರ್ಮರ ಹುಟ್ಟುಗುಣ.

ರಾಮಚಂದ್ರ ಶರ್ಮರು ಮಾತನಾಡುತ್ತಿದ್ದುದು ಡಾ.ಎನ್‌.ಎಸ್‌.ಲಕ್ಷ್ಮಿನಾರಾಯಣಭಟ್ಟರ ‘ಸಾಹಿತ್ಯ ಸನ್ನಿಧಿ’ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ . ಗುರುವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜೇಂದ್ರ ಪರಿಷನ್ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ‘ಸಾಹಿತ್ಯ ಸನ್ನಿಧಿ’ ಪುಸ್ತಕವನ್ನು ಬಿಡುಗಡೆ ಮಾಡಿ ಶರ್ಮ ಮಾತನಾಡುತ್ತಿದ್ದರು.

ಲಕ್ಷ್ಮಿನಾರಾಯಣ ಭಟ್ಟರು ಕನ್ನಡದ ಶ್ರೇಷ್ಠ ವಿಮರ್ಶಕರಲ್ಲೊಬ್ಬರು. ಕವಿತೆ ಬರೆಯುವುದನ್ನು ಬಿಟ್ಟು ವಿಮರ್ಶೆಯನ್ನೇ ಬರೆದಿದ್ದರೆ ಭಟ್ಟರು ದೊಡ್ಡ ವಿಮರ್ಶಕರಾಗುತ್ತಿದ್ದರು ಎಂದು ಶರ್ಮ ಹೇಳಿದರು.ಅಂದಹಾಗೆ, ‘ಸಾಹಿತ್ಯ ಸನ್ನಿಧಿ’ ವಿಮರ್ಶಾ ಲೇಖನಗಳ ಸಂಕಲನ.

ಎಲಿಯೆಟ್‌, ಷೇಕ್ಸ್‌ಪಿಯರ್‌, ಯೇಟ್ಸ್‌ರಂಥ ಕವಿಗಳ ಕೃತಿಗಳನ್ನು ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ಅನುವಾದಿಸಿದ ಅಗ್ಗಳಿಕೆ ಭಟ್ಟರದು. ಭಟ್ಟರ ಅನುವಾದಗಳ ವಿಶೇಷವೆಂದರೆ- ಆ ಬರಹಗಳಲ್ಲಿ ತಲಸ್ಪರ್ಶಿ ಅಧ್ಯಯನ ಎಂದು ಶರ್ಮ ಬಣ್ಣಿಸಿದರು.

ಕವಿತೆ ಹಾಡಾಗಬಾರದು !

Dr. N.S.Lakshminarayana Bhatಕವಿತೆಯನ್ನು ಹಾಡಾಗಿಸುವ ಕುರಿತು ತಮ್ಮ ಸಿದ್ಧಾಂತವನ್ನು ಮರು ಮಂಡಿಸಿದ ರಾಮಚಂದ್ರಶರ್ಮರು, ಕವನಗಳು ಕವನಗಳಾಗಿರಬೇಕೇ ಹೊರತು ಹಾಡುಗಳಾಗಬಾರದು ಎಂದರು.

ಹಾಡುಗಳನ್ನು ಕಾವ್ಯ, ಕವನ ಅಥವಾ ಕವಿತೆ ಎಂದು ಕರೆಯಬಾರದು. ಸಂಗೀತದ ಗಂಧ ಹಾಗೂ ಕವಿತೆ ಬೇರೆ ಬೇರೆ. ಕೆಲವು ಕೆಟ್ಟ ಕವಿತೆಗಳು ಉತ್ತಮ ಸಂಗೀತದ ಜೊತೆ ಸೇರಿ ಜನಪ್ರಿಯತೆ ಗಳಿಸಿವೆ ಎಂದರು.

ನಾನು ಸಂಗೀತ ವಿರೋಧಿ ಎಂದು ಕೆಲವರು ಹೇಳುವುದು ನನಗೂ ತಿಳಿದಿದೆ. ಆದರೆ ಅಸಲು ವಿಷಯ ಅದಲ್ಲ . ನನಗೆ ಸಂಗೀತದ ಬಗ್ಗೆ ವಿರೋಧವಿಲ್ಲ . ನಾನು ಶಾಸ್ತ್ರೀಯ ಸಂಗೀತವನ್ನು ಕೇಳಿ ಆಸ್ವಾದಿಸುತ್ತೇನೆ. ನನ್ನ ವಿರೋಧವೇನಿದ್ದರೂ ಕವನಗಳನ್ನು ಹಾಡುಗಳಾಗಿಸುವ ಕುರಿತು ಎಂದು ಶರ್ಮ ಮಾರ್ಮಿಕವಾಗಿ ನುಡಿದರು.

ಕವಿತೆ ಸಮಾಜದ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಸಾಧ್ಯವಾಗದಿದ್ದರೂ, ಸಮಾಜದ ಹುಳುಕುಗಳನ್ನು ಕೆದಕುವಂತಿರಲಬೇಕು. ಅಂಥ ಕವಿತೆಗಳು ಹೆಚ್ಚು ಹೆಚ್ಚು ಬರಬೇಕು ಎಂದು ಶರ್ಮ ಆಶಿಸಿದರು.

ವಿಮರ್ಶಕ ಎಂ.ಎಚ್‌.ಕೃಷ್ಣಯ್ಯ ‘ಸಾಹಿತ್ಯ ಸನ್ನಿಧಿ’ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಹಾಜರಿದ್ದರು. ಕಾರ್ಯಕ್ರಮವನ್ನು ಏರ್ಪಡಿಸಿದ್ದ ಉಪಾಸನ ಸಂಸ್ಥೆಯ ಜೆ.ಮೋಹನ್‌ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಉಪಾಸನಾ ಬಳಗದ ಅರ್ಚನಾ ಉಡುಪ, ದಿವ್ಯಾ ರಾಘವನ್‌, ಸುನೀತಾ, ಮುಂತಾದವರು ನಡೆಸಿಕೊಟ್ಟ ಭಟ್ಟರ ಗೀತೆಗಳ ಗಾಯನ ಆಕರ್ಷಕವಾಗಿತ್ತು .


ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X