ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ವೈದ್ಯರ ಪಾತ್ರ ಮಹತ್ವದ್ದು: ಎಚ್ಚೆಸ್ಕೆ
ಮೈಸೂರು : ನಗರದ ಮಹಾರಾಜಾ ಕಾಲೇಜು ಶತಮಾನೋತ್ಸವ ಭವನದಲ್ಲಿ ಒಂದು ಕಾರ್ಯಕ್ರಮ. ಅದೂ ಪುಸ್ತಕ ಬಿಡುಗಡೆ ಸಮಾರಂಭ. ಇದು ಕತೆ, ಕಾದಂಬರಿ, ಕವನವಲ್ಲ. ಪ್ರತಿಯಾಬ್ಬ ತಂದೆ ತಾಯಿಗೂ ತಮ್ಮ ಮಕ್ಕಳನ್ನು ಪೋಷಿಸುವುದು ಹೇಗೆ ಎಂಬ ಮಾಹಿತಿ ನೀಡುವ ಕಿರುಹೊತ್ತಗೆ. ಲೇಖಕರು ಡಾ. ಯು.ಜಿ. ಶೈಣೈ. ಪುಸ್ತಕದ ಹೆಸರು ‘ನಿಮ್ಮ ಮಗು’. ರುಕ್ಮಿಣಿ ಗೋವಿಂದ ಶೆಣೈ ಟ್ರಸ್ಟ್ ಈ ಪುಸ್ತಕ ಬಿಡುಗಡೆ ಸಮಾರಂಭ ಏರ್ಪಡಿಸಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ಅಂಕಣಕಾರ, ವಿಮರ್ಶಕ ಎಚ್ಚಸ್ಕೆ ವಹಿಸಿದ್ದರು. ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ವೈದ್ಯರ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಅವರು ವಿವರಿಸಿದರು. ಕೃತಿಯಲ್ಲಿ ಮಗುವಿನ ಬೆಳವಣಿಗೆ, ತಾರಣ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿರುವುದೇ ಅಲ್ಲದೆ, ಮಕ್ಕಳಿಗೆ ರೋಗ ಹರಡದಂತೆ ತಡೆಯುವುದು ಹೇಗೆ ಎಂಬ ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸಿರುವ ಲೇಖಕರನ್ನು ಮನಸಾರೆ ಅಭಿನಂದಿಸಿದರು.
ಪುಸ್ತಕವನ್ನು ಬಿಡುಗಡೆ ಮಾಡಿದ ಆಂದೋಲನ ಪತ್ರಿಕೆಯ ಸಂಪಾದಕರಾದ ರಾಜಶೇಖರ ಕೋಟಿ ಅವರು ಈ ಪುಸ್ತಕವು ಪಾಲಕರಿಗೆ ತಮ್ಮ ಮಗುವನ್ನು ಹೇಗೆ ಸಲಹಬೇಕು. ಮಕ್ಕಳ ಬೇಕು - ಬೇಡಗಳು ಏನು ಎಂಬ ಮಾಹಿತಿ ಒದಗಿಸುವ ಕೈಪಿಡಿಯಾಗಿದ್ದು, ಒಂದು ಸಂಗ್ರಹಾಯೋಗ್ಯ ಸಂಚಿಕೆಯಾಗಿ ಹೊರಹೊಮ್ಮಿದೆ ಎಂದು ಶ್ಲಾಘಿಸಿದರು.
‘ನಿಮ್ಮ ಮಗು’ ಕೃತಿಯ ಲೇಖಕರಾದ ಡಾ. ಯು.ಜಿ. ಶೆಣೈ ಅವರು ಪುಸ್ತಕ ಬರೆಯುವಾಗ ನಡೆದ ಘಟನಾವಳಿಗಳನ್ನು ಈ ಸಂದರ್ಭದಲ್ಲಿ ಸಭಿಕರೊಂದಿಗೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಡಾ. ವಿಜಯದೇವ್, ಡಾ. ಜಯೋಬಿರಾವ್, ವೀಣಾ ಜಿ. ನಾಯಕ್ ಹಾಗೂ ಸುರೇಂದ್ರ ಜಿ. ಶೈಣೈ ಪಾಲ್ಗೊಂಡಿದ್ದರು.
(ಮೈಸೂರು ಪ್ರತಿನಿಧಿಯಿಂದ)