ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಂಡು ಮಲ್ಲಿಗೆಯದಂಡೆಯನು ಹಿಂಡಿದವರು

By Staff
|
Google Oneindia Kannada News

* ಸತ್ಯವ್ರತ ಹೊಸಬೆಟ್ಟು

ಬತ್ತಿದ ಕೆರೆಯಂಗಳದಲಿ
ಹಾಡುಹಕ್ಕಿ ಸತ್ತಿದೆ
ಅದರ ಕತೆಯ ಕೇಳಲಿಕ್ಕೆ
ಯಾರಿಗೆ ಪುರುಸೊತ್ತಿದೆ ?
- ಕೆ.ಎಸ್‌.ನ.

ಇತ್ತೀಚಿನ ದಿನಗಳಲ್ಲಿ ಕನ್ನಡಿಗರಿಗೆ ಒದಗಿ ಬಂದ ಎರಡು ಮಧುರ ಸಂಗತಿಗಳ ಪೈಕಿ ಮೊದಲನೆಯದು ‘ಭಾವನಾ’ ಎಂಬ ಮಾಸ ಪತ್ರಿಕೆ. ಎರಡನೆಯದು ‘ಈ ಟೀವಿ’. ಎರಡರ ಹಿಂದೆಯೂ ಆರಂಭದಲ್ಲಿ ಕೆಲಸ ಮಾಡಿದ ಕೈ ಒಂದೇ- ‘ಜಯಂತ ಕಾಯ್ಕಿಣಿ’. ಇವೆರಡೂ ಆರಂಭದಲ್ಲಿ ಕನ್ನಡ ಸದಭಿರುಚಿಯ ಮನಸ್ಸುಗಳನ್ನು ಮಾಗಿಸುವ ಮಾಧ್ಯಮಗಳಂತೆ ಕಂಡಿದ್ದವು.

ಇವತ್ತು ಭಾವನಾ ಸತ್ತಿದೆ. ಈ ಟೀವಿ ಇದ್ದೂ ಸತ್ತಂತಿದೆ !

ಭಾವನಾ ಪತ್ರಿಕೆ ಕರ್ನಾಟಕದ ಎಲ್ಲರ ಕುತೂಹಲ ಕೆರಳಿಸಿತ್ತಷ್ಟೇ ಅಲ್ಲ, ಅವರಲ್ಲಿ ಆಸಕ್ತಿ ಮೂಡಿಸಿತ್ತು ಕೂಡ. ಗ್ರಾಮೀಣ ಪ್ರದೇಶದ ಹುಡುಗ ಹುಡುಗಿಯರು ಅದನ್ನು ಪ್ರೀತಿಯಿಂದ ಓದುತ್ತಿದ್ದರು. ಮತ್ತೆ ಸಾಹಿತ್ಯಿಕ ವಾತಾವರಣ ಎಲ್ಲೆಡೆ ಮೂಡೀತೇನೋ ಎಂಬ ಭರವಸೆ ಎಲ್ಲರಲ್ಲಿತ್ತು. ಬರೆಯುವುದನ್ನೇ ನಿಲ್ಲಿಸಿದ ಹಲವು ಹಳೆ ಹೊಸ ಕತೆಗಾರರು ಕತೆ ಬರೆಯುವುದಕ್ಕೆ ಶುರು ಮಾಡಿದ್ದರು. ಹೀಗೆ ಮತ್ತೆ ಎಪ್ಪತ್ತರ ದಶಕದ ಸಾಹಿತ್ಯಿಕ ವಾತಾವರಣ ಮರಳೀತು ಎಂಬ ನಿರೀಕ್ಷೆ ಹಲವರಲ್ಲಿತ್ತು.

ಅಷ್ಟು ಹೊತ್ತಿಗೆ ಭಾವನಾ ನಿಂತ ಸುದ್ದಿ ಬಂತು. ವೈಯಕ್ತಿಕವಾಗಿ ಇದು ಪತ್ರಿಕೋದ್ಯಮದಲ್ಲಿರುವ ಎಲ್ಲ ಮಿತ್ರರಿಗೂ ಆಘಾತ ತಂದ ಸುದ್ದಿ. ಇಲ್ಲಿ ಗುಣಮಟ್ಟ , ಸಜ್ಜನಿಕೆ, ಸದಭಿರುಚಿ, ಪ್ರಸಾರ, ಪ್ರತಿಭೆ -ಇವೆಲ್ಲಕ್ಕಿಂತ ಮಾಲೀಕರ ಮರ್ಜಿಯಷ್ಟೇ ಮುಖ್ಯ ಎಂದು ತೋರಿಸಿಕೊಟ್ಟ ಇತ್ತೀಚಿನ ಘಟನೆ ಅದು. ಸರ್ಕ್ಯುಲೇಷನ್‌ ವಿಭಾಗ ಮನಸ್ಸು ಮಾಡಿದ್ದರೆ ಪತ್ರಿಕೆಯ ಪ್ರಸಾರ ತಿಂಗಳಿಗೆ ಒಂದು ಲಕ್ಷ ಆಗುವಂತೆ ಮಾಡಬಹುದಾಗಿತ್ತು.

