ಕನ್ನಡದಲ್ಲಿ ಷೇಕ್ಸ್ಪಿಯರ್ ಪುನರಪಿ ಜನನಂ
ಬೆಂಗಳೂರು : ಕನ್ನಡದ ಕವಿಗಳಿಗೆ ಸದಾ ಕಾಡುವ ವಿಶ್ವದ ಶ್ರೇಷ್ಠ ಕವಿಗಳಲ್ಲಿ ಒಬ್ಬನಾದ ಷೇಕ್ಸ್ಪಿಯರ್, ತನ್ನ ಸುನೀತಗಳ ಮೂಲಕ ಕನ್ನಡದಲ್ಲಿ ಮತ್ತೆ ಜೀವಗೊಂಡಿದ್ದಾನೆ.
ಕನ್ನಡ ಭವನದ ನಯನ ಸಭಾಂಗಣದಲ್ಲಿ ಬುಧವಾರ (ನ.20) ನಡೆದ ಸಮಾರಂಭದಲ್ಲಿ ಶಿಕ್ಷಣ ತಜ್ಞ, ಸಾಹಿತಿ ಪ್ರೊ.ಎಸ್.ಆರ್.ರೋಹಿಡೇಕರ್ ಅವರ ‘ಷೇಕ್ಸ್ಪಿಯರ್ನ ಸಮಗ್ರ ಸಾನೆಟ್ಗಳು ಹಾಗೂ ಅವುಗಳ ಅನುವಾದ’ ಮತ್ತು ಗೋಲ್ಡ್ಸ್ಮಿತ್ರ ‘ಸೋತು ಗೆದ್ದವಳು’ ಕೃತಿ ಬಿಡುಗಡೆಯಾದವು. ಸಪ್ನ ಬುಕ್ ಹೌಸ್ ಈ ಎರಡೂ ಕೃತಿಗಳನ್ನು ಪ್ರಕಟಿಸಿದೆ.
ಸಾನೆಟ್ಗಳ ಪುಸ್ತಕವನ್ನು ಬಿಡುಗಡೆ ಮಾಡಿದ ಹಿರಿಯ ವಿಮರ್ಶಕ ಪ್ರೊ.ಎಲ್.ಎಸ್.ಶೇಷಗಿರಿರಾವ್ ಅವರು, ಷೇಕ್ಸ್ಪಿಯರ್ನ ಸಮಗ್ರ ಸಾನೆಟ್ಗಳನ್ನು ಸಮರ್ಥವಾಗಿ ಕನ್ನಡೀಕರಿಸುವ ಮೂಲಕ ರೋಹಿಡೇಕರ್ ಅವರು ಕನ್ನಡ ನುಡಿಗೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಸಾನೆಟ್ ಪ್ರಕಾರವನ್ನು ಸೃಷ್ಟಿಸಿದ ಷೇಕ್ಸ್ಪಿಯರ್ ಸಾನೆಟ್ಗಳ ಬೆಳವಣಿಗೆಗೂ ಕಾರಣನಾದ. ಸಾನೆಟ್ ಅನುವಾದ ಸುಲಭವಾದುದಲ್ಲ . ಷೇಕ್ಸ್ಪಿಯರ್ನ ಸಾನೆಟ್ಗಳ ಅನುವಾದ ಸಾಹಿತಿಗಳಿಗಲ್ಲದೆ ಬೇರೆಯವರಿಗೆ ಸಾಧ್ಯವೂ ಇಲ್ಲ . ಇಂಥ ಸವಾಲಿನ ಕೆಲಸದಲ್ಲಿ ರೋಹಿಡೇಕರ್ ಗೆದ್ದಿದ್ದಾರೆ ಎಂದು ಶೇಷಗಿರಿರಾವ್ ಶ್ಲಾಘಿಸಿದರು.
ಷೇಕ್ಸ್ಪಿಯರ್ನ ಎಲ್ಲಾ ಸಾನೆಟ್ಗಳನ್ನು ಅನುವಾದ ಮಾಡಬೇಕೆಂಬುದು ತಮ್ಮ ಕನಸಾಗಿತ್ತು . 60 ವರ್ಷಗಳ ಕನಸು ಈಗ ನನಸಾಗಿದೆ ಎಂದು ರೋಹಿಡೇಕರ್ ಹೇಳಿದರು. ಸಪ್ನಾ ಬುಕ್ಹೌಸ್ನ ನಿತಿನ್ ಎಸ್.ಷಾ ಕಾರ್ಯಕ್ರಮದಲ್ಲಿ ಹಾಜರಿದ್ದರು. ನಾಟಕಕಾರ ಎ.ಎಸ್.ಮೂರ್ತಿ ಸೋತುಗೆದ್ದವಳು ಕೃತಿಯನ್ನು ಬಿಡುಗಡೆ ಮಾಡಿದರು.
(ಇನ್ಫೋ ವಾರ್ತೆ)