ಜಯಪ್ಪನವರ ‘ಹುಲ್ಲಿನ ಮನೆ’
ತಮ್ಮ 'ಬಾ ಬೆಳಕೆ' ಕವನ ಸಂಕಲನದಿಂದ ಈಗಾಗಲೇ ಹೆಸರು ಮಾಡಿರುವ ಕವಿ ಜಯಪ್ಪ ಹೊನ್ನಾಳಿಯವರು 'ಹಾಡ ಹಕ್ಕಿಯೇ ಹಾಡು' ಎಂದು ಮನದಾಳಕ್ಕೆ ಕರೆಯಿತ್ತಾಗ ಗರಿಗೆದರಿ ಕುಣಿದ ಸೋಗೆಯ ಸೊಗಸು ಇದೀಗ ಹೊರಬಂದಿರುವ ಕವನ ಗುಚ್ಛ 'ಹುಲ್ಲಿನ ಮನೆ'ಯ ವೈಶಿಷ್ಟ್ಯ. ರಸರಮಣೀಯತೆ, ಪ್ರೇಮ, ದಿನನಿತ್ಯದ ವ್ಯಾವಹಾರಿಕತೆ, ಸತ್ಯಪ್ರಿಯತೆ, ಕಲ್ಪನಾ ವಿಲಾಸ, ನಾದ ಮಾಧುರ್ಯ, ಹೀಗೆ ಹಲವಾರು ಉತ್ತಮಿಕೆಯ ಗುಣ ಜಯಪ್ಪನವರ ಕವನಗಳಲ್ಲಿ ಮಿಂಚುತ್ತವೆ.
'ನೊರೆ ಕುದುರೆ', 'ಜಡಧಿ', 'ಜ್ಞಾನ ದೊನ್ನೆ'ಯಂಥ ಉತ್ತಮ ಪ್ರತಿಮೆಗಳ ಸುತ್ತ ಈ ಕವಿಯ ಕುಂಚ ಚಿತ್ರಕೂಟಗಳನ್ನು ರಚಿಸಿ ರಂಜಿಸಬಲ್ಲದು ; ಕನ್ನಡವೆಂದರೆ ಭಾಷೆಯ ಬನದಲಿ ಸವಿ ಜೇನೆಂದು ಚಪ್ಪರಿಸುವ ಜಯಪ್ಪ , ಪ್ರಕೃತಿ ವರ್ಣನೆಗೆ ತೊಡಗಿದಾಗ (ನಿದರ್ಶನಕ್ಕೆ 'ನಿನ್ನ ನೆನಪಾಗುತಿದೆ') ಮಲ್ಲಿಗೆಯ ಚಪ್ಪರದೊಳಗಿನಿಂದ ಸುಳಿದು ಬರುವ ಧ್ವನಿಪೂರ್ಣ ಮಾಧುರ್ಯದ ಮಾತುಗಳನ್ನಾಡುತ್ತಾರೆ. ಛಂದೋಬದ್ಧತೆ, ಸರಳ ನಿರೂಪಣೆ ಮತ್ತು ಗೇಯತೆಗಳು ಇಲ್ಲಿನ ಅನೇಕ ಕವನಗಳನ್ನು ಜನಪ್ರಿಯಗೊಳಿಸುವ ಲಕ್ಷಣಗಳಾಗಿವೆ.
