ಬಿ.ಎಂ.ಶ್ರೀಕಂಠಯ್ಯ ಪ್ರತಿಷ್ಠಾನದಿಂದ ಎರಡು ಪುಸ್ತಕಗಳ ಬಿಡುಗಡೆ
ಬೆಂಗಳೂರು : ಕೆ. ನರಸಿಂಹಮೂರ್ತಿ ಅವರ ‘ಕನ್ನಡ ಸಾಹಿತ್ಯ ವಿಹಾರ’ ಹಾಗೂ ವಿ. ಸೀತಾರಾಮಯ್ಯ ಅವರ ‘ಪಾಶ್ಚಾತ್ಯ ನಾಟಕ ವಿವೇಚನೆಗಳು’ ಎಂಬ ಎರಡು ಪುಸ್ತಕಗಳನ್ನು ಬೆಂಗಳೂರಿನಲ್ಲಿರುವ ಬಿ.ಎಂ.ಶ್ರೀ. ಪ್ರತಿಷ್ಠಾನ ಹೊರತಂದಿದೆ.
ನರಸಿಂಹರಾಜಾ ಕಾಲೋನಿಯಲ್ಲಿರುವ ಬಿ.ಎಂ.ಶ್ರೀ. ಪ್ರತಿಷ್ಠಾನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಖ್ಯಾತ ಲೇಖಕ ಪ್ರೊ. ಎಂ.ಎಚ್. ಕೃಷ್ಣಯ್ಯ ಹಾಗೂ ಹಾಸ್ಯ ಸಾಹಿತಿ ಪ್ರೊ. ಅ.ರಾ. ಮಿತ್ರ ಅವರು ಈ ಪುಸ್ತಕಗಳನ್ನು ಬಿಡುಗಡೆ ಮಾಡಿದರು.
‘ಕನ್ನಡ ಸಾಹಿತ್ಯ ವಿಹಾರ’ ಪುಸ್ತಕ ಬಿಡುಗಡೆ ಮಾಡಿದ ಪ್ರೊ. ಕೃಷ್ಣಯ್ಯ ಅವರು, ಕೆ. ನರಸಿಂಹ ಮೂರ್ತಿ ಅವರು ಯಾವುದೇ ಸಿದ್ಧಾಂತ ಅಥವಾ ಚಳವಳಿಗೆ ಅಂಟಿಕೊಳ್ಳದೆ ಕೃತಿಯ ಜತೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ ಎಂದು ವಿಶ್ಲೇಷಿಸಿದರು.
ವಿ.ಸೀ. ಅವರ ‘ಪಾಶ್ಚಾತ್ಯ ನಾಟಕ ವಿವೇಚನೆಗಳು’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅ.ರಾ. ಮಿತ್ರ ಅವರು, ವಿ.ಸೀ. ಅವರು ಇಂಗ್ಲಿಷ್ ನಾಟಕಗಳ ಬಗ್ಗೆ ಉತ್ತಮ ಸಾಹಿತ್ಯ ರಚಿಸಿದ್ದಾರೆ. ಅವರು ಕೃತಿಯ ಮೂಲ ಪರಿಚಯ ಮಾಡಿಸಿದ ನಂತರವೇ ವಿಮರ್ಶೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರೊ. ಎಲ್.ಎಸ್. ಶೇಷಗಿರಿರಾವ್, ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ, ಪ್ರೊ. ನಾ. ಗೀತಾಚಾರ್ಯ ಮೊದಲಾದವರು ಪಾಲ್ಗೊಂಡಿದ್ದರು. ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ನಡೆದ ಈ ಸರಳ ಸಮಾರಂಭ ಸುಂದರವಾಗಿ ಮೂಡಿಬಂತು.
(ಇನ್ಫೋ ವಾರ್ತೆ)