ಧಾರವಾಡದ ಸಮಾಜ ಪುಸ್ತಕಾಲಯಕ್ಕೆ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ
ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ ಪ್ರತಿವರ್ಷ ನೀಡುವ ಉತ್ತಮ ಪ್ರಕಾಶಕ ಪ್ರಶಸ್ತಿ-2001 ಧಾರವಾಡ ಮೂಲದ ಸಮಾಜ ಪುಸ್ತಕಾಲಯಕ್ಕೆ ಸಂದಿದ್ದು, ಸೋಮವಾರ (ಆ.26) ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅರಣ್ಯ ಖಾತೆ ಸಚಿವ ಕೆ. ಎಚ್. ರಂಗನಾಥ್ ಅವರು ಉತ್ತಮ ಪ್ರಕಾಶಕ ಪ್ರಶಸ್ತಿಯನ್ನು ಸಮಾಜ ಪುಸ್ತಕಾಲಯದ ಮನೋಹರ್ ಗಣೇಕರನ ಅವರಿಗೆ ಸೋಮವಾರ ಪ್ರದಾನ ಮಾಡಿದರು. ಸಾಹಿತ್ಯ ಅಭಿವೃದ್ಧಿಗಾಗಿ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ ಪ್ರಕಾಶನಕ್ಕೆ ಪ್ರಾಧಿಕಾರವು ಪ್ರತಿವರ್ಷವೂ ಉತ್ತಮ ಪ್ರಕಾಶಕ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.
ಸಮಾಜ ಪುಸ್ತಕಾಲಯವು ಜ್ಞಾನ ಪೀಠ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿಗಳೂ ಸೇರಿದಂತೆ ಹಲವು ಕನ್ನಡ ಕೃತಿಗಳನ್ನು ಪ್ರಕಟಿಸಿದೆ. ಪುಸ್ತಕಾಲಯದ ಸಾಧನೆಯನ್ನು ಸಚಿವ ರಂಗನಾಥ್ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಸಚಿವರು ವಾರ್ತಾ ಪತ್ರ ಎಂಬ ಕನ್ನಡ ಪುಸ್ತಕ ಪ್ರಾಧಿಕಾರದ ಸುದ್ದಿ ಪತ್ರವನ್ನೂ ಬಿಡುಗಡೆ ಮಾಡಿದರು. ಕಳೆದ ವರ್ಷ ಈ ಪ್ರಶಸ್ತಿ ಸಪ್ನ ಬುಕ್ ಹೌಸ್ಗೆ ಸಂದಿತ್ತು.
(ಇನ್ಫೋ ವಾರ್ತೆ)