ಕಾವ್ಯದ ಭಾಷೆ ಬೇರೆಂಬ ಅರಿವು ಕವಿಗೆ ಇದೆ ; ಅನುಭವವನ್ನು ಅಭಿವ್ಯಕ್ತಿಸುವ ವಿಶಿಷ್ಟ ಕಲೆಯನ್ನು ಕರಗತ ಮಾಡಿಕೊಳ್ಳುವ ಜಾಣ್ಮೆಯ ಜಾಡಿನಲ್ಲಿ ನಡೆದಾಗ ಒಡಮೂಡಿದ ಸೂಳ್ನುಡಿಗಳು ಇಲ್ಲಿವೆ. ಶೈಲಿಯ ಲಾಲಿತ್ಯಕ್ಕೆ 'ಹುಲ್ಲಿನ ಮನೆ' ಕವನವನ್ನು ಹೆಸರಿಸಿದರೆ ಆಡು ನುಡಿಯ ಸೊಗಡಿಗೆ 'ಅವ್ವಾ...! ಎಂದರೆ' , 'ಎಲ್ಲಿ ಹೋಯ್ತು ನಿನ್ನ ಪ್ರೀತಿ?'ಗಳನ್ನು ಬೆಟ್ಟು ಮಾಡಿ ತೋರಬಹುದು. ಅಲ್ಲಲ್ಲಿ ಪ್ರಾಸದ ಪ್ರಾಸಾದಿಕತೆಗೇ ವಜ್ಜೆ ಹಾಕಿ, ಅದು ಪದ್ಯಕ್ಕೆ ಮುಂಭಾರವಾಯ್ತೇನೋ ಎಂದು ಭಾಸವಾದರೂ ('ಬಾ ಕವನ') ಎಲ್ಲವೂ ಹಾಗಲ್ಲ . ಪದ ಲಾಲಿತ್ಯ (ಉದಾಹರಣೆಗೆ 'ಎಲ್ಲಿ ಹೋದವು ಆ ದಿನಗಳು?', 'ತಿರುತಿರುಗಿ ನೋಡದಿರು') ಕವನಕ್ಕೆ ಮೆರಗು ತರುತ್ತವೆ. ಕಷ್ಟ ಕಾರ್ಪಣ್ಯ, ನೋವು ನಲಿವು, ಬದುಕಿನ ಏರಿಳಿತಗಳ ಒಳ ಸುಳಿಯನ್ನು ಕಾಣುವ, ಕಾಣಿಸುವ ಈ ಕವಿಯ ಹಂಬಲವನ್ನು ಎಲ್ಲರೂ ಮೆಚ್ಚಬೇಕು.
ಇಲ್ಲಿನ 'ಉಳಿ ಏಟು ಸಹಿಸಲತಿ ಶಿಲೆಯು ಶಿವವಾಗುವುದು' ಎಂಬ ಕವಿಯ ಮಾತು, 'ಗುಲಾಬಿ ಅರಳಲಿ', 'ಕೃಷ್ಣ ಚಂದ್ರ', 'ಭಾವ ಬರಗಾಲ', 'ವರ ಕೊಟ್ಟರೆ ಹರ'ಗಳಿಗೂ ಅನ್ವಯಿಸಿ ಹೇಳಬಹುದು. ಜೊತೆಗೆ ಮತ್ತೆ ಮತ್ತೆ ಮೆಲುಕು ಹಾಕುವ,
('ದೇಶದೊಳಿತಿಗೆ
ನಾವು
ಕೊಡುವ
ಕಾಣಿಕೆ
ಇಷ್ಟೆ
,
ಜಡತೆ
ತೊಲಗಿಸಿ
ನಾವೇ
ಬೆಳೆಯಬೇಕು',
ಇತ್ಯಾದಿ)
ಹಲವು ಮಾತಿನ ಮುತ್ತುಗಳಿಗೆ ಆಕರವಾಗಿದೆ.
ಜಯಪ್ಪ ಹೊನ್ನಾಳಿ ಅವರ ಕಾವ್ಯ ಹೀಗೇ ಸಾಗಿ, ಹಿಗ್ಗಿ ಹಿಗ್ಗಿ ಹಲವಾರು ಸುಗ್ಗಿಗಳನ್ನು ಕಾಣಲಿ ಎಂದು ಹಾರೈಸುವೆ.
ಕೃತಿ
:
ಹುಲ್ಲಿನ
ಮನೆ
(ಕವನ
ಸಂಕಲನ)
ಕವಿ
:
ಜಯಪ್ಪ
ಹೊನ್ನಾಳಿ
(ರುದ್ರತನಯ)
ಪ್ರಥಮ
ಮುದ್ರಣ
:
2003
ಪುಟ
:
86+18
,
ಬೆಲೆ
:
60
ರುಪಾಯಿ.
ಪ್ರಕಾಶನ
:
ಸರ್ವಜ್ಞ
ಕನ್ನಡ
ಸಂಘ,
ನಂ.99,
5ನೇ
ಎ
ಮುಖ್ಯರಸ್ತೆ
,
2ನೇ
ಹಂತ,
ಬೃಂದಾವನ,
ಮೈಸೂರು-
570
020.