ಆದರೆ ಏನು ಲಾಭ ಅಂತ ಕೇಳುತ್ತಾರೆ ಪತ್ರಿಕೆಯ ಮಾಲೀಕರು. ಒಂದು ಲಕ್ಷ ಪತ್ರಿಕೆ ತಿಂಗಳಿಗೆ ಬರುವ ಲಾಭ ಒಂದು ಲಕ್ಷ ರೂಪಾಯಿ ಮಾತ್ರ. ದಿನಕ್ಕೆ ನಾಲ್ಕೈದು ಲಕ್ಷ ಗಿಟ್ಟಿಸುವ- ಕಳಕೊಳ್ಳುವ ಮಂದಿಗೆ ಅದೊಂದು ಲೆಕ್ಕವೇ. ಇವತ್ತಿನ ಕಂಪ್ಯೂಟರ್‌ ವೃತ್ತಿಗಳಲ್ಲಿ ಕೆಲವರ ಸಂಬಳವೇ ಒಂದು ಲಕ್ಷ ದಾಟುತ್ತದಲ್ಲ !

ಈ ಲೆಕ್ಕಾಚಾರಕ್ಕೆ ಸಿಕ್ಕಿ... ಭಾವನಾ ಎಂಬ ಹಕ್ಕಿ ಸಾವನ್ನಪ್ಪಿದರೆ, ಈ ಟೀವಿ ಮತ್ತೊಂದು ರೀತಿ ಸಾಯುತ್ತಿದೆ. ಈ ಟೀವಿಯಲ್ಲಿ ಆರಂಭದಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಪೈಕಿ ಗಮನ ಸೆಳೆದದ್ದು ‘ಸರೋಜಿನಿ’. ಅದನ್ನು ಎಲ್ಲ ಪ್ರದೇಶದ ಮಂದಿ ಆಸ್ಥೆಯಿಂದ ನೋಡಿದರು. ಸೀರಿಯಲ್‌ ಅಂದ್ರೆ ಹೀಗಿರಬೇಕು ಅಂತ ಮೆಚ್ಚಿಕೊಂಡರು. ಆದರೆ ಈ ಟೀವಿ ಮಾತ್ರ ಸರೋಜಿನಿ ಅಕಾಲ ಮೃತ್ಯುವಿಗೆ ಈಡಾಗುವಂತೆ ಮಾಡಿತು. ಅದರ ಜೊತೆತೊತೆಗೇ ಪ್ರಸಾರವಾಗುತ್ತಿದ್ದ ‘ಸೃಷ್ಟಿ ’ ಲಯವಾಯಿತು.

ಈಗ ಈ ಟೀವಿಯಲ್ಲಿ ಪಾಪ್ಯುಲರ್‌ ಸೋಪ್‌ಗಳದೇ ಸಾಮ್ರಾಜ್ಯ. ಕಾಗಕ್ಕ, ಗುಬ್ಬಕ್ಕ ಕತೆಯ ಸುಟ್ಟು ಬೂದಿ ಮಾಡುತ್ತೇನೆ ಎಂಬ ಮಂತ್ರವಾದಿಯ ಕತೆಯಿರುವ ಬಾಂಧವ್ಯ, ಕತೆಯೇ ಇಲ್ಲದ ಗುರುದಾಸ್‌ ಶೆಣೈ ಎಂಬ ವ್ಯಾಪಾರಿ, ದಿನೇಶ್‌ ಬಾಬು ಪರವಾಗಿ ನಿರ್ದೇಶಿಸುತ್ತಿರುವ ಮನೆಮನೆ ಕತೆ, ಸಂಚಾರವೇ ಇಲ್ಲದ, ಎಲ್ಲರೂ ಕೂತು ನಿಂತು ಮಾತನಾಡುವ ಬೆಳ್ಳಿತೆರೆ, ಅಳುವಾಗಲೂ ನಗೆ ತರಿಸುವ, ಅಪಹಾಸ್ಯಗಳ ಮಿಂಚಿನ ಬಳ್ಳಿ!

ಸದಭಿರುಚಿ ಯಾರಿಗೆ ಬೇಕು ? ಅದರಲ್ಲೂ ದುಡ್ಡಿನ ರುಚಿ ಹತ್ತಿದ ಮಂದಿಗೆ ಸದಭಿರುಚಿ ಎಲ್ಲಿ ರುಚಿಸೀತು?

ವಾರ್ತಾಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X