ಕರಾವಳಿ ಲೇಖಕಿಯರ ಮೂರು ಪುಸ್ತಕಗಳ ಅನಾವರಣ
ಮಂಗಳೂರು : ಕರಾವಳಿ ಲೇಖಕಿಯರ ಮೂರು ಪುಸ್ತಕಗಳು ಶುಕ್ರವಾರದಂದು ಬಿಡುಗಡೆಯಾಗಿವೆ. ಒಂದು ಪ್ರವಾಸ ಕಥನ, ಇನ್ನೆರಡು ಕವನ ಸಂಕಲನ ಮತ್ತು ಪ್ರಬಂಧ ಸಂಕಲನ. ಸಾರಾ ಅಬೂಬಕ್ಕರ್ ಮತ್ತು ಚಂದ್ರಕಲಾ ನಂದಾವರ, ಇಬ್ಬರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಸರು ಮಾಡಿದವರು.
ಸಾಹಿತಿ, ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ , ಮಂಗಳೂರು ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ, ಪ್ರೊ. ಬಿ.ಎ. ವಿವೇಕ ರೈ ಮೂರೂ ಪುಸ್ತಕಗಳನ್ನು ಸಾಂಪ್ರದಾಯಿಕವಾಗಿ ಬಿಡುಗಡೆ ಮಾಡಿದರು. ಮಹಿಳಾ ಲೇಖಕಿಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ , ಚಂದ್ರಗಿರಿ ಪ್ರಕಾಶನ ಹಾಗೂ ಹೇಮಾಂಶು ಪ್ರಕಾಶನ ಸಂಯುಕ್ತವಾಗಿ ಆಯೋಜಿಸಿತ್ತು.
ಬಿಡುಗಡೆಯಾದ ಪುಸ್ತಕಗಳು : ಸಾರಾ ಅಬೂಬಕ್ಕರ್ ಅವರ ಪ್ರಬಂಧ ಸಂಕಲನ ‘ಅನಾವರಣ’ , ಚಂದ್ರಕಲಾ ನಂದಾವರ ಅವರ ಕವನ ಸಂಕಲನ ‘ಮತ್ತೆ ಚಿತ್ತಾರ ಬರೆ ಗೆಳತಿ’ ಪುಸ್ತಕಗಳು ಪ್ರಥಮ ಸುತ್ತಿನ ಓದುಗರ ಕೈಸೇರಿದವು. ಸಾರಾ ಅಬೂಬಕ್ಕರ್ ಅವರ ಇನ್ನೊಂದು ಪುಸ್ತಕ ‘ಐಶಾರಾಮದ ಆಳದಲ್ಲಿ’ . ಬಿಡುಗಡೆ ಮಾಡಿದವರು ಡಾ. ಪ್ರಭಾಕರ್ ಶಿಶಿಲ.
ಮೂರೂ ಪುಸ್ತಕಗಳ ಬಗ್ಗೆ ಮಣಿಪಾಲದ ಎಂಐಸಿಇ ಕಾಲೇಜಿನ ಉಪನ್ಯಾಸಕಿ, ಶಶಿಕಲಾ ಗುರುಪುರ ಮಾತನಾಡಿದರು. ಲೇಖಕಿ ಗುಲಾಬಿ ಬಿಳಿಮಲೆ , ಪ್ರೊ. ಲೀಲಾವತಿ ಎಸ್. ರಾವ್ ಮತ್ತು ಡಾ. ವಾಮನನಂದಾವರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
(ಮಂಗಳೂರು ಪ್ರತಿನಿಧಿಯಿಂದ)