ನನ್ನ ಬದುಕಿನ ಹಾಡು
ಕೌಲಗಿ ಗುರುರಾಯರ ಕುಲವಧು
1929ರಲ್ಲಿ ಹುಬ್ಬಳ್ಳಿಯ ಗುರುನಾಥ ಕೌಲಗಿ (ಎಲ್ಲರೂ ಕರೆಯುವುದು ಕೌಲಗಿ ಗುರುರಾಯರೆಂದೆ) ಎಂಬ ಸುಸಂಸ್ಕೃತ, ಸುಶಿಕ್ಷಿತ, ಸಜ್ಜನ ವಕೀಲರು ನನ್ನನ್ನು ವಿವಾಹ ಮಾಡಿಕೊಂಡರು. ಆಗ ನಾನು ಹದಿನಾರು ವರ್ಷದವಳಾಗಿದ್ದೆ. ಆ ಮೊದಲೇ ಅವರಿಗೆ ಮದುವೆಯಾಗಿ ಹೆಂಡತಿ ತೀರಿ ಹೋಗಿದ್ದರು. ನನ್ನ ಹಾಡುಗಾರಿಕೆಗೆ ಮೆಚ್ಚಿ ಮನಸೋತು ಪದ್ಧತಿ ಪ್ರಕಾರ ನನ್ನನ್ನು ಸ್ವೀಕರಿಸಿದರು. ನನ್ನ ಸಂಗೀತ ಗುರಿ ಸಾಧನೆಗಾಗಿ ತಾಯಿಯ ಬಳಿ ಇರುವುದಕ್ಕೂ ಸಮ್ಮತಿಸಿದರು. ಸಹಜವಾಗೇ ಅವರ ತಂದೆ- ತಾಯಿಯರಿಂದ ಅವರ ಬಳಗದಲ್ಲಿಯೇ ಮದುವೆಯಾಗುವಂತೆ ಒತ್ತಾಯ ಬಂತು. ಆಗ ನಾನೇ, ತಂದೆತಾಯಿಯರ ಮನಸ್ಸು ನೋಯಿಸಬೇಡಿ. ಆ ಮದುವೆಗೂ ಒಪ್ಪಿಕೊಳ್ಳಿ ಎಂದಾಗ ಅವರ ಅಕ್ಕನ ಮಗಳನ್ನು ಮದುವೆ ಮಾಡಿಕೊಂಡರು. ಹೀಗಾಗಿ ಯಜಮಾನರ ತಂದೆ-ತಾಯಿಯರಿಗೆ ಕೂಡ ನನ್ನ ಮೇಲೆ ಪ್ರೀತಿ ಬೆಳೆದು ಆಗಾಗ ತಮ್ಮ ಮನೆಗೆ ಕರೆಸಿಕೊಳ್ಳತೊಡಗಿದರು.... .
ನನ್ನ ಯಜಮಾನರು ಅನೇಕ ಪ್ರಕಾರದ ವ್ಯವಹಾರ ಹಮ್ಮಿಕೊಂಡು ಬಹಳ ಲುಕ್ಸಾನಿಗೆ ಗುರಿಯಾದರು. ಆದರೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ 12 ಸಾವಿರ ಖರ್ಚು ಮಾಡಿ ನನಗೊಂದು ನೆಲೆ, ನೆರಳು ಮಾಡಿಕೊಟ್ಟಿದ್ದರು. ಆ ಮನೆಗಾಗಿ ಬ್ಯಾಂಕಿನಲ್ಲಿ ಸಾಲ ಮಾಡಿದ್ದರು. ಕಾಲಕಾಲಕ್ಕೆ ಬಡ್ಡಿ, ಕಂತಿನ ಅಸಲು ತೀರಿಸಬೇಕಾಗುತ್ತಿತ್ತು. ಮನೆಯ ಸಾಲವನ್ನು ತೀರಿಸುವ ಕಷ್ಟದಲ್ಲಿ ಮನೆ ನಮಗೆ ಆಸರೆಯಾಗಿತ್ತು ಎಂಬ ಪ್ಲಸ್ ಅಂಶವೇ ಮರೆತು ಹೋಗುತ್ತಿತ್ತು.... .
