14 ವರ್ಷಗಳ ನಂತರ ಹೊರಬರುತ್ತಿರುವ ವಿಶ್ವಕೋಶ ಸಂಪುಟ
ಮೈಸೂರು : ಕನ್ನಡದ ಮೂಲಕ ವಿಶ್ವವನ್ನು ಕಾಣಲು ತವಕಿಸುವ ಜ್ಞಾನಾಸಕ್ತರು ಚಾತಕಗಳಂತೆ ಕಾಯುತ್ತಿರು ಮೈಸೂರು ವಿಶ್ವ ವಿದ್ಯಾಲಯದ ಪ್ರಕಟಣೆ ಕನ್ನಡ ವಿಶ್ವಕೋಶದ 13 ನೇ ಸಂಪುಟ ಒಂದು ವರ್ಷದ ವಿಳಂಬದ ನಂತರ ಮಾರ್ಚ್ 31 ರ ಶನಿವಾರ ಬಿಡುಗಡೆಯಾಗುತ್ತಿದೆ.
ರಾಜ್ಕುಮಾರ್ ಅಪಹರಣ ಸೇರಿದಂತೆ ವಿವಿಧ ಕಾರಣಗಳಿಗಾಗಿ ಬಿಡುಗಡೆಯ ಭಾಗ್ಯವನ್ನು ಮುಂದೂಡುತ್ತಲೇ ಬರಲಾಗಿದ್ದು , ಆ ಮುಹೂರ್ತ ಶನಿವಾರ ಕೂಡಿ ಬಂದಿದೆ. ವಿಶ್ವ ವಿದ್ಯಾಲಯದ ಕ್ರಾಫರ್ಡ್ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಶ್ವಕೋಶದ ಸಂಪುಟವನ್ನು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ಬಿಡುಗಡೆ ಮಾಡುವರು. ಜನಪ್ರಿಯ ಅಂಕಣಕಾರ ಎಚ್ಚೆಸ್ಕೆ ಕಾರ್ಯಕ್ರಮದ ಮುಖ್ಯ ಅತಿಥಿಗಳು. ವಿವಿಯ ಕುಲಪತಿ ಎಸ್.ಎನ್. ಹೆಗ್ಡೆ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿವರಗಳನ್ನು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಕನ್ನಡ ವಿಶ್ವಕೋಶದ 12 ನೇ ಸಂಪುಟ ಬಿಡುಗಡೆಯಾದದ್ದು 1986 ರಲ್ಲಿ . ನಂತರ ವನವಾಸದಲ್ಲಿದ್ದ 13ನೇ ಸಂಪುಟದ ಬಿಡುಗಡೆ 14 ವರ್ಷದ ನಂತರ ಈಗ ನಡೆಯುತ್ತಿದೆ. ಮ ದಿಂದ ರಾ ವರೆಗೆ ಅಕ್ಷರ ಸೂಚಿತ ಪದ- ಪದಾರ್ಥ ವ್ಯಾಖ್ಯೆಯನ್ನು ಹೊಂದಿರುವ 980 ಪುಟಗಳ ಪುಸ್ತಕದ ಬೆಲೆ 350 ರುಪಾಯಿ . ಪುಸ್ತಕದ ಮುದ್ರಣಕ್ಕೆ ಎಂಟೂವರೆ ಲಕ್ಷ ರುಪಾಯಿ ಖರ್ಚು ತಗುಲಿದೆ.
ಮಹಾರಾಜ ಕಾಲೇಜು ಶತಮಾನೋತ್ಸವ ಕಟ್ಟಡ ಉದ್ಘಾಟನೆ
ವಿಶ್ವಕೋಶದ ಬಿಡುಗಡೆ ಮಾತ್ರವಲ್ಲದೇ ಮೈಸೂರಿನಲ್ಲಿ ಶನಿವಾರವೇ ನಡೆಯುವ ಮತ್ತೆರಡು ಪ್ರಮುಖ ಕಾರ್ಯಕ್ರಮಗಳಲ್ಲಿ - ಮಹಾರಾಜ ಕಾಲೇಜು ಶತಮಾನೋತ್ಸವ ಸ್ಮಾರಕ ಶೈಕ್ಷಣಿಕ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್. ವಿಶ್ವನಾಥ್ ಉದ್ಘಾಟಿಸಿದರೆ, ಮಾನಸಗಂಗೋತ್ರಿಯಲ್ಲಿ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯವನ್ನು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮೋಟಮ್ಮ ಉದ್ಘಾಟಿಸುವರು.
(ಇನ್ಫೋ ವಾರ್ತೆ)