ಕಾಲು ನೀರಿಗಿಳಿ ಬಿಡಿ : ನದಿ ತೀರದಲ್ಲಿ ಉಳಿದವಿಮರ್ಶಕರಿಗೆ ಮನವಿ
ಬೆಂಗಳೂರು : ನದೀತಟದ ನುಣುಪುಗಲ್ಲುಗಳೊಂದಿಗಿನ ಆಟದಲ್ಲೇ ಕಾಲ ಕಳೆವ ಹಾಗೂ ಅದಷ್ಟೇ ಸುಖ ಎಂದು ಭ್ರಮಿಸುವ ವಿಮರ್ಶಕರು ಹೆಚ್ಚಾಗುತ್ತಿದ್ದು , ನೀರಲ್ಲಿ ಕಾಲಿಳಿಬಿಟ್ಟು ಹಾಯಿ ಕಾಣಲು ಯತ್ನಿಸುವವರು ಅಪರೂಪವಾಗುತ್ತಿದ್ದಾರೆ ಎಂದು ವಿಮರ್ಶಕ ಪ್ರೊ.ಎಂ. ಎಚ್. ಕೃಷ್ಣಯ್ಯ ವಿಷಾದಿಸಿದ್ದಾರೆ.
ವಿಮರ್ಶೆ ಕವಿಯ ಕಾವ್ಯನಿಷ್ಠವಾಗಿ ಇರಬೇಕೆ ಹೊರತು, ಕಾವ್ಯದ ಮೇಲೆ ತಾವು ಎಲ್ಲಿಂದಲೋ ಎರವಲು ಪಡೆದ ಸಿದ್ಧಾಂತಗಳನ್ನು ಹೇರುವುದು ಸಲ್ಲದು ಎಂದು ಅವರು ಅಭಿಪ್ರಾಯಪಟ್ಟರು. ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯಂ ಅವರ ‘ಇಹದ ಪರಿಮಳದ ಹಾದಿ’ ವಿಮರ್ಶಾ ಕೃತಿಯ ದ್ವಿತೀಯ ಮುದ್ರಣ ಕೃತಿಯ ಬಿಡುಗಡೆ ಸಮಾರಂಭದಲ್ಲಿ (ಭಾನುವಾರ) ಕೃಷ್ಣಯ್ಯ ಮಾತನಾಡುತ್ತಿದ್ದರು.
ಡಾ.ಕೆ. ಎಸ್. ನರಸಿಂಹ ಸ್ವಾಮಿ ಅವರ ಸಮಗ್ರ ಕವಿತೆಗಳ ಕುರಿತ ವಿಮರ್ಶೆಯಾದ ಇಹದ ಪರಿಮಳದ ಹಾದಿ ಮಲ್ಲಿಗೆಯ ಕವಿಯ ಒಳನೋಟ, ದೃಷ್ಟಿ ಕೋನ, ತುಡಿತ ಅರ್ಥ ಮಾಡಿಕೊಳ್ಳುವಂಥಾ ಅರ್ಥಪೂರ್ಣ ಯತ್ನ. ಪ್ರಯತ್ನದಗಳೇ ಅಪರೂಪವಾಗಿರುವ ದಿನಗಳಲ್ಲಿ ಈ ಕೃತಿ ಮಹತ್ವದ್ದು ಎಂದು ಪುಸ್ತಕ ಬಿಡುಗಡೆ ಮಾಡಿದ ಮತ್ತೊಬ್ಬ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಹೇಳಿದರು.
ಪುಸ್ತಕ ಸಂಸ್ಕೃತಿ ಕ್ಷೀಣಿಸುತ್ತಿರುವುದೇ ಇಂದಿನ ಸಾಹಿತ್ಯ ಚರ್ಚೆ ಮಡುಗಟ್ಟಲು ಕಾರಣ. ಮಕ್ಕಳಿಗೆ ಚಿಕ್ಕಂದಿನಲ್ಲೇ ಓದುವ ಹುಚ್ಚು ಮೈಗೂಡುವ ಪರಿಸ್ಥಿತಿ ಸೃಷ್ಟಿಯಾಗಬೇಕು ಎಂದು ಲಕ್ಷ್ಮೀನಾರಾಯಣ ಭಟ್ಟ ಹೇಳಿದರು. ಅವರು ತಮ್ಮ ಮಾತು ಮುಗಿಸುವ ಮುನ್ನ ಶ್ರೇಷ್ಠ ಕವಿಗಳ ಕವಿತೆಗಳನ್ನು ವಿಮರ್ಶಿಸುವ ಮುನ್ನ ಮೈಯ್ಯೆಲ್ಲಾ ಎಚ್ಚರವಾಗಿರಬೇಕು. ಕಾವ್ಯದ ಬಗ್ಗೆ ಅರಿವಿಲ್ಲದೆ ಕಾವ್ಯ ವಿಮರ್ಶೆಗೆ ತೊಡಗುವುದೂ ಆತ್ಮಹತ್ಯೆ ಮಾಡಿಕೊಳ್ಳುವುದೂ ಏಕರೂಪದ ಆತ್ಮಹತ್ಯೆಗಳು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಂಡಾಯದ ವ್ಯಾಸರಾಯ ಬಲ್ಲಾಳರು, ಬದುಕಿನ ಸೌಂದರ್ಯದ ಪರಿಪೂರ್ಣತೆಯನ್ನು ಕಾವ್ಯದಲ್ಲಿ ಬಿಂಬಿಸಿದ ಕೆಎಸ್ನ ಸರಳತೆ ಮೂಲಕ ಬದುಕು, ದಾಂಪತ್ಯ ಅನುಭವಿಸಿದವರು. ಮೈಸೂರು ಮಲ್ಲಿಗೆಯ 27 ಮುದ್ರಣದ ಸಾಧನೆ ಭಾರತೀಯ ಸಾಹಿತ್ಯ ರಂಗದಲ್ಲೇ ವಿಶಿಷ್ಟವಾದುದು ಎಂದರು.
(ಇನ್ಫೋ ವಾರ್ತೆ)