ಜೀವನ ದರ್ಶನ : ನನ್ನ ಬದುಕಿನ ಹಾಡಿನಲ್ಲಿ ಜೋಗಿಯಾ, ತೋಡಿಗಳೂ ಇವೆ. ಬಸಂತ ಬಲಹಾರವೂ ಇದೆ. ಭೈರವಿ ಅಂತೂ ಇದ್ದದ್ದೆ. ಜೋಡುರಾಗದ ಬೆಡಗುಗಳಿಗಿಂತ ಸಾದಾ ರಾಗದ ಸೊಗಸು ಇಷ್ಟ ....
ತಮಗೆ ಸಂಗೀತ ಕಲಿಸಲು ತಾಯಿ ಪಟ್ಟ ಕಷ್ಟ, ತಮ್ಮ ಚಿಕ್ಕ ಸೋದರಮಾವ ತಾಯಿಯಂತೆ ನೋಡಿಕೊಂಡದ್ದು, ತಮ್ಮ ಗುರು ಸವಾಲೀ ಗಂಧರ್ವರು ಸಂಗೀತ ಕಲಿಸಿದ್ದನ್ನು ಗಂಗೂಬಾಯಿ ಸ್ಮರಿಸಿದ್ದಾರೆ. ನನ್ನ ಮೊದಲನೆಯ ಸಂಗೀತ ಕಚೇರಿ. ಗುರು ಸಮ್ಮುಖದಲ್ಲಿ ತಂಬೂರಿ ಹಿಡಿದು ಸಾ... ಹಚ್ಚುತ್ತಲೇ ಸೋತು ಹೋಗಿದ್ದೆ. ಆಗ ಆತ್ಮವಿಶ್ವಾಸವೇ ಹೊರಟುಹೋಗಿತ್ತು. ಗುರುಗಳೇ ನನಗೆ ಈ ಆತ್ಮವಿಶ್ವಾಸವನ್ನು ಕುದುರಿಸಿದರು. ಈ ಹೊತ್ತು ನಾನೇನಾಗಿದ್ದೇನೋ ಅದು ನನ್ನ ಗುರುವಿನ ಕೃಪೆ, ತಾಯ ಹಾರೈಕೆಗಳು, ಸೋದರಮಾವನ ಸದಿಚ್ಛಾ- ಸತತ ಸಹಾಯ, ಸಹಕಾರಗಳು ಎಂದು ನೆನೆಯುತ್ತಾರೆ.
ಇಂದಿನ ಕಾಲದಲ್ಲಿ ಒಳ್ಳೆಯ ಶಿಷ್ಯರು ಸಿಗುವುದು ದುರ್ಲಭವೇ ಆಗಿದೆ. ರೆಡಿಯೋ ಸ್ಟಾರ್ ಆಗಬೇಕು, ಟಿವಿ ಆರ್ಟಿಸ್ಟ್ ಆಗಬೇಕು, ಸಿನಿಮಾ ಪ್ಲೇ ಬ್ಯಾಕ್ ಹಾಡಬೇಕು ಎಂಬೆಲ್ಲಾ ಹಂಬಲಗಳಲ್ಲಿ ಶಾಸ್ತ್ರೀಯ ಸಾಧನೆ ಮೂಲೆಗೆ ಕೂಡುತ್ತದೆ. ನಮಗೆಲ್ಲಾ ಯೋಗ್ಯ ಗುರುಗಳು ಸಿಗಬೇಕಾದರೆ ಹಿರಿಯರ ಪುಣ್ಯ ಎಲ್ಲಾ ಖರ್ಚಾಯಿತು. ಆದರೆ ಈಗಿನ ಸಂಗೀತ ಹವ್ಯಾಸಿಗಳಿಗೆ ಮೊದಲು ಟಿವಿ, ರೇಡಿಯೋದಲ್ಲಿ ಪ್ರಸಾರ ಪಡೆದು ಪ್ರಸಿದ್ಧಿ ಗಿಟ್ಟಿಸುವ ಆಸೆ ಎಂಬ ವಾಕ್ಯಗಳು ಈಕೆಯ ಬದುಕಿನ ಹಾಡಿನ ಉದ್ದೇಶವನ್ನು ಸಾರುತ್ತವೆ.
ಮುಖಪುಟ / ಸಾಹಿತ್ಯ ಸೊಗಡು![]()
![]()












Click it and Unblock the Notifications