ಸುಖಾ ಸುಮ್ಮನೇ ಪ್ರೀತಿಸಿ ! ಕನಿಷ್ಠ ಲೇಖಕರನ್ನಾದರೂ...
*ಸತ್ಯವ್ರತ ಹೊಸ-ಬೆ-ಟ್ಟು
ಅದನ್ನು uncritical admiration ಅನ್ನುತ್ತಾರೆ.
ಅನಂತ ಮೂರ್ತಿ, ಲಂಕೇಶ್, ಯಶವಂತ ಚಿತ್ತಾಲ, ಪೂರ್ಣಚಂದ್ರ ತೇಜಸ್ವಿ, ಬೇಂದ್ರೆ, ಮಾಸ್ತಿ, ಕುವೆಂಪು, ಅಡಿಗ ಮುಂತಾದವರ ಬಗ್ಗೆ ಇಪ್ಪತ್ತು ವರ್ಷಗಳ ಹಿಂದಿನ ಹದಿಹರೆಯ ದ ಯುವಕರಿಗೆ ಇದ್ದ ಭಾವನೆ ಅದು.
ಆದರೆ ಅದೀಗ ಬದಲಾಗಿದೆ. ಎಲ್ಲವನ್ನೂ ಅನುಮಾನದಿಂದ ನೋಡುವ ಚಟ ಎಲ್ಲರಲ್ಲೂ ಬೆಳೆದು ಬಿಟ್ಟಿದೆ. ವಯಸ್ಸು, ತಿಳಿವಳಿಕೆ, ಅರ್ಹತೆ... ಇವ್ಯಾವುದರ ಪರಿವೆಯೂ ಇಲ್ಲದೇ ತೀರ್ಮಾನಗಳನ್ನು ಕೊಡುವ ಮಟ್ಟಕ್ಕೆ ನಾವು ಬಂದಿದ್ದೇವೆ.
ಇದು ಸಾಹಿತ್ಯ ಕ್ಷೇತ್ರದ ದುರಂತ ಮಾತ್ರವಲ್ಲ . ರಾಜಕೀಯ, ಸಿನಿಮಾ, ವ್ಯವಹಾರ ಎಲ್ಲದರ ಸಮಸ್ಯೆಯೂ ಇದೇ. ಇವತ್ತು ನಾವು ನಾಯಕರನ್ನು ಸೃಷ್ಟಿಸುವುದರಲ್ಲಿ ಆಸಕ್ತರಾಗಿಲ್ಲ. ನಮಗೆ ಆದರ್ಶಪ್ರಾಯರಾದ ವ್ಯಕ್ತಿಗಳೂ ಇಲ್ಲ.
ಕಳೆದ ವಾರ ವ್ಯಾಸರಾಯ ಬಲ್ಲಾಳ ಅವರ ಹೊಸ ಕಾದಂಬರಿ ಬಿಡುಗಡೆಯಾಯಿತು. ಅವರು ಕಳೆದ ಕೆಲವು ವರ್ಷಗಳಿಂದ ಬರೆಯುತ್ತಾ ಬಂದಿರುವ ಅವರ ಮಹತ್ವಾಕಾಂಕ್ಷೆಯ ಕೃತಿ ಅದು. ಅದನ್ನು ಮೈಸೂರಿನ ಗೀತಾ ಏಜನ್ಸೀಸ್ ಮುದ್ರಿಸಿದೆ. ಆ ಮುದ್ರಣ ಸಂಸ್ಥೆಯ ಸಂಪ್ರದಾಯದಂತೆ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿಲ್ಲ.
ಆದರೆ, ಒಂದು ಮಹತ್ವದ ಕೃತಿ ಬಿಡುಗಡೆಯಾದಾಗ, ಆ ಕೃತಿಯ ಬಗ್ಗೆ ಒಂದಷ್ಟು ಮಾತುಕತೆ ನಡೆಯುವುದು ಸಹಜ. ಹಿಂದೆಲ್ಲ ಅನಂತಮೂರ್ತಿಯವರ ಹೊಸ ಕಾದಂಬರಿ ಬಂದಾಗ ಪತ್ರಿಕೆಗಳೂ ಸೇರಿದಂತೆ ಒಂದು ವರ್ಗದ ಮಂದಿ ಅದನ್ನು ಪ್ರೋತ್ಸಾಹಿಸುತ್ತಿದ್ದರು, ಪೊರೆಯುತ್ತಿದ್ದರು. ಆ ಕಾದಂಬರಿಯ ಬಗ್ಗೆ ಚರ್ಚೆಯಾಗುತ್ತಿತ್ತು. ಕನಿಷ್ಟ ಪ್ರತಿಭಟನೆಯಾದರೂ ಕೇಳಿ ಬರುತ್ತಿತ್ತು.
ಒಂದು ಸಾಹಿತ್ಯ ಕೃತಿ ವಿವಾದ ಸೃಷ್ಟಿಸದೆ ಎಷ್ಟು ವರ್ಷಗಳಾಗಿವೆ ಯೋಚಿಸಿ. ಹೀಗಿರುವಾದ ಲೇಖಕರಿಗೆ ಸ್ಫೂರ್ತಿಯಾದರೂ ಎಲ್ಲಿಂದ ಬರಬೇಕು. you love me or hate me... but dont ignore me ಎಂದು ಕೇಳಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಇದನು ಕನ್ನಡದ ಓದುಗರ ಅಸಡ್ಡೆ ಎಂದು ಕರೆಯುವುದೂ ಕಷ್ಟ. ಉದಾಹರಣೆಗೆ ಶೋಭಾ ಡೇ ಹೊಸ ಕಾದಂಬರಿ ಬಿಡುಗಡೆಯಾಗಿರುವುದು ಎಲ್ಲರ ಗಮನಕ್ಕೂ ಬರುತ್ತದೆ. ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಬರೆದ ಚರಮಗೀತೆಯ ಬಗ್ಗೆ ಎಲ್ಲರಿಗೂ ಕುತೂಹಲ ಮೂಡುತ್ತದೆ. ಅರುಂಧತಿ ರಾಯ್ ಬರೆದ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಬಗ್ಗೆ ಇಲ್ಲಿ ಚರ್ಚೆ ನಡೆಯುತ್ತದೆ. ವ್ಯಾಸರಾಯ ಬಲ್ಲಾಳರಿಗೆ ಅದೆಲ್ಲ ಸಿಗುವುದೇ ಇಲ್ಲ.
ನಾನು ಅಜ್ಞಾನಿಯಾಗಿದ್ದರೆ ಎಷ್ಟು ಚೆನ್ನಾಗಿತ್ತು ಅಂತ ಒಮ್ಮೆಯಾದರೂ ಅನಿಸದ ಮನುಷ್ಯಅಜ್ಞಾನಿಯಾಗಿಯೇ ಉಳಿಯುತ್ತಾನೆ. ಮುಗ್ಧತೆಯನ್ನು ಬೆರಗನ್ನು ತುಂಬುವ ಬೇರೆ ಭಾವಗಳು ಬದುಕಿನಲ್ಲಿಲ್ಲ.
ಮತ್ತೆ ಮುಗ್ಧರಾಗೋಣ. ಅಕ್ಷರದ ಶಕ್ತಿಗೆ ಮಂತ್ರ ಮುಗ್ಧರಾಗೋಣ...
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications